ಬೆಂಗಳೂರು :
ಧರ್ಮಸ್ಥಳದಲ್ಲಿ ಯೂಟ್ಯೂಬರ್ಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಎರಡು ಗುಂಪುಗಳ ನಡುವೆ ಘರ್ಷಣೆ ಆಗಿರುವ ಮಾಹಿತಿ ಬಂದಿದೆ. ಏಕೆ ಆಗಿದೆ? ಕಾರಣ ಏನು? ಉದ್ದೇಶ ಏನು? ಎಂಬ ವರದಿ ನೀಡಲು ಸೂಚನೆ ನೀಡಿದ್ದೇನೆ. ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾಕೆ ಗಲಾಟೆ ಆಗುತ್ತಿದೆ ಅನ್ನುವುದು ನನಗೆ ಗೊತ್ತಿಲ್ಲ. ಜನರ ಆಗ್ರಹ ಹಿನ್ನೆಲೆಯಲ್ಲಿ ತನಿಖೆಗೆ ಎಸ್ಐಟಿ ರಚನೆ ಮಾಡಿದ್ದೇವೆ. ವ್ಯಕ್ತಿಯೊಬ್ಬ ಅನೇಕ ಶವ ಹೂತಿದ್ದೇನೆ ಎಂಬ ಮಾಹಿತಿ ನೀಡಿದ್ದಾನೆ. ಸುಮಾರು 13 ಸ್ಥಳಗಳಲ್ಲಿ ಉತ್ಖನನ ಕಾರ್ಯ ನಡೆದಿದೆ. 6ನೇ ಪಾಯಿಂಟ್ನಲ್ಲಿ ಪುರುಷನ ಅಸ್ಥಿಪಂಜರ ಸಿಕ್ಕಿದೆ ಎಂದಿದ್ದಾರೆ.
ಬೇರೆ ಗುಡ್ಡದಲ್ಲಿ ಮೂಳೆಗಳು ಸಿಕ್ಕಿವೆ. ಈ ಕುರಿತು ಎಫ್ ಎಸ್ಎಲ್ಗೆ ಮೂಳೆಗಳನ್ನು ಕಳುಹಿಸಿದ್ದಾರೆ. ನಿನ್ನೆ ಗಲಾಟೆ ಸಂಬಂಧ ಎರಡು ಗುಂಪಿನವರು ದೂರು ಕೊಟ್ಟಿದ್ದಾರೆ. ತನಿಖೆ ಮಾಡಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಯಾರು ಏನು ಹೇಳಿಕೆ ಕೊಡುತ್ತಾರೆ ಅನ್ನೋದು ಮುಖ್ಯವಲ್ಲ. ಸತ್ಯ ಹೊರಬರುವುದು ಅಷ್ಟೇ ಮುಖ್ಯ. ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ ಸಚಿವರು ತಿಳಿಸಿದರು.








