ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಯಿಂದಾಗುವ ಅಪಾಯ
ತುಮಕೂರು
ರಾಷ್ಟ್ರವ್ಯಾಪಿ ವಿವಿಧ ರೈತ ಕಾರ್ಮಿಕ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆಯೂ ಸಂಸತ್ ಅಂಗೀಕರಿಸಿದ್ದ ಮೂರು ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ಸೆಪ್ಟೆಂಬರ್ 27 ರ ಭಾನುವಾರ ಅಂಕಿತ ಹಾಕಿದ್ದಾರೆ. ಇದರೊಂದಿಗೆ ಇವೆಲ್ಲ ಈಗ ಕಾಯ್ದೆಯಾಗಿ ಮಾರ್ಪಾಡಾಗಲಿವೆ. ಈ ಮೂರು ಕೃಷಿಗೆ ಸಂಬಂಧಿಸಿದ ಮಸೂದೆಗಳ ಪೈಕಿ ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆಯೂ ಒಂದು.
ರೈತರನ್ನು ಎಪಿಎಂಸಿ ಮಾರುಕಟ್ಟೆ ನಿರ್ಬಂಧದಿಂದ ಮುಕ್ತಗೊಳಿಸಿ ಯಾವುದೇ ಮಾರುಕಟ್ಟೆಗಳಲ್ಲಿ ಉತ್ಪನ್ನ ಮಾರಾಟ ಮಾಡಲು ಅವಕಾಶ, ಆನ್ಲೈನ್ ಮೂಲಕ ರೈತರ ಉತ್ಪನ್ನಗಳ ವ್ಯವಹಾರ ನಡೆಸಲು ಒಪ್ಪಿಗೆ. ಇದಕ್ಕಾಗಿ ಪ್ರತ್ಯೇಕ ವೇದಿಕೆ ಅಸ್ತಿತ್ವಕ್ಕೆ ತರುವುದು, ದೇಶದ ಯಾವುದೇ ಪ್ರದೇಶದಿಂದ ಆನ್ಲೈನ್ ಮೂಲಕ ಖರೀದಿ-ಮಾರಾಟಕ್ಕೆ ಅವಕಾಶ ಕಲ್ಪಿಸುವುದು ಈ ಕಾಯ್ದೆಯ ಪ್ರಮುಖ ಕೆಲವು ಮುಖ್ಯಾಂಶಗಳು.
ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಯಿಂದಾಗಿ ಕೃಷಿ ವಲಯಕ್ಕೆ ಬಂಡವಾಳ ಆಕರ್ಷಿಸಬಹುದು. ವರ್ತಕರು ಇನ್ನು ಮುಂದೆ ಎಷ್ಟು ಪ್ರಮಾಣದ ವಸ್ತುಗಳನ್ನಾದರೂ ದಾಸ್ತಾನು ಇಟ್ಟುಕೊಳ್ಳಬಹುದು ಎಂದು ಹೇಳುವ ಮೂಲಕ ಬಂಡವಾಳ ಹೂಡಿಕೆದಾರರಿಗೆ ಕೇಂದ್ರ ಸರ್ಕಾರ ಅಭಯ ನೀಡಿದೆ. ತಮ್ಮ ವ್ಯವಹಾರಗಳಲ್ಲಿ ಅತಿಯಾದ ನಿಯಂತ್ರಣ ಮತ್ತು ಹಸ್ತಕ್ಷೇಪವಾಗುತ್ತಿದೆ ಎಂಬ ಖಾಸಗಿ ಹೂಡಿಕೆದಾರರ ಭಯ ನಿವಾರಣೆ ಮಾಡುವುದೇ ಈ ನೂತನ ಕಾಯ್ದೆಯ ಪ್ರಮುಖ ಉದ್ದೇಶವಾಗಿತ್ತು. ಅದು ಈಗ ಈಡೇರಿದಂತಾಗಿದೆ.
