ನೆಲಮಂಗಲ
ಬೆಂಗಳೂರು ಗ್ರಾಮಾಂತರ ನೆಲಮಂಗಲ ಉಪ ವಿಭಾಗದ ಐದು ಪೊಲೀಸ್ ಠಾಣಾ ವ್ಯಾಪ್ತಿಯ 146 ರೌಡಿಗಳ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, ಎಲ್ಲಾ ರೌಡಿಗಳನ್ನು ಕರೆತಂದು ತೀವ್ರ ವಿಚಾರಣೆ ನಡೆಸಿ, ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.
ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಹಾಗೂ ಹೆಚ್ಚುವರಿ ಎಸ್.ಪಿ. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ 150ಕ್ಕೂ ಅಧಿಕ ಪೊಲೀಸರು ನೆಲಮಂಗಳ ಟೌನ್, ಗ್ರಾಮಾಂತರ, ಮಾದನಾಯಕನಹಳ್ಳಿ, ತ್ಯಾಮಗೊಂಡ್ಲು, ದಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗಳ 146 ರೌಡಿಗಳ ಮೇಲೆ ಮೇಲೆ ದಾಳಿ ನಡೆಸಿ ರೌಡಿಗಳನ್ನು ವಶಕ್ಕೆ ಪಡೆದು ಇಲ್ಲಿನ ಅಂಬೇಡ್ಕರ್ ಕ್ರೀಡಾಂಗಣಕ್ಕೆ ಕರೆ ತಂದು ವಿಚಾರಣೆ ನಡೆಸಿದರು.
ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ 30, ಗ್ರಾಮಾಂತರದ 33, ಮಾದನಾಯಕನಹಳ್ಳಿಯ 40, ತ್ಯಾಮ್ಲಗೊಂಡುವಿನ 21, ದಾಬಸ್ಪೇಟೆಯ 22 ರೌಡಿಗಳನ್ನು ಕರೆತರಲಾಗಿತ್ತು.
ಮಾದನಾಯಕನಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಖ್ಯಾತ ರೌಡಿ ರಾಮಾ ಅಲಿಯಾಸ್ ಪಾಯಿಸನ್ ರಾಮ ವಿರುದ್ಧ 28 ಪ್ರಕರಣಗಳು ದಾಖಲಾಗಿದ್ದು, ಈತನನ್ನು ತೀವ್ರ ವಿಚಾರಣೆ ನಡೆಸಿ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯ ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ ಬಂಡೆ ಮಂಜನ ವಿರುದ್ಧ 25 ಪ್ರಕರಣಗಳು ದಾಖಲಾಗಿದ್ದು, ಈತನ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಎಲ್ಲ ರೌಡಿಗಳ ಪೂರ್ವಾಪರ, ಈಗಿನ ಕೆಲಸ ಕಾರ್ಯ, ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಪಡೆದ ಎಸ್.ಪಿ. ಶಿವಕುಮಾರ್ ಅವರು, ಇನ್ನು ಮುಂದೆ ಬಾಲ ಬಿಚ್ಚಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ರೌಡಿ ಚಟುವಟಿಕೆಗಳನ್ನು ಇಲಾಖೆ ಸಹಿಸುವುದಿಲ್ಲ. ಕಾಲ ಕಾಲಕ್ಕೆ ಸ್ಥಳೀಯ ಠಾಣೆಗೆ ತೆರಳಿ ಸಹಿ ಹಾಕಬೇಕು ಎಂದು ಸೂಚಿಸಿದ್ದಾರೆ.
ಡಿವೈಎಸ್ಪಿ ಪಾಂಡುರಂಗ, ಸಿಪಿಐಗಳಾದ ಶಿವಣ್ಣ, ನಾಗರಾಜ್, ಪಿಎಸ್ಐಗಳಾದ ಮಂಜುನಾಥ್, ಕೃಷ್ಣಮೂರ್ತಿ, ಕುಮಾರಸ್ವಾಮಿ, ಶಂಕರ ನಾಯಕ್, ಮಂಜೇಗೌಡ, ವಸಂತ ಕುಮಾರ್, ರಾಘವೇಂದ್ರ ಮತ್ತಿತರ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
