ಬಿಜೆಪಿ ತೊರೆಯುವ ಮಾತಾನಾಡಿದ್ದೇಕೆ ಶ್ರೀರಾಮುಲು …..!

ಬೆಂಗಳೂರು

    ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದ ರಾಧಾ ಮೋಹನ್ ದಾಸ್ ಸರಣಿ ಸಭೆ ನಡೆಸಿದ್ದಾರೆ. ನಿನ್ನೆ(ಜನವರಿ 21) ಕೋರ್ ಕಮಿಟಿ ಸಭೆಗೂ ಮುನ್ನ ಶಾಸಕರು, ಸಂಸದರು, ಪರಿಷತ್ ಸದಸ್ಯರು, ವೀಕ್ಷಕರು ಜೊತೆ ಸಭೆ ನಡೆಸಿದರು. ಬಳಿಕ ಸಂಜೆ ಕೋರ್‌ ಕಮಿಟಿ ಸಭೆಯೂ ನಡೆದಿದ್ದು, ಈ ಸಭೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರು ಉಸ್ತುವಾರಿ ರಾಧಾ ಮೋಹನ್ ದಾಸ್ ವಿರುದ್ಧ ಕೆಂಡಾಮಂಡಲರಾಗಿದ್ದು, ಪಕ್ಷ ತೊರೆಯುವ ಮಾತುಗಳನ್ನಾಡಿದ್ದಾರೆ. ಅಲ್ಲದೇ ದೂರವಾಣಿ ಮೂಲಕ ಹೈಕಮಾಂಡ್ ನಾಯಕರಿಗೆ ದೂರು ನೀಡಿದ್ದಾರೆ. 

    ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಗ್ಗೆ ಚರ್ಚೆಯಾಗಿದ್ದು ಈ ವೇಳೆ ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಬಿ.ಶ್ರೀರಾಮುಲು ಮೇಲೆಯೇ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಗಂಭೀರ ಆರೋಪ ಮಾಡಿದ್ದಾರೆ. ಉಪಚುನಾವಣೆಯಲ್ಲಿ ಶ್ರೀರಾಮುಲು ಕೆಲಸ ಮಾಡಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಶ್ರೀರಾಮುಲು, ಇನ್ನೂ ಕೂಡ ಉಪಚುನಾವಣೆ ಸೋಲಿನ ಕುರಿತ ವರದಿಯನ್ನೇ ಕೊಟ್ಟಿಲ್ಲ. ಸದಾನಂದ ಗೌಡ ಸಮಿತಿ ಉಪ ಚುನಾವಣೆ ಕುರಿತ ವರದಿಯನ್ನೇ ಕೊಟ್ಟಿಲ್ಲ. ಅದಕ್ಕೂ ಮೊದಲು ನೀವು ಹೇಗೆ ಕೆಲಸ ಮಾಡಿಲ್ಲ ಎನ್ನುತ್ತಿರಿ ಎಂದು ಸಭೆಯಲ್ಲೇ ಪ್ರಶ್ನಿಸಿದ್ದಾರೆ. 

    ರಾಧಾಮೋಹನ್ ದಾಸ್​ ಅಗರ್ವಾಲ್​ ಏನೋ ಉತ್ತರ ಪ್ರದೇಶದವರು. ರಾಜ್ಯಾಧ್ಯಕ್ಷರಾಗಿ ನೀವಾದರೂ ಹೇಳಿ ನಮ್ಮ ರಕ್ಷಣೆಗೆ ಬರಬೇಕಲ್ಲವೇ? ಎಂದು ವಿಜಯೇಂದ್ರ ಅವರನ್ನು ಹೇಳಿದ್ದಾರೆ. ಇದಕ್ಕೆ ವಿಜಯೇಂದ್ರ ಪ್ರತಿಕ್ರಿಯಿಸಿ, ಇಲ್ಲ, ನನ್ನ ಬಗ್ಗೆಯೂ ಹೀಗೆ ಹೇಳಿದ್ದಾರೆ ಉತ್ತರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರಾಮುಲು, ನಿಮಗೆ ಇಷ್ಟ ಇಲ್ಲ ಅಂತಾದರೆ ಬೇಕಾದರೆ ನಾನು‌ ಪಕ್ಷ ಬಿಡುತ್ತೇನೆ. ಆದರೆ ಪಕ್ಷ ಬಿಡುವ ಮುನ್ನ ಏನು ಆಗಿದೆ ಎಂದು ಹೇಳಿ ಬಿಡುತ್ತೇನೆ. ಮೋದಿ, ಶಾ, ಹೈಕಮಾಂಡ್ ಎಲ್ಲರಿಗೂ ಏನು ಆಗಿದೆ ಎಂದು ಹೇಳುತ್ತೇನೆ. ನಾನು ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ, ಇಲ್ಲಿ ಸುಮ್ಮನಿದ್ದರೆ ಬೆಲೆಯೇ ಇಲ್ಲ . ಕೆಲಸ ಮಾಡಿದವರಿಗೆ ಬೆಲೆಯೇ ಇಲ್ಲ ಎಂದು ಶ್ರೀರಾಮುಲು ಆಕ್ರೋಶ ಹೊರಹಾಕಿದ್ದಾರೆ. 