ಬಂಡವಾಳ ಹೂಡಿಕೆದಾರರನ್ನು ಸಂತೃಪ್ತಿಗೊಳಿಸುವ, ಕೃಷಿ ಕ್ಷೇತ್ರ ವ್ಯಾಪ್ತಿಯನ್ನು ವಿಸ್ತರಿಸುವ ಚಿಂತನೆಯಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತರಲಾಗಿದ್ದು, ಭವಿಷ್ಯದಲ್ಲಿ ಒಟ್ಟಾರೆ ಕೃಷಿ ಕ್ಷೇತ್ರ ಹಾಗೂ ಇದಕ್ಕೆ ಪೂರಕವಾಗಿರುವ ಇತರರ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳೆ ದಟ್ಟವಾಗಿ ಕಾಣಿಸುತ್ತಿವೆ. ಪ್ರತಿಭಟನೆ ನಡೆಸುತ್ತಿರುವವರ ಆತಂಕವೂ ಇದೇ ಆಗಿದೆ. ಕೃಷಿ ವಲಯದಲ್ಲಿ ಕಾರ್ಪೊರೇಟ್ ಕಂಪನಿಗಳು ಮೇಲುಗೈ ಸಾಧಿಸಲು ನೂತನ ಮಸೂದೆಗಳು ನೆರವಾಗಲಿವೆ. ಮುಂದಿನ ದಿನಗಳಲ್ಲಿ ಬಹುರಾಷ್ಟ್ರೀಯ ಅಥವಾ ಕಾರ್ಪೊರೇಟ್ ಕಂಪನಿಗಳೆ ಬೆಲೆ ನಿಗದಿ ಮಾಡುವ ಸಾಧ್ಯತೆಗಳಿರುವ ಕಾರಣ ನಿಜವಾದ ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ.
`ವ್ಯವಸಾಯ ಎಂದರೆ ಮನೆ ಮಕ್ಕಳೆಲ್ಲಾ ಸಾಯ’ ಎನ್ನುವಂತಹ ಪರಿಸ್ಥಿತಿ ಗ್ರಾಮೀಣ ಪ್ರದೇಶಗಳಲ್ಲಿದೆ. ಈ ಕ್ಷೇತ್ರದಲ್ಲಿ ಹೆಚ್ಚು ಬಂಡವಾಳ ಹೂಡಿ ವಾಣಿಜ್ಯ ಬೆಳೆ ತೆಗೆದಿರುವ ಕೆಲವೇ ರೈತರು ಸುಸ್ಥಿತಿಯಲ್ಲಿದ್ದು, ಇನ್ನು ಬಹಳಷ್ಟು ರೈತರು ಕಷ್ಟದಾಯಕ ಪರಿಸ್ಥಿತಿಯಲ್ಲಿದ್ದಾರೆ.
ಕೃಷಿಯಲ್ಲಿನ ಸಂಕಷ್ಟಗಳು ಮತ್ತು ಕಡಿಮೆ ಆದಾಯವನ್ನು ಪರಿಗಣಿಸಿಯೇ ಆ ಕುಟುಂಬಗಳ ಮಕ್ಕಳು ನಗರವಾಸಿಗಳಾಗುತ್ತಿದ್ದಾರೆ. ಕೃಷಿ ಕ್ಷೇತ್ರವನ್ನು ಶೇ.70 ರಷ್ಟು ಮಂದಿ ನಮ್ಮ ದೇಶದಲ್ಲಿ ಅವಲಂಬಿಸಿದ್ದರು. ಕ್ರಮೇಣ ಈ ಸಂಖ್ಯೆ ಇಳಿಮುಖವಾಗುತ್ತಿದೆ. ಸರ್ಕಾರಗಳು ಈ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ ಗೋಜಿಗೆ ಹೋಗಲೇ ಇಲ್ಲ. ಪರಿಣಾಮವಾಗಿ ಸಮಸ್ಯೆಗಳು ಬೆಟ್ಟದಾಕಾರದಷ್ಟು ಬೆಳೆದಿವೆ. ರೈತನಿಗೆ ಮುಖ್ಯವಾಗಿ ಬೇಕಾಗಿರುವುದು ತಾನು ಬೆಳೆದ ಬೆಳೆಗೆ ವೈಜ್ಞಾನಿಕ -ಸಮಂಜಸ ಬೆಲೆ ಸಿಗಬೇಕು ಎಂಬುದು. ಕನಿಷ್ಠ ಬೆಂಬಲ ಬೆಲೆಗಾಗಿ ರೈತ ಸಂಘಟನೆಗಳು ಹೋರಾಡುತ್ತಲೇ ಬಂದಿವೆ. ಆದರೆ ಮೂಗಿಗೆ ತುಪ್ಪ ಸವರುವ ನೀತಿಗಳೇ ಬರುತ್ತಿವೆಯೇ ಹೊರತು ಮೂಲ ಸಂಕಷ್ಟಗಳು ನಿವಾರಣೆಯಾಗುತ್ತಿಲ್ಲ. ಸೂಕ್ತ ಬೆಲೆ ಸಿಗುತ್ತಿಲ್ಲ.
