ಹಾಸನ :
2 ಕಂಟೈನರ್ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಮುಂಜಾನೆ ನಡೆದಿದೆ.
ಸಕಲೇಶಪುರದ ಜಾತಹಳ್ಳಿ ಗ್ರಾಮದ ದಿಲೀಪ್(25) ಮತ್ತು ಹಾಸನ ತಾಲ್ಲೂಕು ಅಂಚೆಹಳ್ಳಿ ಗ್ರಾಮದ ಚಂದ್ರ(36) ಮೃತಪಟ್ಟ ದುರ್ದೈವಿಗಳು.
ಇವರಿಬ್ಬರು ಕಂಟೈರ್ ವಾಹನದಲ್ಲಿ ತೆರಳುತ್ತಿದ್ದಾಗ ಆಲೂರು ತಾಲ್ಲೂಕಿನ ಸಿಂಗಾಪುರ ಗ್ರಾಮದ ಬಳಿ ಇಂದು ಮುಂಜಾನೆ 5 ಗಂಟೆ ಸುಮಾರಿನಲ್ಲಿ ಎದುರಿನಿಂದ ಬಂದ ಮತ್ತೊಂದು ಕಂಟೈನರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಕಂಟೈನರ್ ವಾಹನದೊಳಗೆ ಸಿಲುಕೊಂಡಿದ್ದ ಈ ಇಬ್ಬರ ಮೃತದೇಹಗಳನ್ನು ಹೊರತೆಗೆಯುವಲ್ಲಿ ಹರಸಾಹಸಪಟ್ಟರು.ಅಪಘಾತದ ರಭಸಕ್ಕೆ ಮೃತ ದೇಹಗಳು ಕಂಟೈನರ್ ಲಾರಿ ಒಳಗೆ ಸಿಲುಕಿ, ಗುರುತು ಹಿಡಿಯಲು ಸಾಧ್ಯವಾಗಷ್ಟು ಛಿದ್ರವಾಗಿವೆ.
ಅಪಘಾತದಿಂದಾಗಿ ಮುಂಜಾನೆ ಕಿ.ಮೀ ಗಟ್ಟಲೇ ವಾಹನಗಳು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವಂತಾಯಿತು.
ಸ್ಥಳಕ್ಕಾಗಮಿಸಿದ ವೃತ್ತ ನಿರೀಕ್ಷಕರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
