ಹಾನಗಲ್ಲ :
ನರೇಗಾ ಯೋಜನೆಯ ಕೂಲಿಕಾರರ ಬ್ಯಾಂಕ ಖಾತೆಗೆ ಆಧಾರ ಜೋಡಣೆಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದ ಶಿವಕುಮಾರ ಉದಾಸಿ ಕಟ್ಟಪ್ಪಣೆ ಮಾಡಿದರು.
ಹಾನಗಲ್ಲಿನ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಕೇಂದ್ರ ಪುರಸ್ಕತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಡಿಯಲ್ಲಿ ಕೂಲಿಕಾರರಿಗೆ ಅವರ ಆಧಾರ ಆಧರಿಸಿ ಹಣ ಪಾವತಿಸುವ ಪದ್ಧತಿ ಜಾರಿಯಾಗಿದ್ದರೂ, ಇನ್ನು ಬಹುತೇಕ ಕೂಲಿಕಾರರ ಬ್ಯಾಂಕ್ ಖಾತೆಗೆ ಆಧಾರ ಜೋಡಣೆಯಾಗಿಲ್ಲ. ಇನ್ನು 15 ದಿನಗಳಲ್ಲಿ ಜೋಡಣೆ ಕಾರ್ಯ ಪೂರ್ಣಗೊಳಿಸಬೇಕು. ಈ ಯೋಜನೆಯ ಹೊಸ ಮಾರ್ಗಸೂಚಿಯಂತೆ ವಿವಿಧ ಕಾಮಗಾರಿಗಳಿಗೆ ಬೇರೆ ಬೇರೆ ಅನುಪಾತಗಳಿವೆ. ಹೀಗಿರುವಾಗ ಕಾಮಗಾರಿ ನಡೆಸಲು ಅನುಪಾತದ ತೊಂದರೆಯನ್ನು ತಪ್ಪಿಸಲು 60 40 ಅನುಪಾತ ಬರುವಂತೆ ಕ್ರಿಯಾಯೋಜನೆ ಸಿದ್ಧಗೊಳಿಸಿರಿ ಎಂದು ಸಲಹೆ ಮಾಡಿದರು.
ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನಿಗಾವಹಿಸಿ. ಸಮಸ್ಯೆ ಇದ್ದಲ್ಲಿ ನಮ್ಮ ಗಮನಕ್ಕೆ ತನ್ನಿ ಪರಿಹಾರಕ್ಕೆ ಕ್ರಮ ಕೈಗೊಳ್ಳಳಾಗುವುದು. ತಾಲೂಕಿನ 9 ಗ್ರಾಮಗಳಲ್ಲಿ ಅಂತರ್ಜಲವಿಲ್ಲದ ಕಾರಣ ಕೊಳವೆಭಾವಿಗಳು ವಿಫಲವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಟಾಸ್ಕಫೋರ್ಸ್ ಸಮಿತಿಯ ಮಾರ್ಗಸೂಚಿಯಂತೆ ಲಭ್ಯವಿರುವ ಸಮೀಪದ ಗ್ರಾಮದಿಂದ ಪೈಪಲೈನ್ ಮೂಲಕ ನೀರೊದಗಿಸಬೇಕು ಎಂದು ಸಂಸದ ಉದಾಸಿ ತಿಳಿಸಿದರು.
ಶಾಸಕ ಸಿ.ಎಂ.ಉದಾಸಿ ಮಾತನಾಡಿ, ತಾಲೂಕಿನಲ್ಲಿ ನರೇಗಾ ಯೋಜನೆ ಆಮೆಗತಿಯಲ್ಲಿ ಸಾಗಿದೆ. ಮಾಸನಕಟ್ಟಿ ಶೇ. 124, ಕಂಚಿನೆಗಳೂರು ಶೇ. 84 ಃಆಗೂ ಸೋಮಸಾಗರ ಶೇ. 51 ರಷ್ಟು ಸಾಧನೆಯಾಗಿದೆ. 10 ಗ್ರಾಪಂಗಳಲ್ಲಿ ಶೇ.10 ಕ್ಕಿಂತ ಕಡಿಮೆ ಸಾಧನೆಯಾಗಿದೆ.ಉಳಿದ ಗ್ರಾಪಂಗಳಲ್ಲಿ ಹೇಳುವಂತಹ ಸಾಧನೆಯಾಗಿಲ್ಲ. ಇನ್ನು ಎರಡು ತಿಂಗಳಲ್ಲಿ ವೇಗದ ಚಾಲನೆ ನೀಡಿ ನೂರಕ್ಕೆ ನೂರರಷ್ಟು ಸಾಧನೆ ಮಾಡಬೇಕು.
ಶೇ. 75 ರೊಳಗೆ ಸಾಧನೆ ಮಾಡಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 14 ನೇ ಹಣಕಾಸು ಯೋಜನೆಯಲ್ಲಿ 11 ಗ್ರಾಪಂಗಳಿಗೆ ಪ್ರಸ್ತಾವನೆ ಸಲ್ಲಿಸಿದರೂ ಮಂಜೂರಾತಿ ದೊರೆತಿಲ್ಲ. ಇದಕ್ಕೆ ಕಾರಣ ತಿಳಿದು ಕೂಡಲೇ ಕಾರ್ಯರೂಪಕ್ಕೆ ತರುವಂತೆ ತಾಪಂ ಇಓ ಗೆ ಸೂಚಿಸಿದರು.ತಾಲೂಕಿನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳಿವೆ. ಘಟಕಗಳು ಸ್ಥಗಿತಗೊಂಡಲ್ಲಿ ಕೂಡಲೇ ದುರಸ್ಥಿಗೊಳಿಸಿ ನೀರು ಕೊಡಬೇಕು. ಇಲ್ಲವಾದಲ್ಲಿ ಅಂತಹ ಗುತ್ತಿಗೆದಾರರನ್ನು ಬ್ಲಾಕ್ಲಿಸ್ಟ್ಗೆ ಸೇರಿಸಿ ಎಂದ ಅವರು, ಯೋಜನೆ ಅನುಷ್ಠಾನಗೊಳಿಸಲು ಏನಾದರೂ ತೊಂದರೆಗಳಿದ್ದರೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲೂಕು ತಹಶೀಲ್ದಾರ ಸಿ.ಎಸ್.ಭಂಗಿ, ಜಿಪಂ ಸದಸ್ಯರಾದ ಮಾಲತೇಶ ಸೊಪ್ಪಿನ, ಗೌರವ್ವ ಸೇತಸನದಿ, ಟಾಕನಗೌಡ ಪಾಟೀಲ, ರಾಘವೇಂದ್ರ ತಹಶೀಲ್ದಾರ, ತಾಪಂ ಸದಸ್ಯ ಸಿದ್ದನಗೌಡ ಪಾಟೀಲ, ತಾಪಂ ಇಓ ಎಂ.ಜಿ.ಶಶಿಧರ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