ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ : ಕೃಷ್ಣ ಬಾಜಪೇಯಿ

ಹಾವೇರಿ

        17ನೆಯ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಾವೇರಿ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದು, ಮಾರ್ಚ್ 10 ರಿಂದಲೇ ನೀತಿ ಸಂಹಿತೆ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ. ಮಾರ್ಚ್ 28 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಿದೆ. ಎಪ್ರಿಲ್ 23 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನವಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಾಧ್ಯಮಗೋಷ್ಠಿ ನಡೆಸಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಾವೇರಿ ಕ್ಷೇತ್ರದ ಚುನಾವಣಾ ಸಿದ್ಧತೆ ಕುರಿತಂತೆ ಮಾಹಿತಿ ನೀಡಿದರು.

        ಲೋಕಸಭಾ ಸಾರ್ವತ್ರಿಕ ಚುನಾವಣೆ ಕರ್ನಾಟಕ ರಾಜ್ಯದಲ್ಲಿ ಎರಡು ಮತ್ತು ಮೂರನೆಯ ಹಂತದಲ್ಲಿ ನಡೆಯಲಿದೆ. ಹಾವೇರಿ ಲೋಕಸಭಾ ( ಹಾವೇರಿ ಜಿಲ್ಲೆಯ ಐದು ತಾಲೂಕು ಹಾಗೂ ಗದಗ ಜಿಲ್ಲೆಯ ಮೂರು ತಾಲೂಕು) ಚುನಾವಣೆ ಮೂರನೆಯ ಹಂತದಲ್ಲಿ ನಡೆಯಲಿದೆ. ದಿನಾಂಕ 28-03-2019 ರಂದು ಅಧಿಸೂಚನೆ ಹೊರಡಿಸಲಾಗುವುದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.

ವೇಳಾಪಟ್ಟಿ

        ಚುನಾವಣಾ ವೇಳಾಪಟ್ಟಿಯನ್ನು ವಿವರಿಸಿದ ಕೃಷ್ಣ ಬಾಜಪೇಯಿ ಅವರು ದಿನಾಂಕ 28-03-2019 ರಂದು ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ದಿನಾಂಕ 4-4-2019 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ದಿನಾಂಕ 5-4-2019 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ದಿನಾಂಕ 8-4-2019 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. 23-4-2019 ರಂದು ಮತದಾನ ನಡೆಯಲಿದೆ. ದಿನಾಂಕ 23-5-2019 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ದಿನಾಂಕ 27-5-2019 ರೊಳಗಾಗಿ ಚುನಾವಣೆಯ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.

ಕ್ಷೇತ್ರ ವ್ಯಾಪ್ತಿ

       ಹಾವೇರಿ ಲೋಕಸಭಾ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಹಾವೇರಿ ಜಿಲ್ಲೆಯ ಹಾವೇರಿ, ರಾಣೇಬೆನ್ನೂರು, ಬ್ಯಾಡಗಿ, ಹಿರೇಕೆರೂರು, ಹಾನಗಲ್ ಹಾಗೂ ಗದಗ ಜಿಲ್ಲೆಯ ಶಿರಹಟ್ಟಿ, ಗದಗ ಹಾಗೂ ರೋಣ ವಿಧಾನಸಭಾ ಕ್ಷೇತ್ರಗಳು ಒಳಗೊಂಡಿದೆ. ಹಾವೇರಿ ಜಿಲ್ಲಾಧಿಕಾರಿಗಳು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿದ್ದು, ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ನಾಮಪತ್ರ ಸಲ್ಲಿಸಬೇಕು ಎಂದು ತಿಳಿಸಿದರು.

