ಸ್ಥಳಕ್ಕಾಗಮಿಸಿದ ಜನಪ್ರತಿನಿಧಿಗಳನ್ನು ಸುತ್ತುವರಿದ ಗ್ರಾಮಸ್ಥರು
ತುಮಕೂರು:
ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ಬೈಚೇನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ 3 ವರ್ಷದ ಬಾಲಕಿ ಚಂದನಳನ್ನು ಚಿರತೆ ಬಲಿ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಆ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.
ಮಗಳನ್ನು ಕಳೆದುಕೊಂಡ ಪೋಷಕರ ದುಃಖ ಹಾಗೂ ಆಕ್ರಂಧನ ಒಂದು ಕಡೆಯಾದರೆ, ಇನ್ನು ಎಷ್ಟು ಬಲಿಯಾಗಬೇಕು ಎಂಬ ಆಕ್ರೋಶ ಗ್ರಾಮಸ್ಥರಲ್ಲಿ ಕೇಳಿಬರುತ್ತಿತ್ತು. ಇದರಿಂದಾಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಸಚಿವರುಗಳನ್ನು ಸುತ್ತುವರಿದು ಸರದಿ ಪ್ರಶ್ನೆಗಳ ಸುರಿಮಳೆಗೈದರು. ಇದರಿಂದಾಗಿ ಕೆಲಕಾಲ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಜನಪ್ರತಿನಿಧಿಗಳು ಇಲ್ಲಿಗೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಬೈಚೇನಹಳ್ಳಿಯತ್ತ ದೌಡಾಯಿಸಿದರು. ಕಳೆದ ಎರಡು ತಿಂಗಳಿನಲ್ಲಿ ಎರಡು ಮಕ್ಕಳು ಬಲಿಯಾಗಿವೆ. ಬಡವರ ಕಷ್ಟ ನಿಮ್ಮೆಲ್ಲರಿಗೆ ಹೇಗೆ ಅರ್ಥವಾಗಬೇಕು ಎಂದು ಪ್ರಶ್ನಿಸತೊಡಗಿದರು. ಚಂದನಳÀ ತಂದೆ ಶ್ರೀನಿವಾಸ್ ಸಹ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲ ಮನೆಯ ಮುಂದೆಯೇ ಶವವಿಟ್ಟು ಪೋಷಕರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬರಬೇಕು ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಅರಣ್ಯ ಸಚಿವ ಆನಂದ್ ಸಿಂಗ್ ಮಾತನಾಡಿ ಮಗು ಬಲಿ ಪಡೆದಿರುವ ಚಿರತೆಯನ್ನು ಗುಂಡಿಕ್ಕಿ ಕೊಲ್ಲಲು ಅಧಿಕಾರಿಗಳಿಗೆ ಆದೇಶ ನೀಡುತ್ತೇನೆ. ಕಾನೂನು ತೊಡಕಿಗಿಂತ ನಮಗೆ ಜನರ ಪ್ರಾಣ ಮುಖ್ಯ ಎಂದ ಅವರು, ಮೃತ ಬಾಲಕಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದರು. ಚಿರತೆಯನ್ನು ಗುಂಡಿಕ್ಕಿ ಕೊಲ್ಲುವಂತೆ ಗ್ರಾಮಸ್ಥರೂ ಸಹ ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡ ರೈತರು ಈ ಭಾಗದಲ್ಲಿ ಚಿರತೆ ಕಾಟ ಇರುವುದರಿಂದ ರಾತ್ರಿವೇಳೆ ತೋಟ, ಗದ್ದೆಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬೆಳಗಿನ ವೇಳೆ ತ್ರಿಫೇಸ್ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದರು. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರೂ ಸಹ ಆಗಮಿಸಿ ಗ್ರಾಮಸ್ಥರೊಂದಿಗೆ ಮಾತನಾಡಿದರು. ನಾಳೆಯಿಂದಲೇ ಚಿರತೆ ಹಿಡಿಯುವ ಪ್ರಯತ್ನ ಮಾಡಲಿದ್ದಾರೆ ಎಂದರು. ಸ್ಥಳಕ್ಕೆ ವಿವಿಧ ಅಧಿಕಾರಿಗಳು ಭೇಟಿ ನೀಡಿದ್ದರು.
ನರಭಕ್ಷಕ ಚಿರತೆ ಕೊಲ್ಲಲು ಆದೇಶ
ಮಕ್ಕಳನ್ನು ಬಲಿ ಪಡೆಯುತ್ತಿರುವ ಚಿರತೆಯನ್ನು ಕೊಲ್ಲಲು ಅರಣ್ಯ ಸಚಿವ ಆನಂದ್ ಸಿಂಗ್ ಆದೇಶ ನೀಡಿದ್ದಾರೆ. ಹೆಬ್ಬೂರಿನ ಬೈಚೇನಹಳ್ಳಿಯಲ್ಲಿ ಬಾಲಕಿಯನ್ನು ಬಲಿ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ ಭೇಟಿ ನೀಡಿದ್ದ ಸಚಿವರಿಗೆ ಗ್ರಾಮಸ್ಥರು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಸಚಿವರು ಈ ಆದೇಶ ನೀಡಿದ್ದಾರೆ. ಚಂದನ ಸಾವಿಗೆ ಪರಿಹಾರ ಬೇಡ. ಮೊದಲು ಚಿರತೆ ಸಾಯಿಸಿ. ಮತ್ತಷ್ಟು ಹಾನಿ ತಪ್ಪಿಸಿ ಎಂದು ಮೃತಳ ಪೋಷಕರು, ಗ್ರಾಮಸ್ಥರು ಒತ್ತಾಯಪೂರ್ವಕ ಮನವಿ ಮಾಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
