ಬ್ರಿಟಿಷ್ ಕೌನ್ಸಿಲ್ ಜತೆ 3 ವರ್ಷಗಳ ಒಪ್ಪಂದಕ್ಕೆ ಉನ್ನತ ಶಿಕ್ಷಣ ಇಲಾಖೆ ಅಂಕಿತ

ಬೆಂಗಳೂರು:           ಇಂಗ್ಲಿಷ್ ಕಲಿಕೆ, ಬೋಧಕರಿಗೆ ತರಬೇತಿ, ಕೌಶಲ್ಯ, ಉದ್ಯೋಗಾವಕಾಶಗಳ ಸೃಷ್ಟಿಯೇ ಗುರಿ-ಅಶ್ವತ್ಥನಾರಾಯಣ

ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ತಂದುಕೊಡುವ ಮೂರು ವರ್ಷಗಳ ಒಡಂಬಡಿಕೆಗೆ ಕರ್ನಾಟಕ ಸರಕಾರ ಮತ್ತು ಬ್ರಿಟಿಷ್ ಕೌನ್ಸಿಲ್ ಸಂಸ್ಥೆಗಳು ಶುಕ್ರವಾರ ಇಲ್ಲಿ ಅಂಕಿತ ಹಾಕಿದವು.

ವಿಕಾಸಸೌಧದಲ್ಲಿ ಇದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಪರವಾಗಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್ ಮತ್ತು ಬ್ರಿಟಿಷ್ ಕೌನ್ಸಿಲ್ ಪರವಾಗಿ ಆ ಸಂಸ್ಥೆಯ ದಕ್ಷಿಣ ಭಾರತ ಮಟ್ಟದ ನಿರ್ದೇಶಕ ಜನಕ ಪುಷ್ಪನಾಥನ್ ಅಂಕಿತ ಹಾಕಿ, ಒಡಂಬಡಿಕೆ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥನಾರಾಯಣ, ಈ ಒಡಂಬಡಿಕೆಯು ರಾಜ್ಯದ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣದ ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ, ಇಂಗ್ಲಿಷ್ ಕಲಿಕೆ ಮತ್ತು ಸಂಶೋಧನೆಗೆ ಅಗತ್ಯವಾದ ಶಿಸ್ತನ್ನು ಕಲಿಸಲಿದೆ.

ರಾಜ್ಯ ಮತ್ತು ಇಂಗ್ಲೆಂಡ್ ನ ಶಿಕ್ಷಣ ಸಂಸ್ಥೆಗಳ ಜತೆ ವಿದ್ಯಾರ್ಥಿಗಳ‌ ವಿನಿಮಯ (ಟ್ವಿನ್ನಿಂಗ್ ಕಾರ್ಯಕ್ರಮ), ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ನಾಯಕತ್ವ ಬೆಳೆಸುವ ವಿಷಯದಲ್ಲಿ ಒಪ್ಪಂದ ಗಮನಹರಿಸಲಿದೆ. ಇದರಿಂದಾಗಿ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ ಎಂದರು.

ಬ್ರಿಟಿಷ್ ಕೌನ್ಸಿಲ್ ನೊಂದಿಗೆ ಕಳೆದೊಂದು ದಶಕದಿಂದ ರಾಜ್ಯದ ಸಂಬಂಧ ಹಲವು ಪಟ್ಟು ಸುಧಾರಿಸಿದೆ. ಈ ಸಹಭಾಗಿತ್ವದ ಮೂಲಕ ರಾಜ್ಯದ ವಿ.ವಿ.ಗಳ ಪಠ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಗಿದೆ. ಜೊತೆಗೆ, ಒಳ್ಳೆಯ ಉದ್ಯೋಗ ಸೃಷ್ಟಿಯಾಗುತ್ತಿವೆ ಎಂದು ಅವರು ನುಡಿದರು.