ನೂತನ ತಿದ್ದುಪಡಿ ಕಾಯ್ದೆಯಲ್ಲಿ ಧಾನ್ಯಗಳು, ಅಡುಗೆ ಎಣ್ಣೆ, ಎಣ್ಣೆ ಕಾಳುಗಳು, ದ್ವಿದಳ ಧಾನ್ಯ, ಈರುಳ್ಳಿ, ಆಲೂಗಡ್ಡೆ ಇತರೆ ಬೆಳೆಗಳ ಮೇಲೆ ಇರುವ ನಿಯಂತ್ರಣ ತೆಗೆದು ಹಾಕಲಾಗಿದೆ. ಇನ್ನು ಮುಂದೆ ವರ್ತಕರು ಎಷ್ಟು ಪ್ರಮಾಣದಲ್ಲಿ ಬೇಕಾದರೂ ದಾಸ್ತಾನು ಇಟ್ಟುಕೊಳ್ಳಲು ಮಿತಿ ಇರುವುದಿಲ್ಲ.
ನಮ್ಮ ಸರ್ಕಾರಿ ವ್ಯವಸ್ಥೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿವೆ. ಕೃಷಿ ಇಲಾಖೆ ಕೇಂದ್ರಗಳಿವೆ. ತೋಟಗಾರಿಕೆ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಈ ಮೂರೂ ಇಲಾಖೆಗಳು ಸಹ ಒಂದಲ್ಲ ಒಂದು ರೀತಿಯಲ್ಲಿ ರೈತರಿಗೆ ನೆರವಾಗಬೇಕಾದ ಇಲಾಖೆಗಳು. ಇವುಗಳನ್ನೇ ಪರಸ್ಪರ ಲಿಂಕ್ ಜೋಡಣೆ ಮಾಡಿ ಒಂದು ವೆಬ್ಸೈಟ್ ರಚಿಸಿ ಆ ಮೂಲಕ ರೈತರ ಉತ್ಪನ್ನಗಳನ್ನು ಆನ್ಲೈನ್ ಮೂಲಕ ಬಹಿರಂಗಪಡಿಸುವ ವ್ಯವಸ್ಥೆ ಮಾಡಬಹುದಿತ್ತು. ಇದರಿಂದ ಸಾರ್ವಜನಿಕವಾಗಿ ರೈತರ ಉತ್ಪನ್ನಗಳ ಮಾಹಿತಿ ಲಭ್ಯವಾಗಿ ಆಸಕ್ತರ ಖರೀದಿಗೂ ಅನುಕೂಲವಾಗುತ್ತಿತ್ತು. ಇರುವ ವ್ಯವಸ್ಥೆಯನ್ನೇ ಬಳಸಿಕೊಂಡು ಏನೆಲ್ಲಾ ಮಾಡಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ. ದೂರದ ಬೆಟ್ಟ ನುಣ್ಣಗೆ ಎಂಬಂತೆ ಹೊಸ ಕಾನೂನಿನಿಂದ ಎಲ್ಲವೂ ಬದಲಾಗಲಿದೆ ಎಂಬ ನಿರೀಕ್ಷೆ ಹುಸಿಯಾಗದು ಎಂಬುದಕ್ಕೆ ಖಾತ್ರಿ ಏನೂ ಇಲ್ಲ.
