ಮಧುಗಿರಿ :
ಸರ್ಕಾರಿ ಶಾಲೆ ಮತ್ತು ಅಂಗನವಾಡಿಯಲ್ಲಿ ಶೇಖರಣೆ ಮಾಡಿದ್ದ ದಿನಸಿ ಪದಾರ್ಥಗಳನ್ನು ಯಾರೂ ಅಪರಿಚಿತರು ಕಳವು ಮಾಡಿರುವ ಘಟನೆ ಭಾನುವಾರ ನಡೆದಿದೆ.
ತಾಲೂಕಿನ ಮಿಡಿಗೇಶಿ ಹೋಬಳಿಯ ಹೊಸ ಕೆರೆ ಗ್ರಾಮದಲ್ಲಿರುವ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪಕ್ಕ ದಲ್ಲಿಯೇ ಇರುವ ಅಂಗನವಾಡಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಮಕ್ಕಳಿಗೆ ಪ್ರತಿ ನಿತ್ಯದ ಊಟ ನೀಡಲು ಇಟ್ಡಿದ್ದ 20 ಪ್ಯಾಕೆಟ್ ಅಕ್ಕಿ , ಗೋಧಿ , ಬೆಳೆ ಸೇರಿದಂತೆ ಅಂಗನವಾಡಿಯಲ್ಲಿದ್ದ ಎರಡು ಗ್ಯಾಸ್ ಸಿಲಿಂಡರ್ ಮತ್ತಿತರರ ಪದಾರ್ಥಗಳನ್ನು ಭಾನುವಾರದ ರಜಾ ದಿನದಂದು ಯಾರೂ ಅಪರಿಚಿತರು ಲಗೇಜ್ ಆಟೋದಲ್ಲಿ ಬಂದು ದಿನಸಿ ಪದಾರ್ಥಗಳನ್ನು ಕಳವು ಮಾಡಿದ್ದಾರೆ.
ಸೋಮವಾರ ಶಾಲೆಯ ಮುಖ್ಯ ಶಿಕ್ಷಕಿ ವೆಂಕಟಲಕ್ಷಮ್ಮ ಬಾಗಿಲು ತೆಗೆಯಲು ಹೋದಾಗ ಅಕ್ಕಿಯೆಲ್ಲಾ ಬಾಗಿಲ ಸಮೀಪ ಬಿದ್ದಿದ್ದು ಕಳವು ಮಾಡಿರುವುದು ತಿಳಿದು ಬಂದಿದ್ದು ನಷ್ಟದ ಅಂದಾಜಿನ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ತಿಳಿದು ಬರಬೇಕಾಗಿದೆ. ಈ ಬಗ್ಗೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಮುತ್ತುರಾಜು ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.