ಬೆಂಗಳೂರು:
ಜೆಸಿ ನಗರದ ಮುನಿರೆಡ್ಡಿ ಪಾಳ್ಯದಲ್ಲಿ ಬುಧವಾರ ರಾತ್ರಿ ಶೀಲಶಂಕಿಸಿ ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಪತ್ನಿಯನ್ನು ಪತಿಯೇ ಚಾಕುವಿನಿಂದ ಚುಚ್ಚಿ ವೇಲ್ನಿಂದ ಕತ್ತು ಬಿಗಿದು ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ.
ಕೊಲೆಯಾದವರನ್ನು ಮುನಿರೆಡ್ಡಿ ಪಾಳ್ಯದ ಮಾರಪ್ಪ ಗಾರ್ಡನ್ನ ಸಬೀನಾ ಬಾನು (24) ಎಂದು ಗುರುತಿಸಲಾಗಿದೆ. ಭಾನುಳನ್ನು ಕೊಲೆಗೈದ ಪತಿ ಸೈಯದ್ ತಬ್ರೇಜ್ (35)ನನ್ನು ಜೆಸಿ ನಗರ ಪೆÇಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಿಷನ್ ಕೆಲಸ ಮಾಡುತ್ತಿದ್ದ ತಬ್ರೇಜ್, 1 ತಿಂಗಳ ಹಿಂದಷ್ಟೇ ಸಬೀನಾ ಬಾನುಳನ್ನು ವಿವಾಹವಾಗಿದ್ದ. ನಂತರ ಮಾರಪ್ಪ ಗಾರ್ಡನ್ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ದಂಪತಿ ವಾಸಿಸುತ್ತಿದ್ದರು.ಸಬೀನಾ ಬಾನುಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ ತಬ್ರೇಜ್ ಆಕೆಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ನಿನ್ನೆ ರಾತ್ರಿ ಇದೇ ವಿಚಾರವಾಗಿ ದಂಪತಿ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದೆ.ರೊಚ್ಚಿಗೆದ್ದ ತಬ್ಬೇಜ್ ಪತ್ನಿಯನ್ನು ಚಾಕುವಿನಿಂದ ಚುಚ್ಚಿ, ವೇಲ್ನಿಂದ ಕತ್ತು ಬಿಗಿದು ಕೊಲೆ ಮಾಡಿ ಬಾಗಿಲು ಹಾಕಿಕೊಂಡು ಹೋಗಿದ್ದ.
ಸಬೀನಾ ಬಾನು ಪೋಷಕರು ಎಷ್ಟು ಬಾರಿ ಕರೆ ಮಾಡಿದರು ಮೊಬೈಲ್ ಸ್ವೀಕರಿಸದ್ದಿದ್ದರಿಂದ ಆತಂಕಗೊಂಡು ಇಂದು ಬೆಳಗ್ಗೆ ಮನೆಗೆ ಬಂದು ನೋಡಿದಾಗ ಕೊಲೆಯಾಗಿರುವುದು ಪತ್ತೆಯಾಗಿದೆ.ಪೊಲೀಸರಿಗೆ ಸುದ್ದಿ ಮುಟ್ಟಿಸುವಷ್ಟರಲ್ಲಿ ತಬ್ಬೇಜ್ ಠಾಣೆಗೆ ಹೋಗಿ ಶರಣಾಗಿದ್ದ. ಪತ್ನಿಯ ನಡತೆ ಸರಿ ಇಲ್ಲದ್ದಕ್ಕಾಗಿ ಆಕೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್ಸಿಂಗ್ ರಾಥೋರ್ ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