ಕಾಯಿದೆಯ ಉದ್ದೇಶವೆ ಬುಡಮೇಲಾಗುವ ಅಪಾಯ
1955 ರಲ್ಲಿ ಜಾರಿಗೆ ಬಂದ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆಯ ಮುಖ್ಯ ಉದ್ದೇಶ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಆಹಾರ ಧಾನ್ಯಗಳನ್ನು ಸಮಂಜಸ ಬೆಲೆಯಲ್ಲಿ ಸರಬರಾಜು ಮಾಡುವುದು, ಇದಕ್ಕಾಗಿಯೇ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವುದು ಆಗಿತ್ತು. ಬಡವರಿಗೆ ಸಬ್ಸಿಡಿ ಮೂಲಕ ಆಹಾರ ಧಾನ್ಯಗಳನ್ನು ಅಥವಾ ಇತರೆ ವಸ್ತುಗಳನ್ನು ನೀಡುವ ವ್ಯವಸ್ಥೆ ಜಾರಿಗೆ ಬಂದದ್ದೇ ಇಂತಹ ನೀತಿಗಳಿಂದಾಗಿ. ಅಕ್ಕಿ, ಗೋಧಿ, ಸಕ್ಕರೆ, ಸೀಮೆಎಣ್ಣೆ ಇವೆಲ್ಲ ಇದರೊಳಗೆ ಸೇರಿಕೊಂಡಿದ್ದವು. ಪರಿಣಾಮವಾಗಿ ಆಹಾರ ನಿಗಮ ಸ್ಥಾಪಿಸಲಾಯಿತು. ಗ್ರಾಹಕ ವ್ಯವಹಾರ ಇಲಾಖೆಯೂ ಅಸ್ತಿತ್ವಕ್ಕೆ ಬಂದಿತು. ಈ ಎಲ್ಲಾ ಯೋಜನೆಗಳು ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿತ್ತೋ ಅದಾಗಲಿಲ್ಲ. ಈ ವ್ಯವಸ್ಥೆಯಲ್ಲಿರುವ ಕೆಲವು ಲೋಪದೋಷಗಳನ್ನು ಸರಿಪಡಿಸಿದರೆ ಇನ್ಯಾವ ಹೊಸ ಕಾನೂನುಗಳ ಅವಶ್ಯಕತೆಯೂ ಇಲ್ಲ. ಆದರೆ ಈಗ ಬರುತ್ತಿರುವ ಹೊಸ ಕಾನೂನುಗಳು ಹಿಂದಿನ ವ್ಯವಸ್ಥೆಯನ್ನು ಬುಡಮೇಲು ಮಾಡುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿವೆ.
ಇದಕ್ಕೆ ಒಂದು ಉದಾಹರಣೆಯಂದರೆ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ. ಬಡವರಿಗೆ ಸಬ್ಸಿಡಿ ದರದಲ್ಲಿ ವಿತರಣೆ ಮಾಡಲಾಗುತ್ತಿದ್ದ ಹಲವು ಪದಾರ್ಥಗಳನ್ನು ಕ್ರಮೇಣ ಕಡಿತಗೊಳಿಸಲಾಗುತ್ತಿದೆ. ಸೀಮೆಎಣ್ಣೆ ಈಗ ವಿತರಣೆಯಾಗುತ್ತಿಲ್ಲ. ಗೃಹ ಬಳಕೆ ಅನಿಲ ಸಿಲಿಂಡರ್ಗೆ ನೀಡಲಾಗುತ್ತಿದ್ದ ಸಬ್ಸಿಡಿ ನಿಂತು ಹೋಗಿ ಬಹಳ ತಿಂಗಳುಗಳೇ ಆಯಿತು. ಮುಂದಿನ ದಿನಗಳಲ್ಲಿ ಕ್ರಮೇಣ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರವೂ ಏರುಪೇರಾಗಬಹುದು. ಕಳೆದ 2 ವರ್ಷಗಳ ಹಿಂದೆ ಪಡಿತರ ಬದಲಿಗೆ ಖಾತೆಗೆ ಹಣ ಜಮಾ ಮಾಡುತ್ತೇವೆ ಎಂದು ಸರ್ಕಾರ ತಿಳಿಸಿದಾಗ ವ್ಯಾಪಕ ವಿರೋಧಗಳು ರೈತ, ಕೃಷಿ ಕಾರ್ಮಿಕರಿಂದ ವ್ಯಕ್ತವಾಯಿತು. ಪ್ರತಿರೋಧ ಗಮನಿಸಿ ಆ ತೀರ್ಮಾನವನ್ನು ಸರ್ಕಾರ ಕೈಬಿಟ್ಟಿತು.
ಈ ದೇಶದಲ್ಲಿ ಇನ್ನೂ ಅಸಂಖ್ಯಾತ ಮಂದಿ ಬಡವರಿದ್ದಾರೆ. ಪಡಿತರ ವ್ಯವಸ್ಥೆಯನ್ನೇ ನಂಬಿ ಬದುಕುತ್ತಿರುವ ಜನ ಇದ್ದಾರೆ. ಸರ್ಕಾರದಿಂದ ನೀಡುವ ಅಕ್ಕಿ, ರಾಗಿ, ಗೋಧಿಯನ್ನೇ ನಂಬಿ ಇವರೆಲ್ಲ ಬದುಕುತ್ತಿದ್ದಾರೆ. ಒಂದು ವೇಳೆ ಪಡಿತರ ವಿತರಣಾ ವ್ಯವಸ್ಥೆಯೇ ರದ್ದಾಯಿತೆಂದಿಟ್ಟುಕೊಳ್ಳಿ ಮುಂದಿನ ಪರಿಸ್ಥಿತಿ ಅತ್ಯಂತ ಭೀಕರ. ಅನ್ನ ನಂಬಿಕೊಂಡಿದ್ದವರು ಅನಿವಾರ್ಯವಾಗಿ ದುಡಿಮೆಗೆ ಇಳಿಯಬೇಕು. ಕೆಲವರ ಕೈಲಿ ಇದು ಸಾಧ್ಯವಾಗದ ಪರಿಸ್ಥಿತಿ ಇದೆ. ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ಮತ್ತೆ ಮತ್ತೆ ಸಮಸ್ಯೆಗಳಿಗೆ ಸಿಲುಕಿ ಬಡತನ ನಿರ್ಮೂಲನೆ ಬದಲಿಗೆ ಬಡವರನ್ನೇ ಇನ್ನಿಲ್ಲವಾಗಿಸುವ ಪರಿಸ್ಥಿತಿಗಳು ಹುಟ್ಟಿಕೊಳ್ಳಬಹುದು. ಇದು ಪರೋಕ್ಷವಾಗಿ ಒಟ್ಟಾರೆ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಆರ್ಥಿಕವಾಗಿಯೂ ದೇಶ ಮತ್ತಷ್ಟು ದಿವಾಳಿಯಾಗುತ್ತದೆ.
