ಚಳ್ಳಕೆರೆ
ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರ ಹಟ್ಟಿಯಲ್ಲಿ ದೇವರ ಎತ್ತುಗಳು ಇದ್ದು, ದೀಪಾವಳಿ ಹಬ್ಬದ ಪ್ರಯುಕ್ತ ಅಲ್ಲಿನ ಕಿಲಾರಿಗಳು ಎತ್ತುಗಳಿಗೆ ಪೂಜಿಸುವ ಮೂಲಕ ದೀಪಾವಳಿ ಹಬ್ಬಕ್ಕೆ ಚಾಲನೆ ನೀಡಿದರು.
ಪ್ರತಿವರ್ಷದಂತೆ ಈ ವರ್ಷವೂ ಸಹ ದೇವರಹಟ್ಟಿಯಲ್ಲಿರುವ ಸುಮಾರು 400ಕ್ಕೂ ಹೆಚ್ಚು ದನಗಳು ವಾಸಿಸುವ ಸ್ಥಳದಲ್ಲೇ ದೇವರ ಬುಡಕಟ್ಟು ಸಮುದಾಯದ ಮ್ಯಾಸಬೇಡರು ದೇವರ ಎತ್ತುಗಳು ವಾಸುವ ಸ್ಥಳದಲ್ಲೇ ರಾತ್ರಿ ಕಳೆದು ಅಲ್ಲಿ ಸಂಪ್ರದಾಯದಂತೆ ‘ಹೂಡು’(ಬೆಂಕಿ ಹಾಕುವುದು) ಸಿದ್ದ ಪಡಿಸಿ ದೇವರ ಎತ್ತುಗಳು ಅಲ್ಲಿಂದ ಹೊರ ಬರುವಂತೆ ಮಾಡುತ್ತಾರೆ.
ನಂತರ ಎತ್ತುಗಳನ್ನು ನೋಡಿಕೊಳ್ಳುವ ಕಿಲಾರಿಗಳು ಶಂಖಗಳನ್ನು ಊದಿ, ದೇವರ ಎತ್ತುಗಳು ಸ್ಥಳದಲ್ಲೇ ಇರುವಂತೆ ನೋಡಿಕೊಳ್ಳುತ್ತಾರೆ. ಬುಡಕಟ್ಟು ಸಮುದಾಯದ ಮ್ಯಾಸಬೇಡರು ತಾವೇ ತಯಾರಿಸಿಕೊಂಡು ಬಂದಿರುವ ರೊಟ್ಟಿ, ಬಾಳೆಹಣ್ಣು ಇನ್ನಿತರೆ ಪದಾರ್ಥಗಳನ್ನು ಮುಂಜಾನೆಯೇ ಎತ್ತುಗಳಿಗೆ ತಿನ್ನಿಸುವ ಮೂಲಕ ತಮ್ಮ ಹರಿಕೆಯನ್ನು ತೀರಿಸಿಕೊಳ್ಳುತ್ತಾರೆ. ಈ ಸಂದರ್ಭವನ್ನು ಸವಿಯಲು ಗ್ರಾಮದ ನೂರಾರು ಜನರು ದೇವರಹಟ್ಟಿಯಲ್ಲಿ ಜಮಾಯಿಸುತ್ತಾರೆ. ಈ ಹಬ್ಬಕ್ಕೂ ಒಂದು ವಾರದಿಂದ ಈ ಗುಡಿಕಟ್ಟಿಗೆ ಸೇರಿದ ಯಾವೊಂದು ಮನೆಯಲ್ಲಿ ತೊಗರಿಯನ್ನು ಬಳಸುವಂತಿಲ್ಲ ಎಂಬುವುದು ಕಟ್ಟುನಿಟ್ಟಿನ ಪದ್ದತಿಯಾಗಿರುತ್ತದೆ. ಈ ದೀಪಾವಳಿಯಿಂದ ಈ ಭಾಗದ ಜನರಿಗೆ ಸುಗ್ಗಿ ಕಾಲ ಪ್ರಾರಂಭದ ದಿನವಾಗಿ ಆಚರಣೆ ಮಾಡುವುದು ವಿಶೇಷ. ಪ್ರತಿವರ್ಷ ನಡೆಯುವ ಈ ದೇವರ ಎತ್ತುಗಳ ದೀಪಾವಳಿ ಹಬ್ಬ ಈ ಚಳ್ಳಕೆರೆ-ಮೊಳಕಾಲ್ಮೂರು ತಾಲ್ಲೂಕಿಗಳಲ್ಲಿ ವಿಶೇಷತೆಯನ್ನು ಪಡೆದಿದೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸೂರನಾಯಕ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಚಿನ್ನಯ್ಯ, ವಕೀಲರಾದ ನಾಗರಾಜು, ಅಪ್ಪಣ್ಣ, ಸಿದ್ದೇಶ್, ಜೋಗಯ್ಯ, ಕಿಲಾರಿ ತಿಪ್ಪೇಸ್ವಾಮಿ, ಜೋಗಿ, ಸಿ.ಕೆ.ಮಹೇಶ್ಕುಮಾರ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