ಈ ಒಡಂಬಡಿಕೆಯು ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆಯಲು ಬೇಕಾದ ಕೌಶಲ್ಯಗಳನ್ನು ಹೆಚ್ಚಿಸಲಿದೆ. ಜತೆಗೆ, ಯುನೈಟೆಡ್ ಕಿಂಗ್ಡಂ ಮತ್ತು ಭಾರತದ ನಡುವೆ ಶೈಕ್ಷಣಿಕ ಸಂಶೋಧನಾ ಉಪಕ್ರಮ ಮತ್ತು `ಗೋಯಿಂಗ್ ಗ್ಲೋಬಲ್’ ಕಾರ್ಯಕ್ರಮಗಳ ಮೂಲಕ ಈ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

ಬಹುಮುಖ್ಯವಾಗಿ ಐಟಿಐ, ಎಂಜಿನಿಯರಿಂಗ್ ಮತ್ತು ವ್ಯವಸ್ಥಾಪನಾ ವಿಜ್ಞಾನ (ಮ್ಯಾನೇಜ್ಮೆಂಟ್ ಕೋರ್ಸಸ್)ಗಳನ್ನು ಓದುತ್ತಿರುವವರಿಗೆ ಇದರಿಂದ ಅಪಾರ ಲಾಭವಾಗಲಿದೆ. ಅಲ್ಲದೆ, ಕರ್ನಾಟಕದ ವಿದ್ಯಾರ್ಥಿಗಳು ಇಂಗ್ಲೆಂಡಿನ ವಿಶ್ವವಿದ್ಯಾಲಯಗಳಿಗೆ ತೆರಳಿ ಉನ್ನತಾಧ್ಯಯನ ಮಾಡಲು ಅವಕಾಶವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಮಿಗಿಲಾಗಿ, ಎರಡೂ ಕಡೆಯ ಉತ್ಕೃಷ್ಟತಾ ಕೇಂದ್ರಗಳು ಸುಸ್ಥಿತ ಸಹಭಾಗಿತ್ವವನ್ನು ಹೊಂದುವ ಮೂಲಕ ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ಹೆಚ್ಚು ಉತ್ತೇಜನ ನೀಡಲಿವೆ. ಇದರಿಂದಾಗಿ, ರಾಜ್ಯದ ವಿದ್ಯಾರ್ಥಿಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮಶೀನ್ ಲರ್ನಿಂಗ್, ಎಡ್-ಟೆಕ್, ಜೀವವಿಜ್ಞಾನಗಳು ಮತ್ತು ಸೈಬರ್ ಸೆಕ್ಯುರಿಟಿಯಂತಹ ಅತ್ಯಾಧುನಿಕ ಕೋರ್ಸುಗಳನ್ನು ಕಲಿಯಬಹುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಇಂಗ್ಲೆಂಡ್ ಸರ್ಕಾರದ ಅಂತರರಾಷ್ಟ್ರೀಯ ಶಿಕ್ಷಣ ಚಾಂಪಿಯನ್, ಶಿಕ್ಷಣ ತಜ್ಞ ಸರ್ ಸ್ಟೀವ್ ಸ್ಮಿತ್, ಈ ವರ್ಷದ ಮೇ ತಿಂಗಳಲ್ಲಿ ತಮ್ಮ ದೇಶದಲ್ಲಿ ನಡೆಯಲಿರುವ `ವಿಶ್ವ ಶಿಕ್ಷಣ ಒಕ್ಕೂಟ’ದ ಸಮಾವೇಶಕ್ಕೆ ಸಚಿವರನ್ನು ಆಹ್ವಾನಿಸಿದರು. ಇದರಂತೆ, ರಾಜ್ಯದಿಂದ ಉನ್ನತ ಶಿಕ್ಷಣ ಸಚಿವರ ನೇತೃತ್ವದಲ್ಲಿ ತೆರಳಲಿರುವ ನಿಯೋಗದಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಪ್ರತಿನಿಧಿಗಳು, ಹಲವು ವಿ.ವಿ.ಗಳ ಕುಲಪತಿಗಳು ಮತ್ತು ಇಲಾಖೆಯ ಕೆಲವು ಉನ್ನತಾಧಿಕಾರಿಗಳು ಇರಲಿದ್ದಾರೆ.

ಕಾರ್ಯಕ್ರಮದಲ್ಲಿ ಬ್ರಿಟಿಷ್ ಕೌನ್ಸಿಲ್ ಸಂಸ್ಥೆಯ ದಕ್ಷಿಣ ಏಷ್ಯಾ ಪ್ರಾದೇಶಿಕ ನಿರ್ದೇಶಕ ಆಡ್ರಿಯನ್ ಚಾಡ್ವಿಕ್, ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಜೋಶಿ, ಆಡಳಿತಾಧಿಕಾರಿ ಡಾ.ತಾಂಡವಗೌಡ ಉಪಸ್ಥಿತರಿದ್ದರು.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap