ಬರಗೂರು :
ಇತ್ತೀಚೆಗೆ ನಡೆದ ಶಿರಾ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ವ್ಯಕ್ತಿಗತ ಅಂತರ ಇಲ್ಲದೆ ನೂರಾರು ಮಂದಿ ಗುಂಪು ಸೇರಿದ್ದರಿಂದ, ಮುಂಜಾಗ್ರತೆಯಾಗಿ ಕೊರೋನಾ ಸೊಂಕು ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ತಮ್ಮ ಗ್ರಾಮಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಕೊರೋನಾ ಪರೀಕ್ಷೆ ಮಾಡಲು ಬಂದಾಗ ಸಾರ್ವಜನಿಕರು ಅವರಿಗೆ ಸಹಕರಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಮತ್ತೊಬ್ಬರಿಗೆ ಕೊರೊನಾ ಹರಡದಂತೆ ಮುನ್ನೆಚರಿಕೆ ವಹಿಸುವಂತೆ ವೈದ್ಯಾಧಿಕಾರಿ ಡಾ.ತಿಮ್ಮರಾಜು ತಿಳಿಸಿದ್ದಾರೆ.
ಅವರು ಶಿರಾ ತಾಲ್ಲೂಕಿನ ದ್ವಾರನಕುಂಟೆ ಗ್ರಾಮದ ಕಾಲನಿಯಲ್ಲಿ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಸೋಮವಾರ ಸಾರ್ವಜನಿಕರಿಗೆ ಕೊರೋನಾ ಪರೀಕ್ಷೆ ನಡೆಸಿ ಮಾತನಾಡಿದರು.
ಶಿರಾ ತಾಲ್ಲೂಕಿನಲ್ಲಿ 40 ಸಾವಿರ ಜನರಿಗೆ ಕೊರೋನಾ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ. ಈಗಾಗಲೇ ದ್ವಾರನಕುಂಟೆ ವ್ಯಾಪ್ತಿಯಲ್ಲಿ 856 ಜನರಿಗೆ ಪರೀಕ್ಷೆ ನಡೆಸಿದ್ದು, ಕೇವಲ ಇಬ್ಬರಿಗೆ ಮಾತ್ರ ಪಾಸಿಟಿವ್ ಕಂಡು ಬಂದಿದೆ. ಜನತೆ ಜಾಗೃತರಾಗಿರುವ ಕಾರಣ ಹೆಚ್ಚು ಸೋಂಕು ಹರಡದೆ ನಿಯಂತ್ರಣದಲ್ಲಿದೆ. ಕೊರೋನಾ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತಿದ್ದು ನ.14ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆ ನಡೆಸಿದ ಕೇವಲ 5 ನಿಮಿಷದಲ್ಲಿ ಫಲಿತಾಂಶ ದೃಢ ಪಡಿಸಿಕೊಳ್ಳ ಬಹುದಾಗಿದೆ. ಈ ಪರೀಕ್ಷೆ ನ.14.ರವರೆಗೆ ನಿರಂತರವಾಗಿ ನಡೆಯಲಿದ್ದು ಜನರು ಸಹಕರಿಸಬೇಕೆಂದು ಮನವಿ ಮಾಡಿದರು.
ದ್ವಾರನಕುಂಟೆ ಗ್ರಾಪಂ ಪಿಡಿಓ ಸೀಬಿ ರಂಗಯ್ಯ, ಆರೋಗ್ಯ ಇಲಾಖೆಯ ಕಿಶೋರ್ ಅಹಮದ್, ಲ್ಯಾಬ್ ಟೆಕ್ನಿಷಿಯನ್ ರವಿಕುಮಾರ್, ಮುಖಂಡ ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