ಹುಬ್ಬಳ್ಳಿ
ಪ್ರಧಾನಿ ಮೋದಿ ರಫೇಲ್ ಯುದ್ಧ ವಿಮಾನ ಖರೀದಿ ಹಗರಣ, ರೈತರ ಸಾಲಮನ್ನಾ ಬಗ್ಗೆ ಹುಬ್ಬಳ್ಳಿಯಲ್ಲಿ ದೇಶದ ಚೌಕಿದಾರ ಧ್ವನಿಯೆತ್ತಲೇ ಇಲ್ಲ. ಮೋದಿ ಒಬ್ಬ ಅಪ್ಪಟ ಸುಳ್ಳುಗಾರ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಿಂದೆ ತಮ್ಮ ಸರ್ಕಾರದಲ್ಲಿ ರೈತರ ಸಾಲಮನ್ನಾ ಮಾಡುವಂತೆ ಎರಡು ಬಾರಿ ಪ್ರಧಾನಿ ಬಳಿ ನಿಯೋಗ ತೆಗೆದುಕೊಂಡು ಹೋಗಿದ್ದೆ. ಅದಕ್ಕೆ ಅವರು ಸ್ಪಂದಿಸಿಲ್ಲ. ಇದೂವರೆಗೆ ರೈತರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಮಾಡಿಯೂ ಇಲ್ಲ. ಈ ವರ್ಷದ ಬಜೆಟ್ನಲ್ಲಿ ಮೈತ್ರಿ ಸರ್ಕಾರ ಸಾಲ ಮನ್ನಾಕ್ಕೆ ಹಣ ಇಡಲಾಗಿದೆ. ಇಷ್ಟಾದರೂ ಮೋದಿ ಸಾಲಮನ್ನಾ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.
ಆಪರೇಷನ್ ಕಮಲಕ್ಕೆ ಮುಂದಾಗಿರುವ ಬಿ.ಎಸ್. ಯಡಿಯೂರಪ್ಪ ಕೂಡಲೆ ರಾಜಿನಾಮೆ ಕೊಡಬೇಕು. ಯಡಿಯೂರಪ್ಪಗೆ ಸಾರ್ವಜನಿಕ ಜೀವನದಲ್ಲಿರಲು ನೈತಿಕತೆಯಿಲ್ಲ. ಕುಮಾರಸ್ಬಾಮಿ ಬಿಡುಗಡೆಗೊಳಿಸಿರುವ ಆಪರೇಷನ್ ಕಮಲದ ಧ್ವನಿ ಮುದ್ರಿಕೆಯಲ್ಲಿ ಅವರ ಧ್ವನಿಯನ್ನು ಮಿಮಿಕ್ರಿ ಮಾಡಲಾಗಿದೆ ಎಂದು ಹೇಳುವ ಯಡಿಯೂರಪ್ಪ ಮೊದಲು ಅದನ್ನು ಸಾಬೀತುಪಡಿಸಬೇಕು. ಇಲ್ಲವಾದರೆ ರಾಜಿನಾಮೆ ಕೊಡುತ್ತೇನೆ ಅಂದಿದ್ದರು. ಈಗ ಆ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ.
ಹೀಗಾಗಿ ಶಾಸಕ ಸ್ಥಾನಕ್ಕೆ ಅವರು ರಾಜಿನಾಮೆ ಕೊಡಬೇಕು. ಶಾಸಕ ನಾಗನಗೌಡ ಪುತ್ರ ಶರಣಗೌಡ ಅವರಿಗೆ ಯಡಿಯೂರಪ್ಪ ಹತ್ತು ಕೋಟಿ ಹಣವನ್ನು ನಿಮ್ಮಪ್ಪನಿಗೆ ಕೊಟ್ಟು ಮಂತ್ರಿ ಮಾಡುತ್ತೇವೆ. ಶರಣಗೌಡಗೆ ಬಿಜೆಪಿ ಯಿಂದ ಟಿಕೆಟ್ ಕೊಡ್ತೀವಿ ಎಂದಿದ್ದಾರೆ.ಹಾಗಾದರೆ ಇದು ಕುದುರೆ ವ್ಯಾಪಾರ ಅಲ್ಲವೆ ಎಂದ ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಿದ್ದವರು ಎಮ್ಎಲ್ಎಗಳನ್ನು ಕೊಂಡುಕೊಳ್ಳಲು ಹೊರಟಿದ್ದಾರೆ. ಇಂತವರು ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್ ಎಂದು ಕಿಡಿಕಾರಿದರು.