ಮತದಾರರ ವಿವರ

       ಹಾವೇರಿ ಮತ್ತು ಗದಗ ಜಿಲ್ಲೆಯ ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ 8,61,548 ಪುರುಷರು ಹಾಗೂ 8,23,302 ಮಹಿಳೆಯರು ಸೇರಿದಂತೆ 16,84,850 ಮತದಾರರು ಮತದಾನ ಮಾಡಲು ಅರ್ಹತೆ ಹೊಂದಿದ್ದಾರೆ(16-1-2019ರಂತೆ). ( ಹಾವೇರಿ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 4,95,921 ಮಹಿಳೆಯರು ಹಾಗೂ 530131 ಪುರುಷರು ಸೇರಿ 10,21,052 ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರದ 3,27,381 ಮಹಿಳೆಯರು ಹಾಗೂ 3,31,417ಪುರುಷ ಮತದಾರರು ಒಳಗೊಂಡಂತೆ 658798 ) ನೊಂದಣಿ ಕಾರ್ಯ ಮುಂದುವರೆದಿದೆ. ಯುವ ಮತದಾರರ ನೋಂದಣಿ ಕಾರ್ಯಕ್ಕೆ ಇನ್ನೂ 10 ದಿವಸ ಕಾಲಾವಕಾಶವಿದ್ದು ಈವರೆಗೆ ಮತದಾನ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳದರು ನೋಂದಾಯಿಸಿಕೊಳ್ಳಬಹುದು.

       ಶೇ.100 ರಷ್ಟು ಮತದಾರರಿಗೆ ಭಾವಚಿತ್ರ ಸಹಿತ ಎಪಿಕ್ ಕಾರ್ಡ್ ವಿತರಿಸಲಾಗಿದೆ ಎಂದು ತಿಳಿಸಿದರು. ವೋಟರ್ ಸ್ಲೀಪ್: ಭಾವಚಿತ್ರವಿರುವ ವೋಟರ್ ಸ್ಲೀಪ್‍ಗಳನ್ನು ಮತದಾನದ ಏಳು ದಿವಸ ಮುಂಚಿತವಾಗಿ ಎಲ್ಲ ಮತದಾರರಿಗೆ ತಲುಪಿಸಲಾಗುವುದು. ಈಗಾಗಲೇ ಸಹಾಯಕ ಚುನಾವಣಾಧಿಕಾರಿಗಳು ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಮುದ್ರಿಸುವ ಕಾರ್ಯಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದರು.

        ಮತದಾನ ಮಾಡಲು ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್‍ಮ ಸೇವಾ ಭದ್ರತಾ ಗುರುತಿನ ಚೀಟಿ, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಭಾವಚಿತ್ರ ಒಳಗೊಂಡ ಪಾಸ್‍ಬುಕ್, ಪಾನ್‍ಕಾರ್ಡ್, ಉದ್ಯೋಗ ಖಾತ್ರಿ ಜಾಬ್ ಕಾರ್ಡ್, ಎನ್.ಪಿ. ಸ್ಮಾರ್ಟ್ ಕಾರ್ಡ್, ಕಾರ್ಮಿಕ ಇಲಾಖೆಯ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಭಾವಚಿತ್ರವಿರುವ ಪೆನ್‍ಶೆನ್ ದಾಖಲೆ, ಆಧಾರ್ ಕಾರ್ಡ್, ಶಾಸಕರು ಹಾಗೂ ಸಂಸದರಿಗೆ ವಿತರಿಸಿದ ಅಧಿಕೃತ ಐಡಿಂಟಿ ಕಾರ್ಡ್ ಬಳಸಿ ಮತದಾನ ಮಾಡಬಹುದು ಎಂದು ತಿಳಿಸಿದರು.

