ನವದೆಹಲಿ:
ಪ.ಬಂಗಾಳದ ಮುಖ್ಯಮಂತ್ರಿ ಪೋಟೋ ತಿರುಚಿದ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅರುಣಾ ಜೇಟ್ಲಿ ಅವರ ವಿರುದ್ಧ ಕಾಂಗ್ರೆಸ್ ನಾಯಕಿ ರಮ್ಯಾ ವಾಗ್ದಾಳಿ ನಡೆಸಿದ್ದು,ಮೋದಿ ಅವರನ್ನು ಸರ್ವಾಧಿಕಾರಿ ಎಂದು ಹೇಳುತ್ತಿರಾ? ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋವನ್ನು ಇದೇ ರೀತಿಯಲ್ಲಿ ತಿರುಚಿದ ಆರೋಪವನ್ನು ರಮ್ಯಾ ಎದುರಿಸುತ್ತಿದ್ದಾರೆ.ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಚಿತ್ರವನ್ನು ಫೋಟೋಶಾಪ್ ಮಾಡಿ ಜೈಲುಪಾಲಾಗಿದ್ದ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ ನಂತರ ರಮ್ಯಾ ಈ ರೀತಿಯಲ್ಲಿ ವಾಗ್ದಾಳಿ ನಡೆಸದ್ದಾರೆ.
ದೀದಿ ಅವರ ತಿರುಚಿದ ಪೋಟೋ ಕುರಿತಂತೆ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದ ಅರುಣ್ ಜೇಟ್ಲಿ, ಹಾಸ್ಯ, ಬುದ್ಧಿ, ಚುಚ್ಚುಮಾತು ಮುಕ್ತ ಸಮಾಜದಲ್ಲಿ ಉಳಿದುಕೊಂಡಿವೆ. ಅವುಗಳಿಗೆ ಸರ್ವಾಧಿಕಾರ ಇರುವಲ್ಲಿ ಯಾವುದೇ ಸ್ಥಾನವಿಲ್ಲ. ಸರ್ವಾಧಿಕಾರಿಗಳಿಗೆ ನಗುವುದು ಇಷ್ಟವಿರುವುದಿಲ್ಲ,ಆದ್ದರಿಂದ ಬಂಗಾಳದಲ್ಲಿ ಈ ಪ್ರಕರಣವಾಗಿದೆ ಎಂದಿದ್ದರು.
ಇದರ ವಿರುದ್ಧ ವಾಗ್ದಾಳಿ ನಡೆಸಿರುವ ರಮ್ಯಾ, ಜೇಟ್ಲಿ ಅವರ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಇದೇ ರೀತಿಯಲ್ಲಿ ಮೋದಿ ಪೋಟೋ ತಿರುಚಿದ ಆರೋಪ ಎದುರಿಸುತ್ತಿರುವ ನಾನು ಹೇಗೆ ಹೊರಬರಬೇಕು? ಮೋದಿ ಸರ್ವಾಧಿಕಾರಿ ಅಂತಾ ನೀವು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.