ತುಮಕೂರು
ವಿಶೇಷ ವರದಿ:ರಾಕೇಶ್.ವಿ
ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ಸಿಟಿಯ ಕಾಮಗಾರಿಗಳಲ್ಲಿ ಯುಟಿಲಿಟಿ ಚೇಂಬರ್ ಕಾಮಗಾರಿ ಒಂದು. ಈ ಕಾಮಗಾರಿ ಮಾಡಲು ಸುಮಾರು ಒಂದು ವರ್ಷವಾಗುತ್ತಾ ಬಂದಿದೆ. ಆದರೂ ಇನ್ನೂ ಕಾಮಗಾರಿ ನಡೆಯುತ್ತಲೇ. ಹಲವಾರು ಕಡೆಗಳಲ್ಲಿ ಗುಂಡಿಗಳನ್ನು ತೆಗದು ಹಾಗೇ ಬಿಟ್ಟರೆ ಇನ್ನೂ ಕೆಲವು ಕಡೆಗಳಲ್ಲಿ ನಿರ್ಮಾಣ ಮಾಡಲಾದ ಯುಟಿಲಿಟಿ ಚೇಂಬರ್ನ್ನು ಮುಚ್ಚುವ ಗೋಜಿಗೆ ಹೋಗಿಲ್ಲ.
ನಗರದ ಮಂಡಿಪೇಟೆ, ಎಸ್ಎಸ್ಪುರಂ, ಎಂಜಿರಸ್ತೆ, ಬಿಎಚ್ ರಸ್ತೆ, ಜನರಲ್ ಕಾರಿಯಪ್ಪ ರಸ್ತೆ, ಹೊರಪೇಟೆ, ಕೋತಿತೋಪು ರಸ್ತೆ, ಹನುಮಂತಪುರ ಸೇರಿದಂತೆ ನಗರದ ಅನೇಕ ಭಾಗಗಳಲ್ಲಿ ಯುಟಿಲಿಟಿ ಛೇಂಬರ್ ಗುಂಡಿಗಳನ್ನು ಅಗೆಯಲಾಗಿದ್ದು, ಈ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ನಿತ್ಯ ಈ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ, ಧೂಳಿನ ಸಮಸ್ಯೆ, ಮಳೆ ನೀರು ನಿಂತುಕೊಂಡು ದುರ್ವಾಸನೆ ಬೀರುವುದು ಹೀಗೆ ಒಂದಲ್ಲಾ ಒಂದು ಸಮಸ್ಯೆಗಳು ಎದ್ದು ಕಾಣುತ್ತಿವೆ. ಇದರಿಂದ ನಾಗರಿಕರು ಸ್ಮಾರ್ಟ್ ಸಿಟಿ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಪಾದಚಾರಿಗಳಿಗೆ ಕಿರಿಕಿರಿ
ರಸ್ತೆಯ ಪಕ್ಕದಲ್ಲಿ ಸುಮಾರು 8 ಅಡಿ ಆಳ ತೆಗೆಯಲಾದ ಈ ಸ್ಮಾರ್ಟ್ ಸಿಟಿಯ ಯುಟಿಲಿಟಿ ಚೇಂಬರ್ಗಳಿಂದ ಹೊರತೆಗೆದ ಮಣ್ಣನ್ನು ಪಕದಲ್ಲಿಯೇ ಗುಡ್ಡೆ ಹಾಕಿರುವುದರಿಂದ ವಾಹನಸವಾರರು ಹಾಗೂ ಪಾದಾಚಾರಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಕೆಲ ಬಡಾವಣೆಗಳಲ್ಲೂ ಈ ಚೇಂಬರ್ಗಳ ಕಾಮಗಾರಿ ಮಾಡಿದ್ದು, ಕೆಲಕಡೆ ಮುಚ್ಚಿದರೆ ಇನ್ನೂ ಕೆಲಕಡೆ ಮುಚ್ಚದೇ ಹಾಗೆ ಬಿಡಲಾಗಿದೆ. ತೆರೆದಿರುವ ಗುಂಡಿಗಳ ಸುತ್ತಲು ಅಡ್ಡಲಾಗಿ ಪಟ್ಟಿಯನ್ನು ಕೂಡ ಹಾಕದೇ ಇರುವುದರಿಂದ ಪಾದಾಚಾರಿಗಳಿಗೆ ಕಿರಕಿರಿ ಉಂಟಾಗುತ್ತಿದೆ.