ಕಳೆದ 2 ವರ್ಷಗಳ ಹಿಂದೆ ತೊಗರಿ ಬೇಳೆ ಕೆಜಿಗೆ 200 ರೂ. ದಾಟಿತ್ತು. ಇಂತಹ ಪ್ರಸಂಗಗಳು ಆಗಾಗ್ಗೆ ಸೃಷ್ಟಿಯಾಗುತ್ತಲೇ ಇರುತ್ತವೆ. ಕೆಲವು ಬೇಳೆಕಾಳುಗಳ ಬೆಲೆ ದಿಢೀರ್ ಏರಿಕೆಯಾಗಿ ಮಾರಾಟ ವ್ಯವಸ್ಥೆಯನ್ನೇ ಏರುಪೇರು ಮಾಡಿಬಿಡುತ್ತವೆ. ಕನಿಷ್ಠ ಬೆಲೆಗೆ ರೈತರಿಂದ ಕೊಳ್ಳುವ ವರ್ತಕರು ಬೇಳೆಕಾಳು ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸುವ, ಕಾಳಸಂತೆ ವ್ಯವಹಾರ ನಡೆಸುವ ಮೂಲಕ ತಾವು ಮಾತ್ರ ಅತ್ಯಧಿಕ ಲಾಭ ಮಾಡಿಕೊಳ್ಳುತ್ತಾರೆ. ರೈತರಿಗೆ ಅಸಲು ಬೆಲೆಯೂ ಸಿಗುವುದಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಮತ್ತಷ್ಟು ಕರಾಳವಾಗಬಹುದು. ಏಕೆಂದರೆ ಮುಕ್ತ ವ್ಯಾಪಾರ, ಬಂಡವಾಳ ಹೂಡಿಕೆದಾರರಿಗೆ ಮುಕ್ತ ಅವಕಾಶ ಸಿಗುವುದರಿಂದ ಬಲಾಢ್ಯರಷ್ಟೆ ಬಂಡವಾಳ ಹಾಕಲು ಮುಂದೆ ಬರುತ್ತಾರೆ. ಅವರಷ್ಟೇ ಮಾರುಕಟ್ಟೆಯ ಹಿಡಿತ ಸಾಧಿಸುತ್ತಾರೆ.
ಕ್ರಮೇಣ ಸರ್ಕಾರಿ ವ್ಯವಸ್ಥೆಯ ಎಪಿಎಂಸಿಗಳು ತಮ್ಮ ನಿಯಂತ್ರಣ ಕಳೆದುಕೊಳ್ಳುತ್ತವೆ. ಎಲ್ಲವೂ ಖಾಸಗಿಮಯವಾಗಿ ಬಂಡವಾಳಗಾರರ ಕಪಿಮುಷ್ಠಿಗೆ ರೈತರು ಸಿಲುಕಬೇಕಾಗುತ್ತದೆ. ಅಷ್ಟೇ ಅಲ್ಲ, ಕೃಷಿ ಇಲಾಖೆಗಳಿಗೂ ಕೆಲಸವಿಲ್ಲವಾಗುತ್ತದೆ. ಈ ಇಲಾಖೆಯ ಅಧಿಕಾರಿಗಳು ಕಾರ್ಪೊರೇಟ್ ಕಂಪನಿಗಳು ಮತ್ತು ರೈತರ ನಡುವೆ ಏಜೆಂಟರಂತೆ ಅಥವಾ ದಲ್ಲಾಳಿಗಳ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸರ್ಕಾರಿ ವ್ಯವಸ್ಥೆ ಹೇಗೆ ಅವಸಾನಗೊಳ್ಳುತ್ತವೆ ಎಂಬುದಕ್ಕೆ ಬಿಎಸ್ಎನ್ಎಲ್ ಒಂದು ಜ್ವಲಂತ ಉದಾಹರಣೆ. ಒಂದು ಕಾಲಕ್ಕೆ ಅತ್ಯಂತ ಶ್ರೇಷ್ಠ ಹೆಸರು ಗಳಿಸಿದ್ದ ಬಿಎಸ್ಎನ್ಎಲ್ ಈಗ ಮೊಳೆ ಹೊಡೆದುಕೊಂಡು ಮೂಲೆಯಲ್ಲಿ ಕುಳಿತಿದೆ. ಆ ಸ್ಥಾನವನ್ನು ಖಾಸಗಿ ಕಂಪನಿಯೊಂದು ಪಡೆದುಕೊಂಡಿದೆ. ಈಗ ಅದೇ ಉಚ್ಛ್ರಾಯ ಸ್ಥಿತಿಗೆ ತಲುಪುತ್ತಿದೆ. ಇದೇ ಪರಿಸ್ಥಿತಿ ಇತರೆ ಇಲಾಖೆಗಳಿಗೂ ಬರಬಹುದು. ಆಗ ರೈತರು ಪ್ರಶ್ನಿಸುವ ಅಧಿಕಾರವನ್ನೇ ಕಳೆದುಕೊಳ್ಳಬಹುದು. ಏಕೆಂದರೆ, ಅವರಿಗೆ ಬೇಕಾದ ಒಪ್ಪಂದಗಳು ಆಗಿ ಹೋಗಿರುತ್ತವೆ. ಸರ್ಕಾರಿ ವ್ಯವಸ್ಥೆಯನ್ನು
ಪ್ರಶ್ನಿಸಿದಂತೆ ಖಾಸಗಿ ಬಂಡವಾಳಗಾರರನ್ನು ಹೇಗೆ ಪ್ರಶ್ನಿಸಲು ಸಾಧ್ಯ?
ವಿಶ್ವದ ಬಹುತೇಕ ರಾಷ್ಟ್ರಗಳು ಕೃಷಿಯನ್ನು ಸರ್ಕಾರಿ ವ್ಯವಸ್ಥೆಯಲ್ಲಿಯೇ ಪೋಷಿಸುತ್ತಾ ಬಂದಿವೆ. ಕೃಷಿ ಇಲಾಖೆಗಳು ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿವೆ. ಕೃಷಿ ಕ್ಷೇತ್ರದಲ್ಲಿ ಇನ್ನೂ ಹಿಂದುಳಿದಿರುವ ಭಾರತದಲ್ಲಿ ಹೊಸ ನೀತಿಗಳು ಪರಿಚಯವಾದಂತೆಲ್ಲಾ ಅಂತರ ಹೆಚ್ಚುತ್ತಾ ಹೋಗುತ್ತದೆ. ಬಂಡವಾಳಗಾರರು ಮಾತ್ರವೇ ಬದುಕಿ ಬಡ ಕೃಷಿಕರು ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇನ್ನೂ ಹಲವು ವರ್ಷಗಳ ಕಾಲ ರೈತಾಪಿ ವರ್ಗದ ಹಿತದೃಷ್ಟಿಯಿಂದ ಒಂದಷ್ಟು ಯೋಜನೆಗಳು ಸರ್ಕಾರಿ ವ್ಯವಸ್ಥೆಗೆ ಪೂರಕವಾಗಿಯೇ ಇರಬೇಕು. ಶ್ರೀಮಂತರೊಂದಿಗೆ ಬಡ ಕೃಷಿ ಕೂಲಿ ಕಾರ್ಮಿಕರನ್ನು ಸ್ಪರ್ಧೆಗೆ ಇಳಿಸುವ ವಾತಾವರಣ ಸದ್ಯಕ್ಕಂತೂ ನಮ್ಮ ದೇಶದಲ್ಲಿ ಇಲ್ಲ.
ಇದನ್ನು ಮನಗಾಣಬೇಕಲ್ಲವೆ?
ದೇಶದ ಸದ್ಯದ ಪರಿಸ್ಥಿತಿಯನ್ನೆ ಒಮ್ಮೆ ಅವಲೋಕಿಸಿದರೆ ಯಾವ ದರವೂ ಇಳಿಕೆಯಾಗಿಲ್ಲ. ಎಲ್ಲ ದರಗಳು ಏರುಗತಿಯಲ್ಲಿಯೇ ಇವೆ. ತೈಲ ಕಂಪನಿಗಳು ನಿರಂತರವಾಗಿ ಬೆಲೆ ಏರಿಸುತ್ತಲೇ ಇವೆ. ಈ ಕಂಪನಿಗಳ ಮೇಲೆ ಸರ್ಕಾರದ ಹಿಡಿತ ಸಾಧ್ಯವಾಗಿಲ್ಲ.
