ಹಾನಗಲ್ಲ :
ಬೆಳೆವಿಮೆ ಬಾರದೆ ಹೋರಾಟದ ಹಾದಿ ಹಿಡಿದ ಹಾನಗಲ್ಲ ತಾಲೂಕಿನ ರೈತರಿಗೆ 3 ವರ್ಷಗಳ ಬಳಿಕ ವಿಮಾ ಪರಿಹಾರ ಬಿಡುಗಡೆ ಗೊಂಡಿದ್ದು ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತಿರುವುದಕ್ಕೆ ರೈತ ಸಂಘಟನೆ ಹರ್ಷ ವ್ಯಕ್ತಪಡಿಸಿದ್ದಲ್ಲದೆ, ಹೋರಾಟವಿಲ್ಲದೇ ಏನೂ ಪಡೆಯದ ಸ್ಥಿತಿ ಸರಕಾರದಲ್ಲಿದೆ ಎಂದು ಅಳಲು ತೋಡಿಕೊಂಡಿದೆ.
ಗುರುವಾರ ಹಾನಗಲ್ಲಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇವೆ ರೈತರ ಸಭೆ ಹಾಗೂ ಸುದ್ದಿಗೋಷ್ಠಿ ನಡೆಸಿದ ಸಂದರ್ಬದಲ್ಲಿ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ, ಹಾನಗಲ್ಲ ತಾಲೂಕಿನಲ್ಲಿ ಪ್ರತಿವರ್ಷ ರೈತರು ಬೆಳೆವಿಮೆಗಾಗಿ ಹೋರಾಟ ಮಾಡಲೇಬೇಕಾಗಿದೆ. ಸರಕಾರ, ಇಲಾಖೆಯ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳ ತಪ್ಪಿನಿಂದಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
2013 ರಿಂದಲೇ ಬೆಳೆವಿಮೆ ವ್ಯತ್ಯಾಸಕ್ಕಾಗಿ ನಾವು ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಪ್ರತಿ ವರ್ಷ ಒಂದಿಲ್ಲೊಂದು ತಂಟೆ ತಕರಾರು ತೆಗೆದು ಬೆಳೆವಿಮೆಗೆ ತೊಂದರೆಯಾಗುತ್ತಲೇ ಇದೆ ಎಂದು ತಮ್ಮ ಕಷ್ಟ ತೋಡಿಕೊಂಡರು.
ಕಳೆದ 2016 ಹಾನಗಲ್ಲ ತಾಲೂಕಿನ ರೈತರಿಗೆ 13 ಕೋಟಿ ಹಣ 4300 ಕ್ಕೂ ಅಧಿಕ ರೈತರಿಗೆ ತಲುಪಲೇ ಇಲ್ಲ. ಇದಕ್ಕೆ ಬ್ಯಾಂಕು, ಬೆಳೆವಿಮೆ ಕಛೇರಿ, ಕೃಷಿ, ಕಂದಾಯ ಇಲಾಖೆಗಳ ನಡುವೆ ಹತ್ತಾರು ಸಭೆಗಳು ನಡೆದರೂ ಕೂಡ ಯಾರು ಇದಕ್ಕೆ ಸ್ಪಂದಿಸಲಿಲ್ಲ. ಅಂತಿಮವಾಗಿ ನಾವು ಹೋರಾಟದ ಹಾದಿ ಹಿಡಿದು ಬೀದಿಗಿಳಿಯಬೇಕಾಯಿತು. ಅಧಿಕಾರಿಗಳೂ ಕೂಡ ಸಭೆಗೆ ಬಂದರೆ ಹೊರತು ಯಾವುದೇ ಪರಿಹಾರ ಸೂಚಿಸುವ ಸ್ಥಿತಿಯಲ್ಲಿ ಇರಲಿಲ್ಲ
ಅನಿವಾರ್ಯವಾಗಿ ರಾಜ್ಯ ಸರಕಾರದ ಮೇಲೆ ಒತ್ತಡ ಹಾಕಿದ್ದರ ಪ್ರತಿಫಲವಾಗಿ ನಮ್ಮ ಹೋರಾಟಕ್ಕೆ ಜಯ ದೊರಕಿ ಈಗ ಈ ಎಲ್ಲ ರೈತರ ಖಾತೆಗೆ ಒಟ್ಟು 13 ಕೋಟಿ ರೂ ಜಮಾ ಆಗುತ್ತಿದೆ. ಒಂದೆರಡು ದಿನಗಳಲ್ಲಿ ಎಲ್ಲ ರೈತರ ಖಾತೆಗೆ ಹಣ ಜಮೇ ಆಗಲಿದೆ ಎಂದು ಮರಿಗೌಡ ಪಾಟೀಲ ತಿಳಿಸಿದರು.
