ತುರುವೇಕೆರೆ :
ಭಾರತೀಯ ಸೇನೆಯಲ್ಲಿ ದೇಶ ರಕ್ಷಣೆ ಮಾಡಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿ ತಾಯ್ನಡಿಗೆ ಅಗಮಿಸಿದ ವೀರಯೋಧನನ್ನು ತಾಲ್ಲೂಕಿನ ಜನತೆ ಅಭೂತಪೂರ್ಣವಾಗಿ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು.
ತಾಲ್ಲೂಕಿನ ದೆಬ್ಬೇಘಟ್ಟ ಹೋಬಳಿ ಗೋಣಿತುಮಕೂರು ಗ್ರಾಮದ ಜಿ.ಎಸ್.ಚಿರಂಜೀವಿಯವರು ಹಲವು ವರ್ಷಗಳಿಂದ ದೇಶ ರಕ್ಷಣೆ ಮಾಡುತ್ತಾ ಶಿಸ್ತಿನ ಶಿಪಾಯಿ ಎಂದು ಹೆಸರು ಮಾಡಿ ಸೇವೆ ಸಲ್ಲಿಸಿದ್ದರು. ಈಗ ತಮ್ಮ ಸೇವಾವಧಿ ಮುಗಿಸಿ ಸ್ವಗ್ರಾಮಕ್ಕೆ ಆಗಮಿಸಲು ತುರುವೇಕೆರೆ ಪಟ್ಟಣಕ್ಕೆ ಬಂದ ಸಂದರ್ಭದಲ್ಲಿ ಪಟ್ಟಣದ ನಾಗರೀಕರು, ರಾಜಕೀಯ ಮುಖಂಡರುಗಳು, ಆಟೋಚಾಲಕರು ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಅವರನ್ನು ಎದುರುಗೊಂಡು ಹಾರ-ತುರಾಯಿ ಹಾಕಿ ಅಭಿಮಾನದಿಂದ ಕೈಕುಲುಕಿ ಬರಮಾಡಿಕೊಂಡರು.
ಪ್ರವಾಸಿ ಮಂದಿರದಿಂದ ತೆರೆದ ವಾಹನದಲ್ಲಿ ವೀರಯೋಧನನ್ನು ಮೆರವಣಿಗೆ ನಡೆಸಿದ ಅಭಿಮಾನಿಗಳು ರಸ್ತೆಯುದ್ದಕ್ಕೂ ನಿವೃತ್ತ ಯೋಧನ ಮೇಲೆ ಹೂಮಳೆಗೆರೆದರು. ರಸ್ತೆ ಅಕ್ಕಪಕ್ಕ ನಿಂತ ನಾಗರೀಕರು ಯೋಧನತ್ತ ಕೈಬೀಸಿ ಅಭಿನಂದನೆ ಸಲ್ಲಿಸಿದರು. ನಂತರ ಅವರ ಸ್ವಗ್ರಾಮ ಗೋಣಿತುಮಕೂರಿನಲ್ಲಿ ವೀರಯೋಧನಿಗೆ ಹೃದಯಪೂರ್ವಕ ಸ್ವಾಗತದೊಂದಿಗೆ ಅವರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಗ್ರಾಮದ ಜನತೆ ಹಬ್ಬದೋಪಾದಿಯಲ್ಲಿ ಆಚರಿಸಿ ನಿವೃತ್ತ ವೀರಯೋಧನನ್ನು ಸ್ವಗ್ರಾಮಕ್ಕೆ ಸಂಭ್ರಮದಿಂದ ಬರಮಾಡಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