   ಇನ್ನು ರಾಧಾ ಮೋಹನ್ ದಾಸ್ ಆರೋಪದ ಬಗ್ಗೆ ಶ್ರೀರಾಮುಲು, ವಿಜಯೇಂದ್ರ ವಿರುದ್ಧವೂ ಸಹ ಮುಗಿಬಿದ್ದಿದ್ದಾರೆ. ನೀವು ರಾಜ್ಯಾಧ್ಯಕ್ಷರು ಜವಾಬ್ದಾರಿ ಸ್ಥಾನದಲ್ಲಿ ಇದ್ದೀರಿ. ನಾನು ನಿಮ್ಮ ತಂದೆ ಯಡಿಯೂರಪ್ಪನವರ ಜೊತೆ ಕೆಲಸ ಮಾಡಿದ್ದೇನೆ. ನಿಮಗೆ ನಾವು ಬೇಡವಾದ್ರೆ ಹೇಳಿ ಪಕ್ಷವನ್ನು ಬಿಡಲು ನಾವು ಸಿದ್ಧರಿದ್ದೇವೆ. ಸ್ವಾಭಿಮಾನಕ್ಕೆ ಧಕ್ಕೆ ತಂದರೇ ಸಮಾಜವನ್ನು ಅವಮಾನಿಸಿದ್ರೆ ನಾವು ಪಕ್ಷ ಬಿಡಲು ಸಿದ್ಧ ಎಂದು ವಿಜಯೇಂದ್ರಗೆ ಖಡಕ್ ಆಗಿ ಹೇಳಿದ್ದಾರೆ. 

  ಇನ್ನು ಕೋರ್ ಕಮಿಟಿಯಲ್ಲಿನ ಬೆಳವಣಿಗೆ ಬಗ್ಗೆ ಶ್ರೀರಾಮುಲು ಹೈಕಮಾಂಡ್​ ನಾಯಕರಿಗೆ ದೂರವಾಣಿ ಕರೆ ಮಾಡಿ ದೂರು ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹಾಗೂ ಸಂಘ ಪರಿವಾರದ ಇಬ್ಬರು ಮುಖಂಡರಿಗೆ ಕರೆ ಮಾಡಿ ಕೋರ್ ಕಮಿಟಿಯಲ್ಲಿ ಅವಮಾನವಾಗುವ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

   ರಾಧಾಮೋಹನ್ ದಾಸ್ ಅಗರ್ವಾಲ್​ಗೆ ತಪ್ಪು ಮಾಹಿತಿ ನೀಡಲಾಗಿದೆ. ಶಾಸಕ ಜನಾರ್ದನರೆಡ್ಡಿ ಮಾತು ಕೇಳಿ ನನ್ನ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೆ ನಿನ್ನೆ ನಡೆದ ಸಭೆಯಲ್ಲಿ ನನ್ನನ್ನು ಅವಮಾನ ಮಾಡಲಾಗಿದೆ. ಎಸ್​​ಟಿ ನಾಯಕತ್ವದ ಬಗ್ಗೆ ಸಭೆಯಲ್ಲಿ ಅವಮಾನ ಮಾಡಲಾಗಿದೆ. ಈ ರೀತಿಯ ಘಟನೆಗಳು ನಡೆದರೆ ಪಕ್ಷದಲ್ಲಿ ದುಡಿಯುವುದ ಕಷ್ಟ ಎಂದಿದ್ದಾರೆ. ಪಕ್ಷ ಕಷ್ಟದಲ್ಲಿದ್ದ ಸಂದರ್ಭದಲ್ಲಿ ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಎಲ್ಲರ ವಿರುದ್ಧ ಆಧಾರರಹಿತ ಮಾತನಾಡುವುದು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಂತೋಷ್ ಮುಂದೆ ಅಸಮಾಧಾನ ಹೊರಹಾಕಿದ್ದಾರೆ. 