ಮತಗಟ್ಟೆ ವಿವರ

        ಹಾವೇರಿ ಲೋಕಸಭಾ ವ್ಯಾಪ್ತಿಯಲ್ಲಿ ( ಹಾವೇರಿ-ಗದಗ ಜಿಲ್ಲೆ) 1972 ಮತಗಟ್ಟೆಗಳನ್ನು ತೆರೆಯಲಾಗುವುದು. ಗದಗ ಮೂರು ವಿಧಾನಸಭಾ ವ್ಯಾಪ್ತಿಯಲ್ಲಿ 740 ಹಾಗೂ ಹಾವೇರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1232 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಯಲ್ಲೂ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಲೈಟಿಂಗ್, ಶೌಚಾಲಯ, ಪಿಠೋಪಕರಣ, ರ್ಯಾಂಪ್, ಶೆಲ್ಟರ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.

         ಜಿಲ್ಲೆಯಲ್ಲಿ ವಿಶೇಷ ಚೇತನರಿಗೆ ವಾಹನ ವ್ಯವಸ್ತೆ ಸಹ ಮಾಡಲಾಗುವುದು. ಹಾವೇರಿ ಜಿಲ್ಲೆಯಲ್ಲಿ 15,378 ನೋಂದಾಯಿತ ವಿಶೇಷ ಚೇತನ ಮತದಾರರಿದ್ದಾರೆ. ವಿಶೇಷ ಚೇತನರ ಸ್ನೇಹಿ ಮತಗಟ್ಟೆಯನ್ನು ಸ್ಥಾಪಿಸಲಾಗುವುದು. ಪ್ರತಿ ಮತಟಗಟೆಯಲ್ಲೂ ರ್ಯಾಂಪ್ ವ್ಯವಸ್ಥೆ, ವ್ಹೀಲ್ ಚೇರ್ ವ್ಯವಸ್ಥೆ, ವಿಕಲಚೇತನರ ಸ್ನೇಹಿ ಶೌಚಾಲಯ್, ಕುಡಿಯುವ ನೀರು, ವೈದ್ಯಕೀಯ ಪ್ರಥಮ ಚಿಕಿತ್ಸೆಯ ಸೌಲಭ್ಯವನ್ನು ಕೊಡಲಾಗುವುದು.

         ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಸಹ ಈ ಮತದಾರರಿಗೆ ಕಲ್ಪಿಸಲಾಗುವುದು. ಇದಲ್ಲದೆ 12 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಪಿಂಕ್ ಬಣ್ಣದಿಂದ ಸಖಿ ಮತಗಟ್ಟೆಯನ್ನು ವಿನ್ಯಾಸಗೊಳಿಸಿ ಪೂರ್ಣ ಪ್ರಮಾಣದಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿಗಳನ್ನು ಈ ಮತಗಟ್ಟೆಗೆ ನಿಯೋಜಿಸಲಾಗುವುದು. ಇದಲ್ಲದೆ ಮಾದರಿ ಪೊಲಿಂಗ್ ಸ್ಟೇಷನ್ ಸಹ ವ್ಯವಸ್ಥೆ ಮಾಡಲಾಗುವುದು. ಮತದಾನ ಮಾಡಲು ಬರುವವರಿಗೆ ವಿಶೇಷ ಅನುಭವ ನೀಡುವಂತೆ ರೂಪಿಸಲಾಗುವುದು ಎಂದು ತಿಳಿಸಿದರು.

ಸಾರಿಗೆ ವ್ಯವಸ್ಥೆ

         ಮತದಾನಕ್ಕೆ ಈಗಾಗಲೇ ಸಾರಿಗೆ ವ್ಯವಸ್ಥೆಯ ಯೋಜನೆಯನ್ನು ರೂಪಿಸಲಾಗಿದೆ. 260 ರಾಜ್ಯ ರಸ್ತೆ ಸಾರಿಗೆ ಬಸ್‍ಗಳು, 36 ಮ್ಯಾಕ್ಸಿಕ್ಯಾಬ್ ವ್ಯವಸ್ಥೆ ಮತಪೆಟ್ಟಿಗೆಗಳನ್ನು ಸಾಗಿಸಲು ಮಾಡಲಾಗಿದೆ. 21 ಜೀಪ್‍ಗಳನ್ನು ಎಂ.ಸಿ.ಟಿ. ಮತ್ತು ಇ.ಇ.ಎಂ. ಟೀಮ್‍ಗಳಿಗೆ ಒದಗಿಸಲಾಗುವುದು ಎಂದು ಹೇಳಿದರು.

        ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಸಂಪರ್ಕ ಸಾಧನೆಯ ವ್ಯವಸ್ಥೆ ಇದ್ದು, ಎಲ್ಲೆಡೆ ದೂರವಾಣಿ ಅಥವಾ ಮೊಬೈಲ್ ಸಂಪರ್ಕ ವಿರುವುದರಿಂದ ಜಿಲ್ಲೆಯಲ್ಲಿ ಸಂಪರ್ಕ ರಹಿತ ಯಾವುದೇ ಗ್ರಾಮಗಳಿರುವುದಿಲ್ಲ ಎಂದು ಹೇಳಿದರು.

        ಮಾದರಿ ನೀತಿ ಸಂಹಿತೆ: ಮಾದರಿ ನೀತಿ ಸಂಹಿತೆ ಮಾರ್ಚ್ 10 ರಿಂದಲೇ ಜಾರಿಗೆ ಬಂದಿದೆ. ಕೇಂದ್ರ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕರು, ವೆಚ್ಚ ನಿರ್ವಹಣೆಗೆ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರು ಆಗಮಿಸಲಿದ್ದಾರೆ. ಸ್ಥಳೀಯವಾಗಿ ಸಹಾಯಕ ವೆಚ್ಚ ವೀಕ್ಷಕರು, ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿದೆ. 142 ಸೆಕ್ಟರ್ ಅಧಿಕಾರಿಗಳು, 20 ಫ್ಲೈಯಿಂಗ್ ಸ್ಕ್ವಾಡ್, 23 ಸ್ಟ್ಯಾಟಿಕ್ ಸರ್ವಲೆನ್ಸ್ ಟೀಮ್, 23 ಚೆಕ್ ಪೋಸ್ಟ್ ತೆರೆಯಲಾಗಿದೆ. ವಿಡಿಯೋ ವಿವಿಂಗ್ ಟೀಮ್‍ಗಳನ್ನು ರಚಿಸಲಾಗಿದ್ದು, ಚುನಾವಣಾ ಅಕ್ರಮಗಳ ಬಗ್ಗೆ ತೀವ್ರ ನಿಗಾವಹಿಸಲಿದೆ. ಪ್ರತಿ ಚೆಕ್ ಪೋಸ್ಟ್‍ನಲ್ಲಿ ವೆಬ್‍ಕ್ಯಾಮರಾ ಅಳವಡಿಸಿದ್ದು ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾವಹಿಸಲಾಗುವುದು ಎಂದು ಹೇಳಿದರು.

ದೂರು ನಿರ್ವಹಣೆ

        ಚುನಾವಣಾ ಅಕ್ರಮಗಳು ಕಂಡು ಬಂದರೆ ಸಾರ್ವಜನಿಕರು ದೂರು ನೀಡಲು ನೆರವಾಗುವಂತೆ ಟೋಲ್ ಫ್ರೀ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. 1950 ಸಂಖ್ಯೆಗೆ ಕರೆ ಮಾಡಿ ಸಾರ್ವಜನಿಕರು ದೂರು ನೀಡಬಹುದು. ವಿಡಿಯೋ ಇತ್ಯಾದಿ ಮಾಹಿತಿ ನೀಡಲು 94484 84413 ವಾಟ್ಸಪ್ ಸಂಖ್ಯೆಗೆ ದೂರು ನೀಡಬಹುದಾಗಿದೆ. ಇದಲ್ಲದೆ ನೂತನವಾಗಿ ಈ ಚುನಾವಣೆಯಿಂದ ಭಾರತೀಯ ಚುನಾವಣಾ ಆಯೋಗ ಗೂಗಲ್ ಆಪ್ “ಸಿ ವ್ಹಿಜಿಲ್” ಎಂಬ ಆಪ್‍ನ್ನು ರೂಪಿಸಿದೆ. ಸಾರ್ವಜನಿಕರು ಇದನ್ನು ಡೌನ್‍ಲೋಡ್ ಮಾಡಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮಗಳ ಕುರಿತಂತೆ ಫೋಟೋ ಅಥವಾ ವಿಡಿಯೋ ಮೂಲಕವೂ ದೂರು ಸಲ್ಲಿಸಬಹುದು. ಈ ದೂರು ನಿರ್ವಹಣೆಗಾಗಿ ಪ್ರತ್ಯೇಕ ಘಟಕವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