1955 ರ ಮೂಲ ಕಾಯ್ದೆಯ ಹಿಂದಿನ ಉದ್ದೇಶಗಳಲ್ಲಿ ಮೇಲೆ ಹೇಳಿದಂತೆ ಇನ್ನೂ ಹಲವು ಪ್ರಮುಖ ಅಂಶಗಳು ಅಡಗಿವೆ. ಆಹಾರ ಧಾನ್ಯಗಳು ಹಾಗೂ ದೇಶವನ್ನು ಕಟ್ಟಲು ಅತ್ಯಗತ್ಯವಾಗಿರುವ ಕಲ್ಲಿದ್ದಲು, ಕಬ್ಬಿಣ ಇತ್ಯಾದಿ ಸರಕುಗಳನ್ನು ದೊಡ್ಡ ದೊಡ್ಡ ವ್ಯಾಪಾರಿಗಳು ದುರುದ್ದೇಶಪೂರ್ವಕವಾಗಿ ಸಂಗ್ರಹಿಸಿಟ್ಟುಕೊಂಡು ಕಾಳಸಂತೆ ಹಾಗೂ ಕಳ್ಳದಂಧೆ ಮಾಡುತ್ತಾ ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸುವ ಅಪಾಯದಿಂದ ರಕ್ಷಣೆ ಒದಗಿಸುವುದೂ ಸಹ ಮತ್ತೊಂದು ಪ್ರಮುಖ ಅಂಶ.
ಕೃಷಿಯ ಉತ್ಪಾದನೆ, ಮಾರಾಟ, ಸಾಗಾಟ, ಸಂಗ್ರಹ ಮತ್ತು ಬೆಲೆ ನಿಗದಿ ಪ್ರಕ್ರಿಯೆಯಲ್ಲಿ ಸರ್ಕಾರದ ಮಧ್ಯಪ್ರವೇಶದಿಂದಾಗಿ ವಿದೇಶಿ ಮತ್ತು ಖಾಸಗಿ ಬಂಡವಾಳ ಹರಿದು ಬರುತ್ತಿರಲಿಲ್ಲ. ಸರ್ಕಾರದ ನಿಯಂತ್ರಣವಿದ್ದಾಗಲೇ ಹಲವು ಅನಿಶ್ಚಿತ ಮತ್ತು ಅವ್ಯವಸ್ಥೆಗಳನ್ನು ನೋಡಿದ್ದೇವೆ. ಇನ್ನು ಸಂಪೂರ್ಣ ಮುಕ್ತವಾದರೆ ಆಹಾರ ಸರಕುಗಳ ಸಾಗಾಟ, ಸಂಗ್ರಹ ಇತ್ಯಾದಿಗಳಿಗಿದ್ದ ಮಿತಿಯನ್ನು ತೆಗೆದು ಹಾಕಲಾಗುತ್ತದೆ. ಬಹುದೊಡ್ಡ ಅಗ್ರಿ ಬ್ಯುಸಿನೆಸ್ ಕಂಪನಿಗಳು ಜಿಲ್ಲೆ ಜಿಲ್ಲೆಗಳಲ್ಲೂ ಒಪ್ಪಂದ ಮಾಡಿಕೊಳ್ಳಲಾರಂಭಿಸುತ್ತವೆ. ಇದೊಂದು ದೊಡ್ಡ ರಹದಾರಿಯಾಗಿ ಆಹಾರ ಸಂಗ್ರಹಣೆ ಮಾಡಿಕೊಳ್ಳಲು ಕಾಯಿದೆಯೇ ಅವಕಾಶ ಕಲ್ಪಿಸಿದಂತಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
