ಅನುದಾನ ಹಿಂತಿರಿಗಿಸಿದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಕಾಯ್ದೆಯಡಿ ದೂರು ದಾಖಲು ಎಚ್ಚರಿಕೆ

ಹಾವೇರಿ:

     ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ವಿಶೇಷ ಘಟಕಗಳಡಿ ಬಿಡುಗಡೆಯಾದ ಅನುದಾನವನ್ನು ಕಾಲ ಮಿತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಇಲಾಖೆವಾರು ಬಿಡುಗಡೆಯಾದ ಅನುದಾನದಲ್ಲಿ ಒಂದು ರೂಪಾಯಿ ಸಹ ಹಿಂತಿರಿಗಿಸಬಾರದು.

      ಒಂದೊಮ್ಮೆ ಅನುದಾನ ಬಳಕೆಯಲ್ಲಿ ಹಾಗೂ ಕಾರ್ಯಕ್ರಮ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಮೇಲೆ ಮತ್ತು ಯಾವ ಫಲಾನುಭವಿಗೆ ಯಾವ ಯೋಜನೆ ಮಂಜೂರಾಗಿದೆ ಎಂಬ ಮಾಹಿತಿಯ ಇಲಾಖಾವಾರು ಫಲಾನುಭವಿಗಳ ಪಟ್ಟಿ ನೀಡಿದ ಅಧಿಕಾರಿಗಳ ಮೇಲೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಾಯ್ದೆಯಡಿ ದೂರು ದಾಖಲಿಸುವುದಾಗಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.

     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕರ್ನಾಟಕ ಅನುಸೂಚಿತ ಜಾತಿಗಳ ಹಾಗೂ ಬುಡಕಟ್ಟು ಉಪಯೋಜನೆ ಅಧಿನಿಯಮ 2013ರ ಅನ್ವಯ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಇಲಾಖೆಗಳು ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಸಿದರು.

     ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಸರ್ಕಾರ ಇಲಾಖೆವಾರು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಪೈಕಿ ಸಾಮೂಹಿಕ ಕಲ್ಯಾಣ ಯೋಜನೆಗಳು, ವೈಯಕ್ತಿಕ ಫಲಾನುಭವಿಗಳ ಕಲ್ಯಾಣ ಯೋಜನೆಗಳ ಕುರಿತಂತೆ ಕ್ರಿಯಾ ಯೋಜನೆಗಳನ್ನು ಮುಂಚಿತವಾಗಿ ರೂಪಿಸಿಕೊಂಡು ಅನುಮೋದನೆ ಪಡೆಯಿರಿ. ಸಾಮೂಹಿಕ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಿ.

      ಫಲಾನುಭವಿಗಳ ಪ್ರೇರಿತ ಯೋಜನೆಗಳನ್ನು ಸ್ಥಳೀಯ ಶಾಸಕರು ಅನುಮೋದನೆ ಪಡೆದು ನಿಯಮಾನುಸಾರ ಅನುಷ್ಠಾನಗೊಳಿಸಿ. ವಿಳಂಬಕ್ಕೆ ಅವಕಾಶವಿಲ್ಲದೆ ಅನುದಾನ ವ್ಯರ್ಥವಾಗದ ರೀತಿಯಲ್ಲಿ ಕ್ರಮವಹಿಸುವಂತೆ ಅನುಷ್ಠಾನಾಧಿಕಾರಿಗಳಿಗೆ ತಾಕೀತು ಮಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಯಾವ ಫಲಾನುಭವಿಗೆ ಯಾವ ಯೋಜನೆಯಡಿ ಸೌಲಭ್ಯ ದೊರಕಿವೆ ಎಂಬ ಮಾಹಿತಿ ಸಿಗುತ್ತಿಲ್ಲ.

       ಕೆಲವೆಡೆ ಕೆಲವೇ ಕೆಲವು ಫಲಾನುಭವಿಗಳು ಎಲ್ಲ ಇಲಾಖೆಗಳ ಯೋಜನೆಗಳನ್ನು ಪಡೆದಿದ್ದಾರೆ ಎಂಬ ದೂರುಗಳಿವೆ. ಇನ್ನೂ ಕೆಲವರಿಗೆ ಯಾವುದೇ ಯೋಜನೆಗಳ ಮಾಹಿತಿಯೂ ಇರುವುದಿಲ್ಲ, ಸೌಲಭ್ಯವೂ ದೊರಕುತ್ತಿಲ್ಲ ಎಂಬ ದೂರುಗಳಿವೆ. ಈ ಕಾರಣಕ್ಕಾಗಿ ಪ್ರತಿ ಇಲಾಖಾ ಅಧಿಕಾರಿಗಳು ತಮ್ಮ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಫಲಾನುಭವಿಗಳಿಗೆ ನೀಡಿರುವ ಸೌಲಭ್ಯಗಳ ಕುರಿತಂತೆ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು. ಗೂಗಲ್ ಸೀಟ್‍ನಲ್ಲಿ ಅಪ್‍ಲೋಡ್‍ಮಾಡಿ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದರು.

      ಮುಂದಿನ ದಿನದಲ್ಲಿ ಪಾರದರ್ಶಕವಾಗಿ ಆ ಸಮುದಾಯದ ಅರ್ಹರಿಗೆ ಸೌಲಭ್ಯ ದೊರಕಿಸಿಕೊಡಲು ಡುಪ್ಲಿಕೇಷನ್ ತಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.