        ರಾಜಕೀಯ ಪಕ್ಷಗಳ ಸಭೆ-ಸಮಾರಂಭಗಳ ಅನುಮತಿಗಾಗಿ ಅರ್ಜಿ ಸಲ್ಲಿಸಿದ 24 ತಾಸಿನಲ್ಲಿ ಅನುಮತಿ ನೀಡಲು ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಅನುಮತಿ ಪಡೆಯಲು ಸುವಿಧಾ ಅಪ್ಲಿಕೇಷನ್‍ಲ್ಲೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಸೂಕ್ಷ್ಮ- ಅತೀ ಸೂಕ್ಷ್ಮ

        ಜಿಲ್ಲೆಯ 295 ಮತಗಟ್ಟೆಗಳನ್ನು ಸೂಕ್ಷ್ಮ ಮತೆಗಳೆಂದು ಗುರುತಿಸಲಾಗಿದೆ. 31 ದುರ್ಬಲ ವರ್ಗದವರು ವಾಸಿಸುವ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಮತಗಟ್ಟೆ ವ್ಯಾಪ್ತಿಯಲ್ಲಿ 214 ಜನರನ್ನು ಪ್ರಭಾವ ಶಾಲಿಗಳೆಂದು ಗುರುತಿಸಿ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದರು.

ಮಸ್ಟರಿಂಗ್- ಡಿಮಸ್ಟರಿಂಗ್

         ದೇವಗಿರಿ ಸರ್ಕಾರಿ ಇಂಜನೀಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಎಂದು ಗುರುತಿಸಲಾಗಿದೆ. ಮತಪೆಟ್ಟಿಗೆಗಳ ವಿತರಣೆ ಮತದಾನದ ನಂತರ ಮರಳಿ ದಾಸ್ತಾನು ಮಾಡುವ ಕೇಂದ್ರವನ್ನು ಈಗಾಗಲೇ ಗುರುತಿಸಲಾಗಿದೆ. ಹಾನಗಲ್ ನಗರದ ಕುಮಾರೇಶ್ವರ ಪಿ.ಯು.ಕಾಲೇಜ್, ಹಾವೇರಿ ನಗರದ ಶಿವಲಿಂಗೇಶ್ವರ ಮಹಿಳಾ ಕಾಲೇಜ್, ಬ್ಯಾಡಗಿ ಪಟ್ಟಣದ ಎಸ್.ಜೆ.ವಿ. ಪ್ರಾಥಮಿಕ ಶಾಲೆ, ಹಿರೇಕೆರೂರು ಪಟ್ಟಣದ ಸರ್ಕಾರಿ ಪದವಿ ಕಾಲೇಜು ಹಾಗೂ ರಾಣೇಬೆನ್ನೂರು ನಗರದ ರೋಟರಿ ಪಿ.ಯು. ಕಾಲೇಜಿನಲ್ಲಿ ಮತಪೆಟ್ಟಿಗೆಗಳ ವಿತರಣೆ ಹಾಗೂ ಮತದಾನದ ನಂತರ ಮರಳಿ ದಾಸ್ತಾನು ಮಾಡಲಾಗುವುದು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ, ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link