ಹರಪನಹಳ್ಳಿ:
ಇಂದಿನ ಸೋಲು ಮುಂದಿನ ಗೆಲುವಿನ ಮೆಟ್ಟಿಲು ಎಂಬ ನಂಬಿಕೆಯೊಂದಿಗೆ ಹಲವಾಗಲು ತಾಲ್ಲೂಕು ಪಂಚಾಯಿತಿ ಉಪಚುನಾವಣೆಯಲ್ಲಿ ಮತದಾರರು ನೀಡಿರುವ ಫಲಿತಾಂಶವನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಎಂದು ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರರ ಹಿರಿಯ ಸಹೋದರಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ತಾಲ್ಲೂಕಿನ ಹಲವಾಗಲು ಗ್ರಾಮದಲ್ಲಿ ಭಾನುವಾರ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಜಂಟಿಯಾಗಿ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತಾ ಅರ್ಪಣೆ ಸಭೆಯಲ್ಲಿ ಅವರು ಮಾತನಾಡಿದರು.
`ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಕೇವಲ 134 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯರಬಾಳು ರುದ್ರಪ್ಪ ಅವರು ಸೋತಿದ್ದರೂ ಕಾಂಗ್ರೆಸ್ ಪಕ್ಷ ಈ ಭಾಗದಲ್ಲಿ ಗಟ್ಟಿ ನೆಲೆಯೂರಲು ಆರಂಭಿಸಿದೆ. ಎಂದು ಹೇಳಿದರು.
`ಚುನಾವಣೆ ಸೋಲಿನಿಂದ ಎದೆಗುಂದದೇ ಕಾರ್ಯಕರ್ತರು ಮತ್ತು ಮುಖಂಡರು ಪಕ್ಷ ಸಂಘಟನೆಯಲ್ಲಿ ತೊಡಗಬೇಕಿದೆ. ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರರು ಕೈಗೊಂಡ ಜನಪರ ಯೋಜನೆಗಳ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಲವಾಗಲು ತಾಲ್ಲೂಕು ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಗೊಳಪಡುವ ಕಣವಿ, ಒಳತಾಂಡ, ಗರ್ಭಗುಡಿ ತಾಂಡಾ, ಗರ್ಭಗುಡಿ, ತಾವರಗುಂದಿ ಗ್ರಾಮಗಳಿಗೆ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಜೆಡಿಎಸ್ ಮುಖಂಡ ಜಿ.ಗಣೇಶ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಯರಬಾಳು ರುದ್ರಪ್ಪ, ಮುಖಂಡರಾದ ಟಿ.ವೆಂಕಟೇಶ, ಕುರುವತ್ತೆಪ್ಪ ಮೇಷ್ಟ್ರು, ಕಿತ್ತೂರು ಕೊಟ್ರಪ್ಪ, ಶಿಂಗ್ರಳ್ಳಿ ಹನುಮಂತಪ್ಪ, ಕಾನಳ್ಳಿ ರುದ್ರಪ್ಪ, ನಾಗೇಂದ್ರಪ್ಪ, ಕರಿಬಸಪ್ಪ, ಮಂಜ್ಯಾನಾಯ್ಕ, ಇರ್ಫಾನ್ ಮುದಗಲ್, ಷಣ್ಮುಖನಾಯ್ಕ, ಕರಿಯಪ್ಪ, ಭೋವಿ ರೇಣುಕಮ್ಮ ಚಂದ್ರಪ್ಪ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
