ಕೊಲ್ಕತ್ತ
ವ್ಯಾಪಕ ಘರ್ಷಣೆಗಳ ನಡುವೆ ಪಶ್ಚಿಮ ಬಂಗಾಳದ 9 ಲೋಕಸಭಾ ಕ್ಷೇತ್ರಗಳಿಗೆ ಭಾನುವಾರ ನಡೆದ ಮತದಾನದಲ್ಲಿ ಶೇ.73.5ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಡಂಡಂ, ಬಸೀರ್ ಹತ್, ಜಯನಗರ, ಮಥುರಾಪುರ, ಡೈಮಂಡ್ ಹಾರ್ಬರ್, ಜಾದವ್ ಪುರ್, ಕೊಲ್ಕತ್ತ ಉತ್ತರ, ಕೊಲ್ಕತ್ತ ದಕ್ಷಿಣ ಹಾಗೂ ಬರಾಸತ್ ಕ್ಷೇತ್ರಗಳಿಗೆ ಕೊನೆಯ ಹಂತದಲ್ಲಿ ಚುನಾವಣೆ ನಡೆಯಿತು. ಕೆಲವು ಸಣ್ಣ ಪುಟ್ಟ ಹಿಂಸಾಚಾರ ಘಟನೆಗಳನ್ನು ಹೊರತು ಮತದಾನ ಬಹುತೇಕ ಶಾಂತಿಯುತವಾಗಿತ್ತು. 111 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು 1,49, 63,143 ಮತದಾರರು ನಿರ್ಧರಿಸಲಿದ್ದಾರೆ.
ಉತ್ತರ 24 ಪರ್ ಗನಾಸ್ ಜಿಲ್ಲೆಯ ಸಶಾನ್ನಲ್ಲಿ ಅರೆಸೇನಾ ಪಡೆಗಳೊಂದಿಗೆ ಗ್ರಾಮಸ್ಥರು ಘರ್ಷಣೆಗೆ ಇಳಿದಾಗ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿಗೆ ಮತ ಚಲಾಯಿಸುವಂತೆ ಭದ್ರತಾ ಪಡೆಗಳು ಸ್ಥಳೀಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಗ್ರಾಮದ ವ್ಯಕ್ತಿಯೊಬ್ಬನ ಮೇಲೆ ಸೇನಾಪಡೆಗಳು ಹಲ್ಲೆ ನಡೆಸಿದ್ದು, ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ಇದರಿಂದ ಕೋಪಗೊಂಡ ಆತನ ತಾಯಿ ಪೊಲೀಸ್ ಬೆಂಗಾವಲು ಪಡೆ ಮೇಲೆ ಕಲ್ಲು ತೂರಿದ್ದಾಳೆ. ಗ್ರಾಮದಲ್ಲಿ ಹಿಂಸಾಚಾರದಿಂದ ಮತದಾನವನ್ನು ಸ್ಪಲ್ಪ ಹೊತ್ತು ಸ್ತಗಿತಗೊಳಿಸಲಾಗಿತ್ತು.
ಬಾತ್ಪಾರದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಈ ಪ್ರದೇಶ, ಬಿಜೆಪಿ ನಾಯಕ ಅರ್ಜುನ್ ಸಿಂಗ್ ಭದ್ರಕೋಟೆ ಎನಿಸಿದೆ.
ಇಂದು ಬೆಳಿಗ್ಗೆ ಉತ್ತರ 24 ಪರಗನಾಸ್ನ ಕಂಕಿನಾರದ ಕಟಾಪುಕುರ್ ಪ್ರದೇಶದಲ್ಲಿ ಭತ್ಪಾರ ವಿಧಾನಭಾ ಕ್ಷೇತ್ರದ ಉಪಚುನಾವಣೆಗೆ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮದನ್ ಮಿತ್ರ ಕಾರ್ ಮೇಲೆ ಕಚ್ಚಾ ಬಾಂಬ್ಗಳು ಮತ್ತು ಇಟ್ಟಿಗೆಗಳನ್ನು ಎಸೆದಿದ್ದಾರೆನ್ನಲಾಗಿದೆ.
ತೃಣಮೂಲ ಕಾಂಗ್ರೆಸ್ ಸಂಸದ ಬಾರಾಸತ್ ಅಭ್ಯರ್ಥಿ ಕಕೊಲಿ ಘೋಷ್ ಅವರು ದಾಳಿ ಖಂಡಿಸಿ ನ್ಯೂ ಟೌನ್ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು. ಕೇಂದ್ರೀಯ ಪಡೆಗಳು ಮತದಾರರನ್ನು ಬೆದರಿಸುತ್ತಿದ್ದು, ‘ಜೈ ಶ್ರೀ ರಾಮ್’ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಮಧ್ಯೆ, ನೀತಿ ಸಂಹಿತೆ ಮುಗಿಯುವವರೆಗೆ ಕೇಂದ್ರೀಯ ಪಡೆಗಳು ಪಶ್ಚಿಮ ಬಂಗಾಳದಲ್ಲಿ ಇರಬೇಕೆಂದು ಬಿಜೆಪಿ ಒತ್ತಾಯಿಸಿದೆ. ಈ ಮಧ್ಯೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಿರ್ದೇಶನದಂತೆ ಭದ್ರತಾ ಪಡೆಗಳು ಜನರಿಗೆ ಹಿಂಸೆ ನೀಡುತ್ತಿವೆ ಎಂದು ಆರೋಪಿಸಿದ್ದಾರೆ.