ದಾವಣಗೆರೆ:
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಶ್ರವಣ ಬೆಳಗೊಳದ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಆಪ್ತ, ಪ್ರಥಮ ದರ್ಜೆ ಗುತ್ತಿಗೆದಾರನ ದಾವಣಗೆರೆಯ ನಿವಾಸದ ಮೇಲೆ ಬುಧವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದೆ.
ನಗರದ ವಿವೇಕಾನಂದ ಬಡಾವಣೆ ನಿವಾಸಿ, ಪ್ರಥಮ ದರ್ಜೆ ಗುತ್ತಿಗೆದಾರ ಉದಯ ಶಿವಕುಮಾರ್ ಮನೆ “ಮಂಜು ಕೃಪ”ದ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ರಾತ್ರಿಯೂ ಸಹ ಉದಯ ಶಿವಕುಮಾರ್ ಆಸ್ತಿ, ವಹಿವಾಟು, ಕಾಗದ ಪತ್ರಗಳ ಪರಿಶೀಲನೆ ಮುಂದುವರೆದಿತ್ತು.
ಬೆಳಗಾವಿ, ದಾವಣಗೆರೆಯ 10 ಮಂದಿ ಐಟಿ ಅಧಿಕಾರಿಗಳನ್ನು ಒಳಗೊಂಡ ತಂಡವು ಈ ದಾಳಿ ಕೈಗೊಂಡಿದ್ದು, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಉದಯ ಶಿವಕುಮಾರ್, ಶ್ರವಣಬೆಳಗೊಳದ ಶಾಸಕ ಸಿ.ಎನ್.ಬಾಲಕೃಷ್ಣ ಅವರಿಗೂ ಆಪ್ತರು ಎನ್ನಲಾಗಿದೆ. ದಾವಣಗೆರೆಯಲ್ಲಿ ಅನೇಕ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯನ್ನು ಉದಯ ಶಿವಕುಮಾರ್ ಪಡೆದುಕೊಂಡಿದ್ದರು.
ರಾಜ್ಯದ ವಿವಿಧೆಡೆ ರಾಜಕೀಯ ಪಕ್ಷಗಳ ನಾಯಕರು, ಗುತ್ತಿಗೆದಾರರು ಹಾಗೂ ರಾಜಕಾರಣಿಗಳ ಆಪ್ತರ ಮನೆಗಳ ಮೇಲೆ ಐಟಿ ದಾಳಿ ನಡೆದಿರುವ ಬೆನ್ನಲ್ಲೇ ದಾವಣಗೆರೆಯಲ್ಲಿ ಐಟಿ ದಾಳಿ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
