ನವದೆಹಲಿ:
ಕೋವಿಡ್-19 ಹಿನ್ನೆಲೆಯಲ್ಲಿ ಬಿಹಾರ ವಿಧಾನಸಭೆ ಚುನಾವಣೆಯನ್ನು ಮುಂದೂಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಎಸ್ ರೆಡ್ಡಿ ಮತ್ತು ಎಂ ಆರ್ ಶಾ ಅವರ ನೇತೃತ್ವದ ನ್ಯಾಯಪೀಠ ಇಂದು, ಬಿಹಾರ ವಿಧಾನಸಭೆ ಚುನಾವಣೆ ಮುಂದೂಡಲು ಕೋವಿಡ್-19 ಕಾರಣವಾಗಬಾರದು, ಚುನಾವಣೆ ನಡೆಸಲು ಆಯೋಗ ಎಲ್ಲಾ ರೀತಿಯ ಎಚ್ಚರಿಕೆ, ಮುಂಜಾಗ್ರತೆ ತೆಗೆದುಕೊಳ್ಳುತ್ತದೆ, ಅಷ್ಟಕ್ಕೂ ಚುನಾವಣೆ ನಡೆಸಲು ಇನ್ನೂ ಅಧಿಸೂಚನೆಯೇ ಪ್ರಕಟವಾಗಿಲ್ಲ, ಹಾಗಾಗಿ ಈ ಅರ್ಜಿ ಆತುರದ್ದಾಗಿರುತ್ತದೆ ಎಂದು ಹೇಳಿದೆ.
ಚುನಾವಣೆ ಮುಂದೂಡುವಂತೆ ಅರ್ಜಿ ಸಲ್ಲಿಸಿದ್ದ ಅವಿನಾಶ್ ಠಾಕೂರ್, ಜನಪ್ರತಿನಿಧಿಗಳ ಕಾಯ್ದೆ ಅಡಿ ಕೋವಿಡ್-19 ಸಾಂಕ್ರಾಮಿಕ ಇರುವುದರಿಂದ ಬಿಹಾರ ವಿಧಾನಸಭೆ ಚುನಾವಣೆಯನ್ನು ಮುಂದೂಡುವಂತೆ ಮುಖ್ಯ ಚುನಾವಣಾ ಆಯುಕ್ತರಿಗೆ ಆದೇಶ ನೀಡಬೇಕೆಂದು ಒತ್ತಾಯಿಸಿದ್ದರು.ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿಗಳು, ಚುನಾವಣೆ ನಡೆಸಬೇಡಿ ಎಂದು ಭಾರತೀಯ ಚುನಾವಣಾ ಆಯೋಗವನ್ನು ನಾವು ಹೇಳಲು ಹೇಗೆ ಸಾಧ್ಯ, ಚುನಾವಣೆ ಮುಂದೂಡಲು ಕೋವಿಡ್-19 ಒಂದು ಬಲವಾದ ಕಾರಣವಲ್ಲ ಎಂದು ಹೇಳಿದರು.








