ಚಿತ್ರದುರ್ಗ :
ಅಧ್ಯಾಪಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಕ್ರಿಯಾಶೀಲರಾದಾಗ ಮಾತ್ರ ಸದೃಢ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದು ಡಾ. ಶಿವಮೂರ್ತಿ ಮುರುಘಾಶರಣರು ಹೇಳಿದರು.
ನಗರದ ಚಂದ್ರವಳ್ಳಿಯ ಎಸ್.ಜೆ.ಎಂ.ಕಾಲೇಜಿನಲ್ಲಿ ನಡೆದ 2018-19ನೇ ಸಾಲಿನ ಕಾಲೇಜು ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಶ್ರೀಗಳು, ಅಧ್ಯಾಪನ ಒಂದು ತಪಸ್ಸಿನಂತೆ, ಪರಮ ಪವಿತ್ರ ಕರ್ತವ್ಯ ಎಂದು ಭಾವಿಸಿದಾಗ ಮಾತ್ರ ಅಧ್ಯಾಪಕರು ಬಹುಕಾಲ ನೆನಪಿನಲ್ಲಿ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಅಧ್ಯಾಪಕರುಗಳು ತಮ್ಮ ತಮ್ಮ ವಿಷಯಗಳಲ್ಲಿ ಸತತ ಅಧ್ಯಯನ ನಿರತರಾಗುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ಹೇಳುತ್ತಾ ತಾವು ಈಚೆಗಿನ ಅಮೇರಿಕಾ ಭೇಟಿಯ ಸಂದರ್ಭದ ವಿಷಯಗಳನ್ನು ಸಭೆಯಲ್ಲಿ ಹಂಚಿಕೊಂಡರು.
ದಾವಣಗೆರೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರೊ.ಬಿ.ಪಿ.ವೀರಭದ್ರಪ್ಪ ಮಾತನಾಡಿ, ಅಧ್ಯಾಪಕರು ನಿರಂತರ ಸಂಶೋಧನೆಯಲ್ಲಿ ತೊಡಗಿಕೊಂಡಾಗ ಹೊಸ ಹೊಸ ವಿಚಾರಗಳು ಮೂಡಲು ಸಾಧ್ಯವಾಗುತ್ತದೆ. ಪಠ್ಯಭೋದನೆಯ ಜೊತೆಗೆ ಯಾವತ್ತೂ ವಿದ್ಯಾರ್ಥಿಗಳೊಂದಿಗೆ ಸ್ನೇಹಮಯ ಸಂಬಂಧಗಳನ್ನು ಇರಿಸಿಕೊಂಡಾಗ ಮಾತ್ರ ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದಂತಾಗುತ್ತದೆ. ದೇಶಗಳಲ್ಲಿ ಪ್ರಾಧ್ಯಾಪಕರುಗಳು ಬೆಳಿಗ್ಗೆ 8.00 ರಿಂದ ರಾತ್ರಿ 8.00 ರವರೆಗೆ ನಿರಂತರವಾಗಿ ಅಧ್ಯಯನಶೀಲರಾಗಿರುತ್ತಾರೆ. ಇದು ನಮಗೆ ಮಾದರಿಯಾಗಬೇಕಾಗಿದೆ ಎಂದರು.
ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಾಹಕ ನಿರ್ದೇಶಕರುಗಳಾದ ಡಾ.ಜಿ,ಎನ್.ಮಲ್ಲಿಕಾರ್ಜುನಪ್ಪ, ಡಾ.ಇ.ಚಿತ್ರಶೇಖರ್ ಮತ್ತು ಎಂ.ಜೆ.ದೊರೆಸ್ವಾಮಿ ಹಾಗೂ ಚಿತ್ರದುರ್ಗದ ವಾಣಿಜ್ಯೋದ್ಯಮಿ ಜೆ.ಎಂ.ಜಯಕುಮಾರ್ ಮತ್ತು ಪಟೇಲ್ ಶಿವಕುಮಾರ್ ಉಪಸ್ಥಿತರಿದ್ದರು.
ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಜರಿದ್ದರು. ಪ್ರಾಚಾರ್ಯರಾದ ಡಾ,ಕೆ.ಸಿ.ರಮೇಶ್ ಸ್ವಾಗತಿಸಿದರು. ಕೊನೆಯಲ್ಲಿ ಪ್ರೊ.ಜಿ.ಎನ್.ಬಸವರಾಜಪ್ಪ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
