ಮಳೆಗೆ ಗೋಡೆ ಕುಸಿತ : ಉರುಳಿದ ವಿದ್ಯುತ್ ಕಂಬ-ಮರ

 ತುರುವೇಕೆರೆ : 

     ತಾಲ್ಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಗೆ ಕೆಲವೆಡೆ ವಾಸದ ಮನೆಗಳು, ವಿದ್ಯುತ್ ಕಂಬಗಳು ಹಾಗು ಮರಗಳು ನೆಲಕಚ್ಚಿವೆ.

     ಹದ ಮಳೆಗೆ ತಾಲ್ಲೂಕಿನ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಳೇಕೆರೆ ಗ್ರಾಮದ ಬಸವರಾಜು ಅವರ ಮನೆಯ ಗೋಡೆ ಕುಸಿದು ಬಿದ್ದು, ಮನೆಯಲ್ಲಿದ್ದ ಕೃಷಿ ಪರಿಕರಗಳು, ಪಿವಿಸಿ ಪೈಪ್‍ಗಳು ಮತ್ತು ಸ್ಪಿಂಕ್ಲರ್‍ಗಳು ಹಾನಿಗೊಳಗಾಗಿವೆ. ಅದೇ ರೀತಿ ಸಂಗ್ಲಾಪುರ ಗ್ರಾಮದ ಚಿಕ್ಕೀರೆಗೌಡ, ಮಾಯಸಂದ್ರ ಹೋಬಳಿಯ ಡಿ.ಎನ್.ಪುರದ ಗೌರಮ್ಮ ಅವರುಗಳ ಮನೆಯ ಗೋಡೆ ಕುಸಿದು ಬಿದ್ದು ಮನೆಯ ಪರಿಕರಗಳೆಲ್ಲ ಮಳೆಗೆ ಹಾಳಾಗಿವೆ.

ದಂಡಿನಶಿವರ ಹೋಬಳಿಯ ಅಮ್ಮಸಂದ್ರದ ಬಳಿ ಜಾಲಿಯ ಮರ ಬುಡ ಸಮೇತ ಕಿತ್ತು ವಿದ್ಯುತ್ ಕಂಬದ ಮೇಲೆ ಮತ್ತು ರಸ್ತೆಗೆ ಬಿದ್ದು, ಕೆಲವೊತ್ತು ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಅದೇ ರೀತಿ ಕಳ್ಳನಕೆರೆ-ಗೊಟ್ಟಿಕೆರೆ ಬಳಿ ಹುಣಸೆ ಮರ ಬಿದ್ದು, ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಎಂದು ಬೆಸ್ಕಾಂ ಎಇಇ ಚಂದ್ರಾನಾಯ್ಕ್ ತಿಳಿಸಿದ್ದಾರೆ.

     ಚಿಮ್ಮನಹಳ್ಳಿ-ದೊಂಬರನಹಳ್ಳಿ ಹಳ್ಳದ ನೀರು ರಸ್ತೆ ಮೇಲೆ ರಭಸವಾಗಿ ಹರಿದು ಶಾಲಾ ಮಕ್ಕಳು ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ. ಹಾಗೆಯೆ ಕೊಂಡಜ್ಜಿ ಹಳ್ಳಿ, ಮಾದಿಹಳ್ಳಿ-ಅರಳಿಕೆರೆ ಹಳ್ಳಗಳು ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

      ಉತ್ತಮ ಮಳೆಯಿಂದ ತಾಲ್ಲೂಕಿನ ದಂಡಿನಶಿವರ, ಮಾಯಸಂದ್ರ, ದಬ್ಬೇಘಟ್ಟ ಮತ್ತು ಕಸಬಾ ವ್ಯಾಪ್ತಿಯಲ್ಲಿ ಬಿತ್ತನೆಯಾಗಿರುವ ಮುಂಗಾರು ಬೆಳೆಗಳಾದ ರಾಗಿ, ಜೋಳ, ತೊಗರಿ, ಅವರೆ, ಅರಳು, ಹುರುಳಿ, ಸಾಸಿವೆ, ಹುಚ್ಚೆಳ್ಳು ಬೆಳೆಗಳು ಹಾಗು ವಾಣಿಜ್ಯ ಬೆಳೆಗಳಾದ ತೆಂಗು, ಅಡಕೆ, ಬಾಳೆ ಗಿಡಗಳು ಚೆನ್ನಾಗಿ ಬೆಳೆದು ಹಸಿರಿನಿಂದ ಕಂಗೊಳಿಸುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಬೀರಿದೆ.

      ತಾಲ್ಲೂಕಿನ ಹಲವೆಡೆ ದೊಡ್ಡುಸ್ಲು ಮಳೆಗೆ ಬಿತ್ತನೆಯಾಗಿರುವ ರಾಗಿ ದಷ್ಟಪುಷ್ಟವಾಗಿ ಬೆಳೆದು, ಅಲ್ಲಲ್ಲಿ ರಾಗಿ ತೆನೆಯೊಡೆದಿದ್ದು, ಹದ ಮಳೆಗೆ ರಾಗಿ ತೆನೆ ನೆಲ ಕಚ್ಚಿದೆ. ಅಲ್ಲದೆ ಹೊಲ, ತೋಟ ಸಾಲುಗಳಲ್ಲಿ ಜೋಳದ ಮೇವು ನೆಲಕಚ್ಚಿದ್ದು, ರೈತರಲ್ಲಿ ಆತಂಕ ಹೆಚ್ಚಿಸಿದೆ.
ಇನ್ನು ಹೊಲ, ಗದ್ದೆ, ತೋಟ, ಅಡಕೆ ತೋಟ, ಬಾಳೆ ತೋಟ, ಚೆಕ್ ಡ್ಯಾಂ, ಕೃಷಿ ಹೊಂಡ, ಹಳ್ಳಸಾಲು, ಕಟ್ಟೆಗಳಲ್ಲಿ ಮಳೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಕಸಬಾ 92, ದಂಡಿನಶಿವರ 75.20, ಮಾಯಸಂದ್ರ 72.20, ದಬ್ಬೇಘಟ್ಟ30.60, ಮತ್ತು ಸಂಪಿಗೆಯಲ್ಲಿ 58 ಒಟ್ಟು 328 ಮಿಲಿ ಮೀಟರ್ ಮಳೆಯಾಗಿರುವುದು ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link