ಬೆಂಗಳೂರು
ಪಹಲ್ಗಾಮ್ ಉಗ್ರ ದಾಳಿ ಹಾಗೂ ಅದರ ನಂತರ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಬೆನ್ನಲ್ಲೇ ದೇಶದ ಒಳಗಡೆ ಭಯೋತ್ಪಾದಕ ದಾಳಿಗಳ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಚನೆ ನೀಡಿವೆ. ಬೆಂಗಳೂರಿನಲ್ಲಿ ಅತಿಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ಕ್ರಮ ಕೈಗೊಳ್ಳಲು ಪೋಲಿಸ್ ಇಲಾಖೆ ಸೂಚನೆ ನೀಡಿದ್ದು, ಸಿಲಿಕಾನ್ ಸಿಟಿಯ 41 ಮಾಲ್ಗಳಲ್ಲಿ ಬಿಗಿ ಭದ್ರತೆ ಒದಗಿಸಲು ಸೂಚಿಸಲಾಗಿದೆ. ಹೀಗಾಗಿ ಮಾಲ್ಗಳಿಗೆ ಬರುವ ಪ್ರತಿಯೊಬ್ಬರನ್ನೂ ಭದ್ರತಾ ಸಿಬ್ಬಂದಿ ತಪಾಸಣೆ ಮಾಡಿಯೇ ಒಳಗೆ ಬಿಡುತ್ತಿದ್ದಾರೆ. ಚಾಕು-ಚೂರಿ ಸೇರಿದಂತೆ ಅಪರಾಧ ಕೃತ್ಯಕ್ಕೆ ಬಳಕೆ ಮಾಡುವ ಯಾವುದೇ ರೀತಿಯ ವಸ್ತುಗಳನ್ನು ಒಳಗೆ ಬಿಡದಿರಲು ಸೂಚನೆ ನೀಡಲಾಗಿದೆ.
ಭದ್ರತಾ ತಪಾಸಣೆ ಹೆಚ್ಚಿಸಿರುವುದು ಮಾತ್ರವಲ್ಲದೆ, ಮಾಲ್ ಹೊರಗೆ ಮತ್ತು ಒಳಗೆ ಹೆಚ್ಚಿನ ಕ್ಯಾಮರಾಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ. ಸೆಕ್ಯುರಿಟಿ ಗಾರ್ಡ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಲು ನಿರ್ದೇಶನ ನೀಡಲಾಗಿದೆ. ಯಾವುದೇ ಅಹಿತಕರ ಘಟನೆಗಳ ಸೂಚನೆ ಕಂಡು ಬಂದಿದ್ದೇ ಆದಲ್ಲಿ ತಕ್ಷಣವೇ ಪೋಲಿಸ್ ಕಂಟ್ರೋಲ್ ರೂಂಗೆ ಕರೆ ಮಾಡಬೇಕು. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಮಾಲ್ ಮಾಲೀಕರು ಮತ್ತು ಆಡಳಿತ ಮಂಡಳಿ ತೆಗೆದುಕೊಳ್ಳಬೇಕೆಂದು ಪೋಲಿಸ್ ಇಲಾಖೆ ಸಲಹೆ ನೀಡಿದೆ.
ಮಾಲ್ಗಳಲ್ಲಿ ಹೆಚ್ಚಿನ ಭದ್ರತಾ ತಪಾಸಣೆ ನಡೆಸುವುದಕ್ಕೆ ಸಾರ್ವಜನಿಕರು ಕೂಡ ಸಹಮತ ವ್ಯಕ್ತಪಡಿಸಿದ್ದು, ಹೆಚ್ಚಿನ ಜನಸಂದಣಿ ಸೇರುವ ಸ್ಥಳದಲ್ಲಿ ಹೆಚ್ಚು ತಪಾಸಣೆ ಮಾಡುವುದು ಒಳ್ಳೆಯದು ಎಂದಿದ್ದಾರೆ.
ಒಟ್ಟಿನಲ್ಲಿ, ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಬೆಂಗಳೂರಿನ ಎಲ್ಲಾ ಮಾಲ್ಗಳಲ್ಲೂ ಕಟ್ಟೆಚ್ಚರ ವಹಿಸಲು ಮುಂದಾಗಿರುವುದು ಸಾರ್ವಜನಿಕರಲ್ಲಿ ನೆಮ್ಮದಿಗೆ ಕಾರಣವಾಗಿದೆ. ಇದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