ಮಳೆ ಬಂದರೆ ಅವಾಂತರ
ಇದು ಮಳೆಗಾಲವಾದ್ದರಿಂದ ಆಗಾಗ್ಗೆ ಮಳೆ ಬರುತ್ತಿದೆ. ಇದರಿಂದ ಕೆಲ ಕಡೆಗಳಲ್ಲಿ ಅವಾಂತರ ಸೃಷ್ಠಿಯಾಗುತ್ತಿದೆ. ಕೆಲ ಚೇಂಬರ್ಗಳಲ್ಲಿ ಮಳೆ ನೀರು ನಿಂತುಕೊಂಡು ಕಾಮಗಾರಿಗೆ ಅಡ್ಡವಾದರೆ ಇನ್ನೂ ಕೆಲಕಡೆಗಳಲ್ಲಿ ಮಣ್ಣು ಮಳೆ ನೀರಿನಿಂದ ಕೊಚ್ಚಿಕೊಂಡು ರಸ್ತೆ ಮೇಲೆ ಹರಿಯುತ್ತಿದೆ. ಉದಾಹರಣೆಗೆ ನಗರದ ಟೌನ್ಹಾಲ್ ವೃತ್ತದಿಂದ ಅಶೋಕರಸ್ತೆ ಕಡೆಗೆ ಹೋಗುವಾಗ ಮಾಡಲಾದ ಚೇಂಬರ್ಗಳ ಮಣ್ಣು ಮಳೆ ಬಂದಾಗ ಇಡೀ ರಸ್ತೆಯುದ್ದಕ್ಕೂ ಸಾಗಿರುತ್ತದೆ. ಇದರ ಜೊತೆಗೆ ಚರಂಡಿ ನೀರು ಮಿಶ್ರಣಗೊಂಡು ಇನ್ನಷ್ಟು ದುರ್ವಾಸನೆ ಬೀರುತ್ತಾ, ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಕ್ಯೂರಿಂಗ್ ಆಗದ ಯುಟಿಲಿಟಿ ಚೇಂಬರ್ಗಳು
ನಗರದಲ್ಲಿ ತೆಗೆಯಲಾದ ಯುಟಿಲಿಟಿ ಚೇಂಬರ್ಗಳ ಕಾಮಗಾರಿಯನ್ನು ಸ್ಮಾರ್ಟ್ ಸಿಟಿ ವತಿಯಿಂದ ಮಾಡಲಾಗುತ್ತಿದೆ. ಗುಂಡಿ ತೆಗೆದು ಚೇಂಬರ್ ನಿರ್ಮಾಣ ಮಾಡಿ ಹತ್ತಾರು ದಿನಗಳು ಕಳೆದರೂ ಗುಂಡಿ ಮುಚ್ಚುವುದಿಲ್ಲ. ಕೇಳಿದರೆ ಕ್ಯೂರಿಂಗ್ ಆಗಬೇಕು ಎಂಬ ಕಾರಣ ಹೇಳುತ್ತಾರೆ. ಆದರೆ ಅದರ ನಿರ್ಮಾಣ ಮಾಡಿದ ನಂತರ ಕೇವಲ ಮಳೆ ನೀರು ಬಿದ್ದು ಕ್ಯೂರಿಂಗ್ ಆಗುತ್ತಿದೆ ಹೊರತು ಸ್ಮಾರ್ಟ್ ಸಿಟಿಯವರಾಗಲಿ , ಸಂಬಂಧಪಟ್ಟ ಗುತ್ತಿಗೆದಾರರಾಗಲಿ ನೀರು ಬಿಟ್ಟು ಕ್ಯೂರಿಂಗ್ ಮಾಡುವ ಗೋಜಿಗೆ ಹೋಗದೆ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಚೇಂಬರ್ ಕುಸಿಯುವ ಸಾಧ್ಯತೆ
ಸ್ಮಾರ್ಟ್ ಸಿಟಿಯ ಯುಟಿಲಿಟಿ ಚೇಂಬರ್ಗಳನ್ನು ತರಾತುರಿಯಲ್ಲಿ ನಿರ್ಮಾಣ ಮಾಡಿರುವುದು ಸರಿಯಷ್ಟೇ. ಅದಕ್ಕೆ ಸರಿಯಾಗಿ ಕ್ಯೂರಿಂಗ್ ಆಗಿಲ್ಲದಿರುವುದು ಒಂದು ಸಮಸ್ಯೆಯಾದರೆ ಮುಂದಿನ ದಿನಗಳಲ್ಲಿ ಬೃಹತ್ ವಾಹನಗಳು ಚಲಿಸಿದಲ್ಲಿ ಚೇಂಬರ್ಗಳು ಕುಸಿಯುವ ಸಾಧ್ಯತೆಗಳಿವೆ ಎಂಬುದಾಗಿ ಕೆಲ ಬುದ್ದಿ ಜೀವಿಗಳು ಹೇಳುತ್ತಾರೆ. ಈ ಮುಂಚೆ ರಸ್ತೆಯ ಪಕ್ಕ ಹಾಗೂ ಮಧ್ಯದಲ್ಲಿ ಮಾಡಲಾದ ಯುಜಿಡಿ ಚೇಂಬರ್ಗಳ ದುಸ್ಥಿತಿಯೇ ಈ ಯುಟಿಲಿಟಿ ಚೇಂಬರ್ಗಳಿಗೆ ಬರಬಹುದು ಎಂಬ ಊಹಾಪೋಹ ಮಾತುಗಳು ಕೇಳಿ ಬರುತ್ತಿವೆ.