2013-14 ರ ಕೃಷಿ ವರ್ಷದಲ್ಲಿ ಹಾವಣಗಿ, ಕಂಚಿನೆಗಳೂರು, ಬಾಳಂಬೀಡ, ಶ್ಯಾಡಗುಪ್ಪಿ, ಮಾರನಬೀಡ, ನರೇಗಲ್ಲ, ಕರಗುದರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರಿಗೆ ಬೆಳೆವಿಮೆ ಬಿಡುಗಡೆಗೊಂಡಿಲ್ಲ. ಇದರಲ್ಲಿ ರೈತರದು ಏನೂ ತಪ್ಪಿಲ್ಲ. ಆದರೆ ನಷ್ಟ ಅನುಭವಿಸಿದವರು ಮಾತ್ರ ರೈತ. ಇದರ ಹೋರಾಟವೂ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದು, ಕೆಲವೇ ದಿನಗಳಲ್ಲಿ 2013-14 ರ ಬೆಳೆವಿಮೆಯೂ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.
ಶುಕ್ರವಾರ ವಿಜಯೋತ್ಸವ :
ರೈತರ ಹೋರಾಟದ ಫಲವಾಗಿ ರಾಜ್ಯ ಸರಕಾರ ಬೆಳೆವಿಮೆ ಬಿಡುಗಡೆಗೊಳಿಸಿರುವುದರಿಂದ, ಇದು ಹೋರಾಟದ ಯಶಸ್ಸು, ರೈತ ಹೋರಾಟಕ್ಕೆ ಸಿದ್ಧನಾಗಬೇಕು, ಎಲ್ಲವನ್ನೂ ಹೋರಾಟದಿಂದಲಾದರೂ ಪಡೆಯಲು ನಾವು ಸಿದ್ಧ ಎಂಬುದನ್ನು ರೈತ ಸಮುದಾಯಕ್ಕೆ ತಿಳಿಸಲು.
ಹಾಗೂ ಜನಪ್ರತಿನಿಧಿಗಳಿಗೆ ಈ ಸಂದೇಶ ನೀಡಲು ಎಪ್ರೀಲ 26 ಶುಕ್ರವಾರದಂದು ಬೆಳಿಗ್ಗೆ 11 ಘಂಟೆಗೆ ಹಾನಗಲ್ಲಿನ ಕನಕದಾಸ ವೃತ್ತದಲ್ಲಿ ವಿಜಯೋತ್ಸವನ್ನು ಆಯೋಜಿಸಲಾಗಿದೆ. ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚೇಳ್ಳೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಹಾಗೂ ತಾಲೂಕು ಪದಾಧಿಕಾರಿಗಳು, ರೈತ ಸಮುದಾಯ ವಿಜಯೋತ್ಸವದಲ್ಲಿ ಪಾಲ್ಗೊಳ್ಳುವುದು ಎಂದು ತಿಳಿಸಿದ ಮರಿಗೌಡರ, ಕಂದಾಯ ಇಲಾಖೆಯಲ್ಲಿ ರೈತರ ಪಹಣಿ ಸಮಸ್ಯೆ, ಕೃಷಿ ಜಮೀನಿನ ಸರ್ವೇ ಕುರಿತಂತೆ ಹಲವು ಗೊಂದಲ, ವಿಳಂಬಗಳಿದ್ದು ಕೂಡಲೇ ಇವೆಲ್ಲವನ್ನೂ ಸರಿಪಡಿಸಲು ಮನವಿ ಸಲ್ಲಿಸಲಾಗುವುದು. ಇಲಾಖೆ ವಿಳಂಬ ಮಾಡಿದರೆ ಹೋರಾಟವೆ ಕೊನೆಯ ದಾರಿ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಅಡಿವೆಪ್ಪ ಆಲದಕಟ್ಟಿ, ಮಲ್ಲೇಶಪ್ಪ ಪರಪ್ಪನವರ, ಸೋಮಣ್ಣ ಜಡೆಗೊಂಡರ, ರುದ್ರಪ್ಪ ಹಣ್ಣಿ, ರಾಜು ದಾನಪ್ಪನವರ, ಶ್ರೀಕಾಂತ ದುಂಡಣ್ಣನವರ, ರವಿ ನೆರಕಿಮನಿ, ಗಿರಿಸ್ವಾಮಿ ಹಿರೇಮಠ, ಚನ್ನಪ್ಪ ಪಾವಲಿ, ಅಜ್ಜನಗೌಡ ಪಾಟೀಲ, ಚಂದ್ರಪ್ಪ ಕಾಸಂಬಿ, ಸಂಗಮೇಶ ಚೌಶೆಟ್ಟಿ ಮೊದಲಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