   ಈ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡ ಬಿಎಸಲ್​ ಸಂತೋಷ್, ಶ್ರೀರಾಮುಲುರನ್ನು ಸಮಾಧಾನಪಡಿಸಿದ್ದಾರೆ. ನಿಮ್ಮ ಹಾಗೂ ನಿಮ್ಮ ಸಾಮರ್ಥ್ಯದ ಬಗ್ಗೆ ಪಕ್ಷಕ್ಕೆ ಅರಿವಿದೆ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಘಟನೆಗಳನ್ನು ಗಮನಿಸುತ್ತಿದ್ದೇವೆ. ರಾಜಕಾರಣದಲ್ಲಿ ಒಂದು ಮಾತು ಬರುತ್ತೆ ಒಂದು ಮಾತು ಹೋಗುತ್ತೆ. ಇದನ್ನು ಪಕ್ಕಕ್ಕೆ ಇಟ್ಟು ಪಕ್ಷ ಸಂಘಟನೆ ಬಗ್ಗೆ ಗಮನಹರಿಸಿ. ಹೈಕಮಾಂಡ್​ ಎಲ್ಲವನ್ನೂ ಬಗೆಹರಿಸುತ್ತೆ ಎಂದು ಶ್ರೀರಾಮುಲುಗೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. 

   ಇನ್ನು ಈ ಬಗ್ಗೆ ಟಿವಿ9ಗೆ ಸ್ವತಃ ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ಉಪಚುನಾವಣೆಯಲ್ಲಿ ನಾನು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದೇನೆ. ಕ್ಷೇತ್ರಕ್ಕೆ ಹೋಗಿ ಕೇಳಿದ್ರೆ ನನ್ನ ಕೆಲಸ ಬಗ್ಗೆ ಎಲ್ಲರೂ ಹೇಳುತ್ತಾರೆ. ನಾನು ಕೆಲಸ ಮಾಡಿಲ್ಲ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ರಾಧಾಮೋಹನ್ ದಾಸ್ ಆರೋಪದಿಂದ ನನಗೆ ನೋವಾಗಿದೆ. ನನ್ನ ಬಗ್ಗೆ ತಿಳಿದುಕೊಂಡು ರಾಧಾಮೋಹನ್ ದಾಸ್ ಮಾತನಾಡಬೇಕಿತ್ತು. ರಾಧಾಮೋಹನ್ ದಾಸ್ ಅವರು ಉತ್ತರಪ್ರದೇಶ ರಾಜ್ಯದವರು ಅವರಿಗೆ ಇಲ್ಲಿನ ಕೆಲವು ವಿಚಾರಗಳು ಗೊತ್ತಿರುವುದಿಲ್ಲ. ನನ್ನ ಬಗ್ಗೆ ಲಘುವಾಗಿ ಮಾತನಾಡುವುದು ಒಳ್ಳೆಯದಲ್ಲ ಎಂದು ಹೇಳಿದ್ದೇನೆ. ಸಭೆಯಲ್ಲಿ ಈ ವಿಚಾರವನ್ನು ರಾಜ್ಯಾಧ್ಯಕರಿಗೆ ಹೇಳಿದ್ದೇನೆ. ನಾನು ಕೆಲಸ ಮಾಡಿಲ್ಲ ಎಂದು ಜನಾರ್ದನರೆಡ್ಡಿ ಹೇಳರೋದು ಸ್ಪಷ್ಟವಾಗಿದೆ ಎಂದಿದ್ದಾರೆ.

   ಮೊದಲೇ ಕಮಲ ಮನೆ ಕೊತ ಕೊತನೆ ಕುದಿಯುತ್ತಿದೆ. ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಪಕ್ಷದೊಳಗೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಇದರ ಮಧ್ಯೆ ಶ್ರೀರಾಮುಲು ಅವರ ಅಸಮಾಧಾನ ಪಕ್ಷದೊಳಗೆ ಸಂಚಲನ ಮೂಡಿಸಿದೆ.

Recent Articles

spot_img

Related Stories

Share via
Copy link