       ವಿವಿಧ ವಿದ್ಯಾರ್ಥಿ ವೇತನಗಳ ಮಾಹಿತಿಯ ಕೊರತೆಯಿಂದ ಸೌಲಭ್ಯ ಪಡೆಯಲು ಬಹಳಷ್ಟು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಶಿಕ್ಷಣ ಇಲಾಖೆ ವಿಶೇಷ ಜಾಗೃತಿ ಅಭಿಯಾನ ಮೂಡಿಸಿ ಆ ವರ್ಗದ ಅರ್ಹ ಎಲ್ಲ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ, ಶಿಷ್ಯವೇತನ ಪಡೆಯುವಂತೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

       ದೂರದ ಹಳ್ಳಿಗಳಿಂದ ಬಂದು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಶಿಕ್ಷಣ ಮುಂದುವರಿಸಲು ಅನುಕೂಲವಾಗುವಂತೆ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಪ್ರವೇಶ ಕೋರಿಬಂದರೆ ನಿರಾಕರಿಸುವಂತಿಲ್ಲ. ಸೀಟಿನ ಕೊರತೆ ಇತರ ಕಾರಣ ಹೇಳದೆ ಇಂತಹ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವಂತೆ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.

      ವಿಶೇಷ ಅನುದಾನದಡಿ ಸಾಮೂಹಿಕ ಹಾಗೂ ಫಲಾನುಭವಿ ಪ್ರೇರಿತ ಸೌಲಭ್ಯಗಳನ್ನು ನೀಡುವಾಗ ಆಸ್ತಿ ಸೃಜಿಸುವಂತಹ ಶಾಶ್ವತ ಬದುಕನ್ನು ಕಟ್ಟಿಕೊಳ್ಳುವಂತಹ ಕಾರ್ಯಕ್ರಮಗಳನ್ನು ರೂಪಿಸಿ ವಿವಿಧ ಇಲಾಖೆಗಳ ಯೋಜನೆಯೊಂದಿಗೆ ಈ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಸಂಯೋಜಿಸಿ ಸೌಕರ್ಯ ಕಲ್ಪಿಸುವಂತೆ ಸಲಹೆ ನೀಡಿದರು.

      ಮೊರಾರ್ಜಿ ದೇಸಾಯಿ, ನವೋದಯ ಶಾಲೆಗಳು ಸೇರಿದಂತೆ ಪ್ರತಿಷ್ಠಿತ ಶಾಲೆಗಳಿಗೆ ಈ ವರ್ಗದ ವಿದ್ಯಾರ್ಥಿಗಳು ಆಯ್ಕೆಯಾಗಲು ಅನುಕೂಲವಾಗುವಂತೆ ವಿದ್ಯಾರ್ಥಿ ನಿಲಯಗಳಲ್ಲಿ ಹಾಗೂ ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ಆಯೋಜಿಸಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕುರಿತಂತೆ ತರಬೇತಿ ನೀಡಲು ಸೂಚಿಸಿದರು.

      ಭೂ ದಾಖಲೆ ಅಭಿಯಾನ: ಸಭೆಯಲ್ಲಿ ಹಾಜರಿದ್ದ ಹಾನಗಲ್ ಶಾಸಕರಾದ ಸಿ.ಎಂ.ಉದಾಸಿ ಅವರು ಮಾತನಾಡಿ, ಹಾನಗಲ್ ಭಾಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಸರ್ಕಾರಿ ಜಮೀನು ಮಂಜೂರಾಗಿ 40 ವರ್ಷಗಳು ಕಳೆದಿದ್ದರೂ ಅವರ ಭೂ ದಾಖಲೆಗಳಲ್ಲಿ ಸರ್ಕಾರಿ ಜಮೀನು ಎಂದೇ ಮಂಜೂರಾಗಿದೆ. ಈ ಕುರಿತಂತೆ ಮಾಹಿತಿ ಸಂಗ್ರಹಿಸಿ ಭೂ ದಾಖಲೆಗಳನ್ನು ತಿದ್ದುಪಡಿಗೊಳಿಸಿ ಮಂಜೂರಾದ ಫಲಾನುಭವಿಗಳ ಹೆಸರು ದಾಖಲಿಸುವ ಕುರಿತಂತೆ ವಿಶೇಷ ಅಭಿಯಾನದ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

      ನೋಟೀಸ್: ಶೇ.100ರಷ್ಟು ಸಾಧನೆ ತೋರದ ಬಿಡುಗಡೆಯಾದ ಅನುದಾನವನ್ನು ವೆಚ್ಚ ಮಾಡಲು ವಿಫಲವಾದ ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೋಟೀಸ್ ಜಾರಿಮಾಡಿ ಕಾರಣ ಕೇಳುವಂತೆ ಸಮಾಜ ಕಲ್ಯಾಣ ಅಧಿಕಾರಿಗೆ ಸೂಚನೆ ನೀಡಿದರು.

       ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಶಿಲ್ಪಾ ನಾಗ್, ಸಮಾಜ ಕಲ್ಯಾಣಾಧಿಕಾರಿ ಶ್ರೀಮತಿ ಚೈತ್ರಾ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುರೇಶ ರೆಡ್ಡಿ ಹಾಗೂ ವಿವಿಧ ಇಲಾಖೆಯ ಮುಖ್ಯಸ್ಥರು ಭಾಗವಹಿಸಿದ್ದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link