ಚಳ್ಳಕೆರೆ
ತಾಲ್ಲೂಕಿನಾದ್ಯಂತ 2500ಕ್ಕೂ ಹೆಚ್ಚು ಪಿಂಜಾರ ಸಮುದಾಯವಿದ್ದು, ಅನೇಕ ದಶಕಗಳಿಂದ ಯಾವುದೇ ಸೌಲಭ್ಯಗಳನ್ನು ಪಡೆಯದೆ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಸಮುದಾಯ ಸಂಘಟಿತವಾಗಿದ್ದು ಮುಂಬರುವ ದಿನಗಳಲ್ಲಿ ಸರ್ಕಾರ ವಿರುದ್ದ ಹೋರಾಟ ನಡೆಸಿ ಸಮುದಾಯದ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯ ಪಡಿಸಲಾಗುವುದು ಎಂದು ರಾಜ್ಯ ನದಾಫ್ ಪಿಂಜಾರ ಸಂಘಟ ರಾಜ್ಯ ಪ್ರತಿನಿಧಿ ಕರೀಂಸಾಬ್ ತಿಳಿಸಿದ್ಧಾರೆ.
ಅವರು, ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿ ಪಿಂಜಾರ ಸಮುದಾಯದ ಏಳಿಗೆಗಾಗಿ ತಾಲ್ಲೂಕು ಮಟ್ಟದಲ್ಲಿ ಸಮಿತಿಯನ್ನು ರಚಿಸಿಕೊಳ್ಳಲಾಗಿದೆ. ಪ್ರಸ್ತುತ ರಾಜ್ಯದ ಕೇಂದ್ರ ಸಮಿತಿ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ವ್ಯಾಪಿ ಸಂಘಟನೆಗೆ ನಿರ್ದೇಶನ ನೀಡಿದೆ. ಈ ಹಿನ್ನೆಲ್ಲೆಯಲ್ಲಿ ಚಳ್ಳಕೆರೆ ತಾಲ್ಲೂಕಿನ ಪಿಂಜಾರ ಸಮಿತಿಯನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಸಮಿತಿ ಜನಾಂಗದ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಲಿದೆ ಎಂದರು.
ರಾಜ್ಯ ಸಂಘದ ನಿರ್ದೇಶನದ ಮೇರೆಗೆ ತಾಲ್ಲೂಕು ಸಮಿತಿ ರಚನೆಗೆ ಅನುಮತಿ ನೀಡಿದ್ದು, ತಾಲ್ಲೂಕಿನಾದ್ಯಂತ ಒಟ್ಟು 100ಕ್ಕೂ ಹೆಚ್ಚು ಸದಸ್ಯರು ತಮ್ಮ ಹೆಸರು ನೊಂದಾಯಿಸಿಕೊಂಡಿದ್ಧಾರೆ ಎಂದರು. ತಾಲ್ಲೂಕು ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೇಕ್ಬುಡೇನ್ ಸಾಬ್ ಮಾತನಾಡಿ, 1993-94ನೇ ಸಾಲಿನಲ್ಲಿ ಡಿ.ಹೀರೆಹಾಳ್ನ ದಿವಂಗತ ಇಬ್ರಾಹಿಂರವರು ರಾಜ್ಯ ಮಟ್ಟದ ಸಮಿತಿಯ ಸಂಸ್ಥಾಪಕರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಸಂಘಟನೆ ಬಲವಿಲ್ಲದ ಕಾರಣ ಯಾವುದೇ ಸೌಲಭ್ಯಗಳನ್ನು ಪಡೆಯಲಾಗಲಿಲ್ಲ.
ಮುಂದಿನ ದಿನಗಳಲ್ಲಿ ಸರ್ಕಾರದಿಂದ ಪಡೆಯುವ ಸೌಲಭ್ಯಗಳ ಬಗ್ಗೆ ಎಲ್ಲರ ಸಹಕಾರದಿಂದ ಹೋರಾಟ ನಡೆಸಲಾಗುವುದು ಎಂದರು.
ಸಂಘದ ತಾಲ್ಲೂಕು ಉಪಾಧ್ಯಕ್ಷರಾಗಿ ಬಾಲೇನಹಳ್ಳಿ ಕೆ.ಮಹಮ್ಮದ್ಸಾಬ್, ಕಾರ್ಯದರ್ಶಿಯಾಗಿ ಕೆ.ಬಾಬು, ಸಹಕಾರ್ಯದರ್ಶಿಯಾಗಿ ಎಂ.ಮಹಮ್ಮದ್ ಇಮಾಮ್, ಸಂಘಟನಾ ಕಾರ್ಯದರ್ಶಿಯಾಗಿ ಕಡದರಹಳ್ಳಿ ಬಾಬು, ಜಿಲ್ಲಾ ಸಮಿತಿಯ ಸದಸ್ಯರಾಗಿ ಪಿ.ಬಷಿರ್ ಹಯಾತ್, ಬಿ.ಕಲೀಂವುಲ್ಲಾ, ಎ.ಅಲ್ಲಿಪೀರ್ ಆಯ್ಕೆಯಾಗಿದ್ಧಾರೆ. ಈ ಸಂದರ್ಭದಲ್ಲಿ ಪಿ.ಪಕೀರ್ಸಾಬ್, ಗೌಸ್ಪೀರ್, ಎಚ್.ಅಬ್ದುಲ್ ಲತೀಫ್, ಕೆ.ಸಣ್ಣಕಾಸಿಂಸಾಬ್, ಬಿ.ಎಚ್.ಇಮಾಮ್ ಕಾಸಿಂಮ್, ಟಿ.ಕಲೀಲ್ಸಾಬ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
