ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದ ವಕೀಲರು

ಹರಿಹರ

            ವ್ಯವಹಾರಿಕ ನ್ಯಾಯಾಲಯಗಳ ಸ್ಥಾಪನೆಯ ಆದೇಶವನ್ನು ಖಂಡಿಸಿ ನಗರದಲ್ಲಿ ಮಂಗಳವಾರ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.
             ಬೆಳಿಗೆ ನ್ಯಾಯಾಲಯ ಸಂಕೀರ್ಣದ ವಕೀಲರ ಸಂಘದ ಕಚೇರಿಯಲ್ಲಿ ತುರ್ತು ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ನಾಗರಾಜ್ ಹಲವಾಗಲು ಮಾತನಾಡಿ, ಸರಕಾರದ ನೂತನ ಆದೇಶದ ಪ್ರಕಾರ ದಾವಣಗೆರೆ ಜಿಲ್ಲೆಯ ನಿಗದಿತ ಮೊತ್ತದ ವ್ಯವಹಾರಿಕ ಪ್ರಕರಣಗಳನ್ನು ಬಳ್ಳಾರಿ ಜಿಲ್ಲೆಗೆ ವರ್ಗಾಯಿಸಲಾಗುತ್ತಿದೆ.
           ದೂರದ ಬಳ್ಳಾರಿಗೆ ಹೋಗಿ ಬರುವುದು ಕಕ್ಷಿದಾರರು ಹಾಗೂ ವಕೀಲರಿಬ್ಬರಿಗೂ ಅನಗತ್ಯ ಹೊರೆಯಾಗುತ್ತದೆ. ಖರ್ಚು ವೆಚ್ಚಗಳು ಹೆಚ್ಚಾಗುವುದರಿಂದ ಕಕ್ಷಿದಾರರು ನ್ಯಾಯ ಪಡೆಯುವ ಪ್ರಕ್ರಿಯೆಯಿಂದಲೆ ದೂರ ಉಳಿಯುವ ಅಪಾಯವಿದೆ.
             ದಾವಣಗೆರೆ ಜಿಲ್ಲೆಯಲ್ಲೆ ಪ್ರತ್ಯೇಕ ವ್ಯವಹಾರಿಕ ನ್ಯಾಯಾಲಯವನ್ನು ಸ್ಥಾಪನೆ ಮಾಡಬೇಕು. ಆ ಮೂಲಕ ಕಕ್ಷಿದಾರರು ಹಾಗೂ ವಕೀಲ ಸಮೂಹಕ್ಕೆ ಅನುಕೂಲ ಮಾಡಿಕೊಡಬೇಕೆಂದು ಅವರು ಆಗ್ರಹಿಸಿದರು.
            ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷೆ ಕೆ.ಎಸ್.ಶುಭಾ, ಕಾರ್ಯದರ್ಶಿ ಎಚ್.ಎಚ್.ಲಿಂಗರಾಜ್, ಹಿರಿಯ ವಕೀಲರಾದ ಕಿತ್ತೂರು ಶೇಖ್ ಇಬ್ರಾಹಿಂ, ಎ.ವಾಮನಮೂರ್ತಿ, ಎಚ್.ಎಂ.ಷಡಾಕ್ಷರಯ್ಯ, ನಿಸಾರ್ ಅಹ್ಮದ್, ನಾಗರಾಜ್ ಬಿ., ಸಿ.ಬಿ.ರಾಘವೇಂದ್ರ, ಮೋಹನ್ ಲಾಲ್ ಖಿರೋಜಿ, ಬಾಲಾಜಿ ಸಿಂಗ್, ಮೌನೇಶ್, ಬಸವರಾಜ್ ಅಮರಾವತಿ ಮತ್ತಿತರರಿದ್ದರು.ನಂತರ ಸಂಘದ ಪದಾಧಿಕಾರಿಗಳ ನಿಯೋಗ ತಹಸೀಲ್ದಾರರ ಮೂಲಕ ಸರಕಾರಕ್ಕೆ ಮನವಿಯನ್ನು ರವಾನಿಸಿದರು.