ತಮಿಳು ನಟ ಮತ್ತು ನಿರ್ದೇಶಕ ಜಿ.ಮಾರಿಮುತ್ತು ನಿಧನ….!

ಚೆನ್ನೈ:

     ‘ಜೈಲರ್​’ ಸಿನಿಮಾ ಖ್ಯಾತಿಯ ತಮಿಳು ನಟ ಮತ್ತು ನಿರ್ದೇಶಕ ಜಿ.ಮಾರಿಮುತ್ತು ಇಂದು ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.

     ಧಾರಾವಾಹಿಯ ಡಬ್ಬಿಂಗ್​ ವೇಳೆ ಕುಸಿದು ಬಿದ್ದ ನಟ ಹೃದಯಾಘಾತದಿಂದ ಸಾವನ್ನಪ್ಪಿದರು ಎಂದು ವರದಿಯಾಗಿದೆ. ನಟನ ಹಠಾತ್​ ಸಾವು ತಮಿಳು ಚಿತ್ರರಂಗ ಮತ್ತು ಅವರ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.

    ಧಾರಾವಾಹಿಯೊಂದರ ಡಬ್ಬಿಂಗ್​ ವೇಳೆ ಮಾರಿಮುತ್ತು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದರು. ಕೂಡಲೇ ಅವರ ಸಹೋದ್ಯೋಗಿಗಳು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅದಾಗಲೇ ಮಾರಿಮುತ್ತು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಖಾಸಗಿ ದೂರದರ್ಶನದಲ್ಲಿ ಮಾರಿಮುತ್ತು ನಟಿಸುತ್ತಿದ್ದ ಧಾರಾವಾಹಿ ಜನಪ್ರಿಯವಾಗಿತ್ತು.

    ಖಾಸಗಿ ಆಸ್ಪತ್ರೆಯಲ್ಲಿರುವ ಪಾರ್ಥಿವ ಶರೀರಕ್ಕೆ ಸಿನಿಮಾ ತಾರೆಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮೃತದೇಹವನ್ನು ಹುಟ್ಟೂರು ತೇಣಿ ಜಿಲ್ಲೆಯ ವಾರಸನಾಡು ಪಕ್ಕದ ಗ್ರಾಮಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಜಿ.ಮಾರಿಮುತ್ತು ಬಗ್ಗೆ..: 1990ರಲ್ಲಿ ಜಿ.ಮಾರಿಮುತ್ತು ತಮ್ಮ ಹುಟ್ಟೂರಾದ ತೇಣಿಯಿಂದ ಸಿನಿಮಾ ನಿರ್ದೇಶಕನಾಗುವ ಕನಸಿನೊಂದಿಗೆ ಚೆನ್ನೈಗೆ ಆಗಮಿಸಿದ್ದರು. ‘ಅರಣ್ಮನೈ ಕಿಲಿ’ (1993) ಮತ್ತು ‘ಎಲ್ಲಾಮೆ ಎನ್​ ರಸತಾನ್​’ (1995) ನಂತಹ ಚಲನಚಿತ್ರಗಳಲ್ಲಿ ರಾಜ್ಕಿರಣ್​ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

    ಬಳಿಕ ಸಹಾಯಕ ನಿರ್ದೇಶಕರಾಗಿಯೇ ತಮ್ಮ ವೃತ್ತಿಜೀವನದಲ್ಲಿ ಮುಂದುವರೆದರು. ಹೆಸರಾಂತ ಚಲನಚಿತ್ರ ನಿರ್ಮಾಪಕರಾದ ಮಣಿರತ್ನಂ, ವಸಂತ್​, ಸೀಮಾನ್​ ಮತ್ತು ಎಸ್​ಜೆ ಸೂರ್ಯ ಅವರೊಂದಿಗೆ ಕೆಲಸ ಮಾಡಿದ್ದಾರೆ. ಸಿಲಂಬಸರನ್​ ಅವರ ‘ಮನ್ಮಧನ್’ ಸಿನಿಮಾದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

   2008ರಲ್ಲಿ ಪ್ರಸನ್ನ ಮತ್ತು ಉದಯತಾರಾ ಅಭಿನಯದ ‘ಕಣ್ಣುಂ ಕಣ್ಣುಂ’ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡಿತು. ಆದರೆ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆಯಿತು. ನಂತರದಲ್ಲಿ, ಮಲಯಾಳಂ ಚಿತ್ರ ‘ಚಪ್ಪಾ ಕುರಿಶು’ (2011) ನಿಂದ ಸ್ಫೂರ್ತಿ ಪಡೆದು ‘ಪುಲಿವಾಲ್​’ (2014) ಸಿನಿಮಾ ಮಾಡಿದರು.

    2010ರಿಂದ ಮಾರಿಮುತ್ತು ನಟನೆಯತ್ತ ಒಲವು ತೋರಿದರು. ವಿವಿಧ ತಮಿಳು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. ಮಿಸ್ಕಿನ್​ ಅವರ ‘ಯುದ್ಧಮ್ ಸೇ’ (2011) ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಭ್ರಷ್ಟ ಪೊಲೀಸ್​ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರದ ಯಶಸ್ಸಿನ ಬಳಿಕ ಆರೋಹಣಂ (2012), ನಿಮಿರಂದು ನಿಲ್​ (2014), ಕೊಂಬನ್​ (2015)ನಂತಹ ಸೂಪರ್​ಹಿಟ್​ ಸಿನಿಮಾಗಳಲ್ಲಿ ಪೊಲೀಸ್​ ಅಧಿಕಾರಿಯಾಗಿ ನಟಿಸಿದ್ದರು.

    ಮರುದು (2016) ಚಿತ್ರದಲ್ಲಿ ಮಾರಿಮುತ್ತು ಅಭಿನಯವು ನಟ ವಿಶಾಲ್​ ಅವರ ಗಮನ ಸೆಳೆಯಿತು. ಹಾಗಾಗಿ ಅವರು ಕತ್ತಿ ಸಂದೈ (2016) ಚಿತ್ರದಲ್ಲಿ ನಟಿಸಿದರು. ಬಳಿಕ ಕಿರುತೆರೆ ಧಾರಾವಾಹಿಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡರು. ಎಥಿರ್ನೀಚಲ್​ನಲ್ಲಿನ ಪಾತ್ರಕ್ಕಾಗಿ ಮಾರಿಮುತ್ತು ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap