ಬೆಂಗಳೂರು:
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಾದ ಮನೋಹರ್ ಯಡವೆ ಮತ್ತು ಪರಶುರಾಮ್ ವಾಗ್ಮೋರೆಮನಾವು ಕೊಲೆಮಾಡಿಲ್ಲ ಕೊಲೆ ಕೃತ್ಯ ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಿದ್ದಾರೆ.
ಆರೋಪಿಗಳನ್ನು ಕೋಕಾ ನ್ಯಾಯಾಲಯಕ್ಕೆ ಹಾಜರುಪಡಿಸಲು ಶನಿವಾರ ವಿಶೇಷ ತನಿಖಾತಂಡ(ಎಸ್ಐಟಿ)ದ ಅಧಿಕಾರಿಗಳು ಕರೆತಂದ ವೇಳೆ ಮಾಧ್ಯಮವರನ್ನು ನೋಡಿದ ಪರಶುರಾಮ್ ವಾಗ್ಮೋರೆ, ನಾವು ಏನು ಮಾಡಿಲ್ಲ, ನಾವೆಲ್ಲ ನಿರಪರಾಧಿಗಳು, ಹಿಂದೂ ಪರ ಸಂಘಟನೆಗಳಲ್ಲಿ ಇದ್ದಿದ್ದು ನಿಜ.
ಆದರೆ ಕೊಲೆ ಮಾಡುವ ಮಟ್ಟಕ್ಕೆ ಹೋಗುವುದಿಲ್ಲ ನಮಗೂ ಗೌರಿ ಹತ್ಯೆಗೂ ಏನು ಸಂಬಂಧ ಇಲ್ಲ ಸುಮ್ಮನೆ ನಮ್ಮನ್ನು ತಂದು ಗುರಿ ಮಾಡುತ್ತಿದ್ದಾರೆ. ಒಬ್ಬರು ಹೊಡದರೆ ಮತ್ತೊಬ್ಬರು ರಾಜಿ ಸಂಧಾನ ಮಾಡುತ್ತಿದ್ದಾರೆ ನಿಮ್ಮ ಫ್ಯಾಮಿಲಿಗೆ 25 ಲಕ್ಷ, 30 ಲಕ್ಷ ಕೊಟ್ತಿವಿ ಒಪ್ಪಿಕೊಳ್ಳಿ ಎನ್ನುತ್ತಿದ್ದಾರೆ ಎಂದು ಒತ್ತಡ ತರುತ್ತಿದ್ದಾರೆ ಎಂದು ಹೇಳಿದ್ದಾನೆ.
ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳದೇ ಇದ್ದಲ್ಲಿ ನಿಮ್ಮ ಅಣ್ಣ ಅಥವಾ ತಮ್ಮ ಅಥವಾ ಗೆಳೆಯರನ್ನು ತಂದು ಕೊಲೆ ಕೃತ್ಯದಲ್ಲಿ ಸೇರುಸುತ್ತೇವೆ ಎಂದು ಟಾರ್ಚರ್ ಕೊಟ್ಟಿದ್ದಾರೆ. 8 ದಿನ ಟಾರ್ಚರ್ ಕೊಟ್ಟಿದ್ದಾರೆ. ಖಾಲಿ ಪೇಪರ್ ಮೇಲೆ ಸ್ಟೇಟ್ಮೆಂಟ್ ತಗೊಂಡಿದ್ದಾರೆ, ಖಾಲಿ ಪೇಪರ್ನಲ್ಲಿ ಸಹಿ ಪಡೆದಿದ್ದಾರೆ.
ಅವರೆ ಹೇಳಿಕೊಟ್ಟಿದ್ದನ್ನು ಹೇಳಿಸಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಮ್ಮ ಕುಟುಂಬದ ಸದಸ್ಯರಿಗೆ ಏನಾದರೂ ಆದರೆ ಎಸ್ಐಟಿ ಹೊಣೆ. ನನ್ನ ತಾಯಿ ಹಾಸಿಗೆ ಹಿಡಿದಿದ್ದಾರೆ. ಇದುವರೆಗೂ ಚೇತರಿಸಿಕೊಂಡಿಲ್ಲ. ಇದಕ್ಕೆಲ್ಲಾ ಯಾರು ಹೊಣೆ? ಇಲ್ಲಿರೋರು ಯಾರೂ ನಮಗೂ ಪರಿಚಯವೇ ಇಲ್ಲ. ಫೋನ್ ಲಿಂಕ್ ಸಹ ಇಲ್ಲ. ಎಲ್ಲರನ್ನೂ ಇಲ್ಲಿ ತಂದು ಗುಡ್ಡೆ ಹಾಕಿದ್ದಾರೆ. ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಮಾಡುತ್ತಿದ್ದಾರೆ ಎಂದು ಪರಶುರಾಮ್ ಹೇಳಿದ್ದಾನೆ.
ನನಗೂ ಇದಕ್ಕೂ ಸಂಬಂಧವೇ ಇಲ್ಲ. ಅನಾವಶ್ಯಕವಾಗಿ ನಮ್ಮನ್ನು ಇಲ್ಲಿ ತಂದು ಫಿಟ್ ಮಾಡಿದ್ದಾರೆ. ಬಂಧನವಾಗಿರುವವರು ನಮಗೆ ಪರಿಚಯವೇ ಇಲ್ಲ. ಇವರೆಲ್ಲಾ ಇಲ್ಲಿ ಬಂದ ಮೇಲೆಯೇ ನಮಗೆ ಗೊತ್ತಾಗಿದ್ದು, ಯಾರದ್ದೋ ಫೋಟೋ ತಂದು ತೋರಿಸಿ, ಇವರು ಪರಿಚಯ ಎಂದು ಒಪ್ಪಿಕೊಳ್ಳಿ ಎನ್ನುತ್ತಾರೆ ಮೇ 14ರಂದು ಬಂಧಿಸಿ, ಭಗವಾನ್ ಹತ್ಯೆ ಕೇಸ್ ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಮನೋಹರ್ ಯಡವೆ ಆರೋಪಿಸಿದ್ದಾನೆ.
ಎಸ್ಐಟಿ ಆರೋಪಿಗಳನ್ನು ಸೂಕ್ತ ಸಾಕ್ಷ್ಯಾಧಾರಗಳ ಮೇಲೆ ಬಂಧಿಸಿದ್ದಾರೆ. ಇದೂವರೆಗೂ ಆರೋಪಿಗಳು ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡಿರಲಿಲ್ಲ. ದಿಢೀರ್ ಎಂದು ಮಾಧ್ಯಮಗಳನ್ನು ಕಂಡಕೂಡಲೇ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/Killer-who-shot-Gauri-Lankesh-is-arrested.gif)