ತುಮಕೂರು:

             ವಿಧಾನಪರಿಷತ್ ಚುನಾವಣೆಯಲ್ಲಿ ರಾಜೇಂದ್ರ ಅವರ ಗೆಲುವು ಜಾತ್ಯಾತೀತತೆಯ ಗೆಲುವಾಗಿದ್ದು, ಎಲ್ಲಾ ಜಾತಿ ವರ್ಗದವರು ಅದರಲ್ಲೂ ಹಿಂದುಳಿದ, ದಲಿತ, ಅಲ್ಪಸಂಖ್ಯಾತರು ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.

ನಗರದ ಪ್ರಗತಿ ಬಡಾವಣೆಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದಿಂದ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾದ ನೂತನ ಎಂಎಲ್ಸಿ ಆರ್.ರಾಜೇಂದ್ರ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಿಂದುಳಿದ ವರ್ಗಗಳ ನಾಯಕರು ಬರೀ ಚುನಾವಣೆ ಬಂದಾಗ ಮಾತ್ರ ನಮ್ಮ ಬಳಿ ಬರುತ್ತಾರೆ. ನಂತರ ದೂರಾಗುತ್ತಾರೆ ಎಂಬ ದೂರಿದೆ. ಪ್ರಸ್ತುತ ಚುನಾವಣೆಯಲ್ಲಿ ಹಳ್ಳಿ ಹಳ್ಳಿಗೆ ತೆರಳಿ ರಾಜೇಂದ್ರ ಗೆಲುವಿಗೆ ಶ್ರಮಿಸಿರುವ ಹಿಂದುಳಿದ ವರ್ಗದ ನಾಯಕರು ಮುಂದೆಯೂ ಅದೇ ವಿಶ್ವಾಸ, ಸಂಪರ್ಕವನ್ನು ಗ್ರಾಮೀಣರೊಂದಿಗೆ ಇಟ್ಟುಕೊಂಡು ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಿದೆಎಂದರು.

ಧ್ವನಿ ಇಲ್ಲದವರಿಗೆ ನೆರವಾಗಿ:

ರಾಜಕೀಯ ಅಧಿಕಾರಕ್ಕಿಂತ ಪ್ರಬಲ ಅಸ್ತ್ರ ಮತ್ತೊಂದಿಲ್ಲ ಎಂದ ಕೆ.ಎನ್.ರಾಜಣ್ಣ ಅವರು ಹಿಂದುಳಿದ ವರ್ಗದವರು ರಾಜಕೀಯವಾಗಿ ಯಾವುದೇ ಪಕ್ಷದಲ್ಲಿದ್ದರೂ ಅಧಿಕಾರಸ್ಥಾನಕ್ಕೇರುವುದು ಅವಶ್ಯಕವಾಗಿದೆ. ಸಿ.ಎನ್.ಭಾಸ್ಕರಪ್ಪ ಸಂಸದರಾಗಿ ಆಯ್ಕೆಯಾಗಿದ್ದುಹಿಂದುಳಿದ ವರ್ಗದವರು ಯಾವುದೇ ಅಧಿಕಾರಸ್ಥಾನ ಹಿಡಿಯಬಹುದು ಎಂಬುದರ ಧ್ಯೋತಕ ಅಧಿಕಾರಸಿಕ್ಕಾಗ ಧ್ವನಿಇಲ್ಲದವರು, ಅಸಹಾಯಕರಾಗಿ ಜಾತ್ಯಾತೀತವಾಗಿ ನೆರವಾಗುವ ಕಾರ್ಯ ಮಾಡಬೇಕು ಎಂದರು.

ಹಿಂದುಳಿದವರು, ದಲಿತರು ನಾವು ಕೆಳವರ್ಗದವರೆಂಬ ಕೀಳರಿಮೆ ಬಿಡಬೇಕು. ಸಮಾನತೆಯ ಸಂವಿಧಾನವನ್ನು ಒಪ್ಪಿಕೊಂಡ ಮೇಲೆ ಮೇಲ್ವರ್ಗ-ಕೆಳವರ್ಗ ಎಂಬುದಿಲ್ಲ. ಹಿಂದುಳಿದವರು-ಮುಂದುವರಿದವರಷ್ಟೇ ಈ ಸಮಾಜದಲ್ಲಿರುವುದು ಎಂದು ಹೇಳಿ ಹಿಂದುಳಿದ ವರ್ಗಗಳ ಒಕ್ಕೂಟ ನಡೆಸುತ್ತಿರುವ ಕಾರ್ಯಚಟುವಟಿಕೆ, ಸಂಘಟನೆ ಉತ್ತಮವಾಗಿದ್ದು, 2ನೇ ಹಂತದನಾಯಕತ್ವ ಹಿಂದುಳಿದ ವರ್ಗಗಳಲ್ಲಿ ಬೆಳೆಯಬೇಕಿದೆ ಎಂದು ಆಶಿಸಿದರು.