ಒತ್ತಾಯದಲ್ಲಿ ಕೆಲಸ
ಸ್ಮಾರ್ಟ್ ಸಿಟಿ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಮೊದಲು ಯೋಜನೆ ರೂಪಿಸಿದಂತೆ ಒಂದು ರಸ್ತೆಯನ್ನು ಆಯ್ಕೆ ಮಾಡಿಕೊಂಡು ಆ ರಸ್ತೆಯ ಕಾಮಗಾರಿ ಸಂಪೂರ್ಣ ಮಾಡಿದ ನಂತರ ಅದನ್ನು ಮಾದರಿಯಾಗಿ ತೋರಿಸಿ ನಂತರ ಉಳಿದ ರಸ್ತೆಗಳನ್ನು ಮಾಡಬೇಕಾಗಿತ್ತು. ಆದರೆ ನೀಡಿದ ಸಮಯದೊಳಗೆ ಕಾಮಗಾರಿ ಮುಗಿಸಬೇಕು ಎಂದು ಕೇಂದ್ರದಿಂದ ಒತ್ತಡವಿರುವುದರಿಂದ ಎಲ್ಲಾ ರಸ್ತೆಗಳಲ್ಲಿ ಗುಂಡಿಗಳನ್ನು ತೆಗೆಯಬೇಕಾಯಿತು ಎನ್ನುತ್ತಾರೆ ನಿರ್ಮಾಣದ ವ್ಯವಸ್ಥಾಪಕರಾದ ಸಿದ್ದರಾಜು.
ಸ್ಮಾರ್ಟ್ ಸಿಟಿ ಜೊತೆಗೆ ಇತರೆ ಇಲಾಖೆಗಳ ಕಾಮಗಾರಿ
ಸ್ಮಾರ್ಟ್ ಸಿಟಿ ವತಿಯಿಂದ ಮಾಡಲಾಗುತ್ತಿರುವ ಕಾಮಗಾರಿಗಳ ಜೊತೆಗೆ ಇತರೆ ಇಲಾಖೆಗಳಾದ ಬೆಸ್ಕಾಂ, ಕೇಬಲ್, ಜಲಮಂಡಳಿ ನಿಗಮ, ಅಂತರ್ಜಾಲ ಕೇಬಲ್ಗಳು ಸೇರಿದಂತೆ ಇನ್ನಿತರರ ಕೇಬಲ್ಗಳ ಅಳವಡಿಕೆಗಾಗಿ ಹಳ್ಳಗಳನ್ನು ತೆಗೆಯುತ್ತಿದ್ದು, ಪ್ರತಿಯೊಂದು ಸ್ಮಾರ್ಟ್ ಸಿಟಿ ಕಾಮಗಾರಿಗಳಂತೆ ಬಿಂಬಿತವಾಗುತ್ತಿವೆ. ಇದರಿಂದ ಯಾವುದೇ ರಸ್ತೆಯಲ್ಲಿ ಹಳ್ಳ ತೆಗೆದರೂ ಅದು ಸ್ಮಾರ್ಟ್ ಸಿಟಿಯವರೇ ಹಳ್ಳ ತೆಗೆಯುತ್ತಿದ್ದಾರೆ ಎಂಬ ಭಾವನೆ ಎಲ್ಲರಲ್ಲೂ ಬಂದಿದೆ ಎಂದು ಸ್ಮಾರ್ಟ್ಸಿಟಿ ಅಧಿಕಾರಿಗಳು ತಿಳಿಸಿದರು.
