ಸಂಪ್‌ಗೆ ಬಿದ್ದು ಇಬ್ಬರು ಮಕ್ಕಳ ದುರ್ಮರಣ

ಕಲಬುರಗಿ:

     ಕಲಬುರಗಿಯಲ್ಲಿ  ಒಂದು ಘೋರ ದುರಂತ ಸಂಭವಿಸಿದೆ. ಆಟವಾಡುತ್ತಿದ್ದ ಇಬ್ಬರು ಮಕ್ಕಳು ನೀರಿನ ಸಂಪ್‌ಗೆ   ಬಿದ್ದು ದುರ್ಮರಣ  ಹೊಂದಿದ ಘಟನೆ   ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕೋಳಕೂರ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೃತ ಮಕ್ಕಳನ್ನು ಗಿರೀಶ್ ತಿಪ್ಪಣ್ಣ (3) ಹಾಗೂ ತಿಪ್ಪಣ್ಣ ಅವರ ಸಹೋದರಿಯ ಮಗಳು ಶ್ರೇಷ್ಠಾ ಮಹೇಶ್ (2) ಎಂದು ಗುರುತಿಸಲಾಗಿದೆ.

     ಆಟವಾಡುತ್ತಿದ್ದಾಗ ಇಬ್ಬರು ಮಕ್ಕಳು ಕಣ್ಮರೆ ಆಗಿದ್ದರು. ಪೋಷಕರು ಎಷ್ಟೇ ಹುಡುಕಾಡಿದರೂ ಮಕ್ಕಳು ಸಿಕ್ಕಿರಲಿಲ್ಲ. ಮಕ್ಕಳು ಕಾಣದೆ ಇದ್ದಾಗ ಗಾಬರಿಯಾದ ಪೋಷಕರು ಗ್ರಾಮದ ಸಿದ್ದಬಸವೇಶ್ವರ ದೇವಸ್ಥಾನದ ಮೈಕ್ ಮೂಲಕ ಮಕ್ಕಳು ಕಾಣೆಯಾಗಿರುವ ಬಗ್ಗೆ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದರು. ಕೊನೆಗೆ ಪೊಲೀಸರು ಸಂಪ್ ತೆರೆದು ನೋಡಿದಾಗ ಮಕ್ಕಳು ಒಳಗೆ ಬಿದ್ದಿರುವುದು ಗೊತ್ತಾಗಿದೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆಟವಾಡುತ್ತ ಸಂಪ್‌ ಬಳಿಗೆ ಹೋದ ಮಕ್ಕಳು ಕುತೂಹಲದಿಂದ ಸಂಪ್‌ಗೆ ಬಾಗಿ ನೋಡಿದಾಗ ಬಿದ್ದಿರಬಹುದು ಎಂದು ಅನುಮಾನಿಸಲಾಗಿದೆ. ಆದರೆ ದುಷ್ಕೃತ್ಯದ ಸಾಧ್ಯತೆಯನ್ನು ಪೊಲೀಸರು ಪೂರ್ತಿ ನಿರಾಕರಿಸಿಲ್ಲ. ಹೆಚ್ಚಿನ ತನಿಖೆ ಪೊಲೀಸರಿಂದ ನಡೆಯುತ್ತಿದೆ.