ಹುಳಿಯಾರು
ಹುಳಿಯಾರು ಬಸ್ ನಿಲ್ದಾಣದಲ್ಲಿನ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಚರಣೆಯ ವೇಳೆ ವಾಣಿಜ್ಯ ಮಳಿಗೆಗಳ ಮುಂದೆ ಒತ್ತುವರಿ ತೆರವಿಗೆ ಇಳಿದಾಗ ಈ ಜಾಗಕ್ಕೆ ಕಿಮತ್ತು ಕಟ್ಟಿದ್ದೇನೆಂದು ದಾಖಲಾತಿಗಳನ್ನು ತೋರಿಸಿದರೂ ಕೇಳದೆ ಮುಖ್ಯಾಧಿಕಾರಿಗಳು ತೆರವು ಮಾಡಿಸಿದರು.
ಇಲ್ಲಿನ ಗೃಹಲಕ್ಷ್ಮೀ ಸ್ಟೋರ್ನ ಎಂಎಸ್ಆರ್ ನಟರಾಜ್ ಅವರು ಪಪಂ ವಾಣಿಜ್ಯ ಮಳಿಗೆ ಬಾಡಿಗೆ ಪಡೆದು ದಿನಸಿ ಅಂಗಡಿ ನಡೆಸುತ್ತಿದ್ದರು. ಇವರು ತಮ್ಮ ಅಂಗಡಿ ಮುಂಭಾಗದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಪಪಂ ಮುಖ್ಯಾಧಿಕಾರಿಗಳು ತೆರವಿಗೆ ಮುಂದಾದರು.
ತಕ್ಷಣ ಎಂಎಸ್ಆರ್ ನಟರಾಜ್ ಅವರು ಈ ಜಾಗಕ್ಕೆ 1988 ರಲ್ಲೇ ಕಿಮ್ಮತ್ತು ಕಟ್ಟಿ ಪಡೆದಿದ್ದೇನೆ. ಅಲ್ಲದೆ ಈ ಜಾಗಕ್ಕೆ ಕೆಲವರು ಕೋರ್ಟ್ ಮೆಟ್ಟಿಲೇರಿದಾಗ ಕೋರ್ಟ್ ಸಹ ನಮ್ಮ ಪರವಾಗಿ ತೀರ್ಪು ನೀಡಿದೆ. ನೋಡಿ ದಾಖಲಾತಿಗಳನ್ನು ಎಂದು ಪಪಂ ಮುಖ್ಯಾಧಿಕಾರಿಗಳ ಮುಂದಿಟ್ಟರು.
ಆದರೆ ಮುಖ್ಯಾಧಿಕಾರಿಗಳು ಮಾತ್ರ ಈ ದಾಖಲಾತಿಗಳನ್ನು ಪರಿಶೀಲಿಸುವುದಿರಲಿ ಕಣ್ಣಿನಿಂದಲೂ ಸಹ ನೋಡದೆ ನೀವೆ ತೆರವು ಮಾಡಿದರೆ ಸರಿ ಇಲ್ಲವಾದಲ್ಲಿ ನಾವೇ ಜೆಸಿಬಿಯಿಂದ ತೆರವು ಮಾಡುತ್ತೇವೆ ಎಂದು ಎಚ್ಚರಿಸಿದರು. ಪರಿಣಾಮ ನಟರಾಜ್ ಅವರೇ ತಮ್ಮ ಕಾರ್ಮಿಕರಿಂದ ತೆರವು ಮಾಡಿಸಿಕೊಟ್ಟರು.