ಬೆಂಗಳೂರು
ಮಾಜಿ ಸಚಿವ ಹಾಗು ಗುರುಮಿಟ್ಕಲ್ ಶಾಸಕ ಬಾಬುರಾವ್ ಚಿಂಚನಸೂರ್ ಅವರಿಂದ ಬೆದರಿಕೆ ಇದೆ ಎಂದು ಪೊಲೀಸರ ಮೊರೆಹೋಗಿದ್ದ ಮಹಿಳೆ ಬೆಂಗಳೂರಿನಲ್ಲಿ ಅಸಹಜವಾಗಿ ಸಾವಿಗೀಡಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಚೆಕ್ ಬೌನ್ಸ್ ಪ್ರಕರಣದಲ್ಲಿ 15ನೇ ಎಸಿಎಂಎಂ ಕೋರ್ಟಿನಿಂದ ಜಾಮೀನು ಪಡೆದುಕೊಂಡಿರುವ ಬಾಬುರಾವ್ ಅವರ ವಿರುದ್ಧ ವಂಚನೆ ಹಾಗೂ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದ ಅಂಜನಾ ವಿ ಶಾಂತವೀರ ಅವರು ಅಸಹಜವಾಗಿ ಸಾವಿಗೀಡಾಗಿದ್ದಾರೆ.
ಅಂಜನಾ ಅವರು ಮನೆಯಲ್ಲಿ ಅವರು ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ ಮತ್ತು ಈ ಕುರಿತಾಗಿ ಚಂದ್ರಾಲೇಔಟ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಜವಳಿ ಮತ್ತು ಅಂತರಿಕ ಸಾರಿಗೆ, ಬಂದರು ಖಾತೆ ಸಚಿವ ಬಾಬುರಾವ್ ಚಿಂಚನಸೂರ್ ಅವರ ಮೇಲೆ ಕೋಟ್ಯಂತರ ರುಪಾಯಿ ವಂಚನೆ ಆರೋಪ ಹೊರೆಸಿದ್ದ ಅಂಜನಾ, ಕ್ರಮ ಜರುಗಿಸಲು ಅನುಮತಿ ನೀಡುವಂತೆ ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ದೂರು ನೀಡಿದ್ದರು. ಅಷ್ಟೆ ಅಲ್ಲ, ಸಚಿವ ಬಾಬುರಾವ್ ಚಿಂಚನಸೂರ್ ಕಡೆಯಿಂದ ನನಗೆ ಪ್ರಾಣ ಬೆದರಿಕೆ ಇದ್ದು ನನಗೆ ರಕ್ಷಣೆ ಒದಗಿಸಬೇಕಂದು ಎಂದು ಎಂಎನ್ ರೆಡ್ಡಿ ಅವರಿಗೆ ಮನವಿ ಮಾಡಿದ್ದರು.
ಅಂಜನಾ ವಿ. ಶಾಂತವೀರ್ ಅವರು ಸುಮಾರು 11 ಕೋಟಿ 88 ಲಕ್ಷ ರೂಪಾಯಿಗಳನ್ನು ಸಚಿವ ಬಾಬುರಾವ್ ಚಿಂಚನಸೂರ್ ಅವರು ಸಾಲ ರೂಪದಲ್ಲಿ ಪಡೆದುಕೊಂಡಿದ್ದರು. ಅದರೆ, ಹಲವಾರು ವರ್ಷಗಳು ಕಳೆದರೂ ಸಾಲ ವಾಪಸ್ ಮಾಡಿಲ್ಲ ಹಾಗೂ ಅವರು ನೀಡಿದ ಚೆಕ್ ಗಳು ಬೌನ್ಸ್ ಆಗಿದೆ. ಅವರು ಸಚಿವರಾಗಿದ್ದ ಕಾಲದಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಅನುಮತಿ ನೀಡಿ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಲ್ಲಿ ಅಂಜನಾ ಅವರು ಬೇಡಿಕೊಂಡಿದ್ದರು.
ಆದರೆ ನಂತರ ಈ ಪ್ರಕರಣಕ್ಕೆ ಕುರಿತಂತೆ ರಾಜ್ಯಪಾಲರ ಮೊರೆ ಹೋಗಲು ಕಾಗೋಡು ತಿಮ್ಮಪ್ಪ ಅವರು ಸೂಚಿಸಿದ್ದರು. “ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ಆಕೆಯ ಆರೋಪದ ವಿರುದ್ಧವೇ ನಾನು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ” ಎಂದು ಬಾಬುರಾವ್ ಅಂದು ಪ್ರತಿಕ್ರಿಯಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