5 ಕೋಟಿ ರೂ. ಪತ್ತೆ ಪ್ರಕರಣ; ನ್ಯಾಯಮೂರ್ತಿ ಯಶವಂತ್ ವರ್ಮಾ ಕರ್ತವ್ಯದಿಂದ ವಜಾ

ನವದೆಹಲಿ:

    ಮನೆಯಲ್ಲಿ ಸುಟ್ಟ ಸ್ಥಿತಿಯಲ್ಲಿ 15 ಕೋಟಿ ರೂ.ಗಳ ನೋಟಿನ ಕಂತೆಗಳು ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಮುಂದಿನ ಆದೇಶದವರೆಗೆ ಯಶವಂತ್‌ ವರ್ಮಾ ಅವರನ್ನು ತಕ್ಷಣದಿಂದಲೇ ಕರ್ತವ್ಯದಿಂದ ವಜಾಗೊಳಿಸಿ ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಆದೇಶ ಹೊರಡಿಸಿದ್ದಾರೆ. ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್‌ ಈ ಪ್ರಕರಣದ ವಿಚಾರಣೆಗಾಗಿ ಪಂಜಾಬ್‌, ಹರಿಯಾಣ ಮತ್ತು ಕರ್ನಾಟಕ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿದೆ. 

    ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಭಾರಿ ಪ್ರಮಾಣದ ನಗದು ಪತ್ತೆಯಾಗಿರುವ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಯಶವಂತ್ ವರ್ಮಾ ಅವರ ಮನೆಯನ್ನು ಶೋಧಿಸಲಾಗುತ್ತಿದೆ. ಇದೀಗ ದೆಹಲಿ ಪೊಲೀಸರು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ವರ್ಮಾ ನಿವಾಸದಲ್ಲಿ ಬೆಂಕಿಯಲ್ಲಿ ಸುಟ್ಟು ಹೋಗಿರುವ ಕಂತೆ ಕಂತೆ ನೋಟುಗಳು ಕಾಣಿಸುತ್ತದೆ. ವರ್ಮಾ ಊರಿನಿಂದ ಹೊರಗಿದ್ದಾಗ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಅವರ ಕುಟುಂಬದ ಸದಸ್ಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅವರು ಬೆಂಕಿಯನ್ನು ನಂದಿಸಿದ ನಂತರ ರೂಂಗಳಲ್ಲಿ ನಗದು ಪತ್ತೆಯಾಗಿತ್ತು.

   ಸದ್ಯ ಈ ವಿಡಿಯೋ ಗೆ ಪ್ರತಿಕ್ರಿಯೆ ನೀಡಿರುವ ವರ್ಮಾ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ನಾನು ಅಥವಾ ನನ್ನ ಕುಟುಂಬದವರು ಯಾರೇ ಆಗಲಿ ಹಣವನ್ನು ಕೋಣೆಗಳಲ್ಲಿ ಸಂಗ್ರಹಿಸಿಲ್ಲ. ಆಪಾದಿತ ನಗದು ನಮಗೆ ಸೇರಿದೆ ಎಂಬ ಆರೋಪವನ್ನು ನಾನು ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಪುನಃ ಹೇಳಬೇಕೆಂದರೆ, ನಾನು ಅಥವಾ ನನ್ನ ಕುಟುಂಬದ ಯಾವುದೇ ಸದಸ್ಯರು ಆ ಸ್ಟೋರ್ ರೂಂನಲ್ಲಿ ಯಾವುದೇ ಸಮಯದಲ್ಲಿ ಯಾವುದೇ ನಗದು ಅಥವಾ ಕರೆನ್ಸಿಯನ್ನು ಸಂಗ್ರಹಿಸಿಲ್ಲ ಅಥವಾ ಇಟ್ಟುಕೊಂಡಿಲ್ಲ.

   ಯಾವಾಗಲೂ ನಿಯಮಿತ ಬ್ಯಾಂಕಿಂಗ್ ಮಾರ್ಗಗಳ ಮೂಲಕ, UPI ಹಾಗೂ ಕಾರ್ಡ್‌ಗಳ ಮೂಲಕವೇ ಹಣವನ್ನು ಬಳಸುತ್ತೇವೆ. ಪೊಲೀಸ್ ಆಯುಕ್ತರು ಹಂಚಿಕೊಂಡ ವೀಡಿಯೊ ಮತ್ತು ಫೋಟೋಗಳು ತಾವು ಸ್ಥಳದಲ್ಲಿ ನೋಡಿದ ಚಿತ್ರಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಹೇಳಿರುವ ದೆಹಲಿ ಹೈಕೋರ್ಟ್ ನ್ಯಾಯಾಧೀಶರು, ಇದು ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲು ನಡೆದ ಪಿತೂರಿ ಎಂದು ಹೇಳಿದ್ದಾರೆ. 

  “ಹೈಕೋರ್ಟ್ ಗೆಸ್ಟ್‌ಹೌಸ್‌ನಲ್ಲಿ ನಮ್ಮ ಸಭೆಯ ಸಮಯದಲ್ಲಿ ಪೊಲೀಸ್ ಆಯುಕ್ತರು ಹಂಚಿಕೊಂಡಿದ್ದ ವೀಡಿಯೊ ಮತ್ತು ಇತರ ಛಾಯಾಚಿತ್ರಗಳನ್ನು ನನಗೆ ಮೊದಲು ತೋರಿಸಲಾಯಿತು. ವೀಡಿಯೊದ ವಿಷಯಗಳನ್ನು ನೋಡಿ ನನಗೆ ಸಂಪೂರ್ಣವಾಗಿ ಆಘಾತವಾಯಿತು ಏಕೆಂದರೆ ವಾಸ್ಥವ ಅದಲ್ಲ.ಅಪಪ್ರಚಾರ ಮಾಡಲು ನಡೆಸಿದ ಪಿತೂರಿಯಂತೆ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.