ಮಧುಗಿರಿ :
ಪಟ್ಟಣದಲ್ಲಿ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿಗಳಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದ್ದು ಅನೇಕ ತೊಂದರೆಗಳನ್ನು ಅನುಭವಿಸುವಂತಾಗಿದೆ.
ದೊಡ್ಡಪೇಟೆ ಮತ್ತು ಮಲೇಶ್ವರಸ್ವಾಮಿ ದೇವಾಲಯದ ರಸ್ತೆ ಹಾಗೂ ಮತ್ತಿತರ ಕಡೆ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯಿಂದ ಸಾರ್ವಜನಿಕರಿಗೆ ಬಹಳ ತೊಂದರೆ ಯುಂಟಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ವ್ಯಾಪಾರ ವಹಿವಾಟು ನಡೆಸುವ ಪ್ರಮುಖ ಅಂಗಡಿಗಳು ದೊಡ್ಡಪೇಟೆಯಲ್ಲಿದ್ದು ಇದೇ ರಸ್ತೆಯ ಸಮೀಪ ಒಳ ಚರಂಡಿಗಾಗಿ ಕಳೆದ ಮೂರು ದಿನಗಳಿಂದ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಕಾಮಗಾರಿ ಪೂರ್ಣಗೊಂಡ ನಂತರವು ಸರಿಯಾಗಿ ಗುಂಡಿಯ ಸುತ್ತಲೂ ಮಣ್ಣು ಹಾಕಿ ಮುಚ್ಚಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ನಿಗದಿ ಪಡೆಸಿರುವ ವೇಳೆಯಲ್ಲಿ ವ್ಯಾಪಾರ ಮಾಡಲು ಕಷ್ಟಕರವಾಗಿದೆ.
ಇಂತಹ ವೇಳೆಯಲ್ಲಿ ಒಳ ಚರಂಡಿ ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ಹಾಗೂ ಹಲವಾರು ದ್ವಿ ಚಕ್ರ ವಾಹನ ಸವಾರರಿಗೂ ಬಹಳ ಅನನುಕೂಲ ಉಂಟಾಗಿದ್ದು, ವ್ಯಾಪಾರಕ್ಕೆ ಬರುವವರು ಗುಂಡಿಯಲ್ಲಿ ಬಿದ್ದು ಅವಘಡಗಳು ಸಂಭವಿಸಿದ್ದು, ಅವರ ಗೋಳು ಹೇಳ ತೀರದ್ದಾಗಿದೆ.
ಇನ್ನೂ ಕೆಲ ಅಂಗಡಿ ಹಾಗೂ ಟೀ ಹೊಟೇಲ್ಗಳ ಬಳಿ ತೆಗೆದಿರುವ ಗುಂಡಿಗಳ ಮಣ್ಣನ್ನು ಅಂಗಡಿಗಳ ಮುಂದೆ ಹಾಗೆಯೆ ಬಿಟ್ಟು ಹೋಗಿದ್ದು, ವ್ಯಾಪಾರ ಮಾಡಲು ಬಹಳ ಕಷ್ಟವಾಗಿದೆ ಎಂಬುದು ಚಿಲ್ಲ್ಲರೆ ಅಂಗಡಿ ಹಾಗೂ ಹೊಟೇಲ್ ಮಾಲೀಕರ ಆರೋಪವಾಗಿದೆ.
ಹಲವಾರು ಬಾರಿ ಸಂಬಂಧಪಟ್ಟರಿಗೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಿಸಿ, ಅನಾವಶ್ಯಕವಾಗಿ ಹಾಕಿರುವ ಮಣ್ಣನ್ನು ತೆರವುಗೊಳಿಸಿ ಎಂದು ಹೇಳುತ್ತಿದ್ದರೂ ಗಮನ ಹರಿಸುತ್ತಿಲ್ಲ. ಕೂಡಲೆ ಸಂಬಂಧಪಟ್ಟವರು ಸಮಸ್ಯೆಯನ್ನು ಬಗೆಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/06/09-madhugiri-03-e1623307267802.jpg)