ರಾಷ್ಟ್ರಮಟ್ಟದಲ್ಲಿ ರಾಜಣ್ಣ ಬೆಳಗಲಿ:

ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಮಾತನಾಡಿ ರಾಜಣ್ಣ ಅವರು ಜಿಲ್ಲೆ, ರಾಜ್ಯಕ್ಕೆ ತಮ್ಮ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಸಂಸದರಾಗಿ ಕೇಂದ್ರ ಸಚಿವರಾದರೆ ಸಹಕಾರ ಕ್ಷೇತ್ರವನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸುತ್ತಾರೆ. ರಾಜಣ್ಣ ಅವರಂತೆಯೇ ಅವರ ಪುತ್ರ ರಾಜೇಂದ್ರ ಜನಪರ ಕಾಳಜಿಯನ್ನು ಹೊಂದಿದ್ದು, ಅವರ ಗೆಲುವು ಹಿಂದುಳಿದ ವರ್ಗಕ್ಕೆ ಪರ್ವ ಕಾಲ. ಈ ಸಮಯವನ್ನು ಸದ್ಬಳಕೆ ಮಾಡಿ ಮುಂಬರುವ ಚುನಾವಣೆಯಲ್ಲೂ ಹಿಂದುಳಿದ ವರ್ಗಗಳ ರಾಜಕೀಯ ಶಕ್ತಿಯನ್ನು ಹೆಚ್ಚಿಸಬೇಕಿದೆ. ಹಿಂದುಳಿದ ವರ್ಗಗಳ ಒಕ್ಕೂಟದ ಟಿ.ಎನ್.ಮಧುಕರ್, ಧನಿಯಾಕುಮಾರ್, ರಾಜಣ್ಣ, ಕೆಂಪರಾಜು, ಚಂದ್ರಶೇಖರಗೌಡ, ಡಿ.ಎಂ.ಸತೀಶ್, ಶಾಂತಕುಮಾರ್ ಮತ್ತಿತರರು ಜಿಲ್ಲೆಯಾದ್ಯಂತೆ ಸಂಘಟನೆಗೆ ಶ್ರಮಿಸುತ್ತಿದ್ದು, ಎಲ್ಲರನ್ನು ತಲುಪುವ ಕಾರ್ಯ ಆಗಬೇಕು ಎಂದರು.

ಹಿಂದುಳಿದವರು ಕೀಳರಿಮೆ ಬಿಡಿ: ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಅವರು ಮಾತನಾಡಿ ಹಿಂದುಳಿದ ಜನಾಂಗಗಳು ಕೀಳರಿಮೆ ತೊರೆದರೆ ಏನನ್ನು ಬೇಕಾದರೂ ಸಾಧಿಸಬಹುದು, ತುಳಿಂiÀಲು ಬರುವವರಿಗೆ ತಕ್ಕ ಉತ್ತರ ನೀಡುವ ಶಕ್ತಿಯನ್ನು ಸಮುದಾಯಗಳು ಹೊಂದಬೇಕು. ಇದಕ್ಕೆ ಕೆ.ಎನ್.ರಾಜಣ್ಣ ಮಾದರಿಯಾಗಿದ್ದು ಅನೇಕ ಹೋರಾಟ, ಸವಾಲುಗಳನ್ನು ಎದುರಿಸಿ ಈ ಎತ್ತರಕ್ಕೆ ಬೆಳೆದಿದ್ದಾರೆ. ಸಿದ್ದರಾಮಯ್ಯ ಅವರ ಸರಕಾರದಲ್ಲಿ ಸಹಕಾರಿ ಕ್ಷೇತ್ರದ ಸಾಲ ಮನ್ನಾ ಹಿಂದೆ ರಾಜಣ್ಣ ಅವರ ಕೊಡುಗೆಯಿದ್ದು, ರಾಜೇಂದ್ರ ಅವರು ಪರಿಷತ್ ಸದಸ್ಯರಾಗಿ ಜನಮುಖಿಯಾಗಿ ಮತ್ತೆ ಆಯ್ಕೆಯಾಗುವಂತಹ ಕಾರ್ಯ ಮಾಡಬೇಕುಎಂದು ಸಲಹೆ ನೀಡಿದರು.

ಜಾತ್ಯಾತೀತ ಮಾನವ ವೇದಿಕೆಯ ಟಿ.ಆರ್.ಆಂಜಿನಪ್ಪ ಅವರು ಮಾತನಾಡಿ ರಾಜೇಂದ್ರ ಗೆಲುವು ಒಂದು ದೊಡ್ಡ ಹೋರಾಟವೇ ಸರಿ. ಸಿದ್ದರಾಮಯ್ಯ ಅವರ ಬಿಟ್ಟರೆ ಹಿಂದುಳಿದ ವರ್ಗದ ನಾಯಕರೆಂದು ಗುರುತಿಸಲ್ಪಡುವವರು ಇಲ್ಲ. ರಾಜಣ್ಣ ಅವರಿಗೆ ಆಶಕ್ತಿ ಇದೆ ಎಂದರು. ಒಕ್ಕೂಟದ ಜಿಲ್ಲಾ ಸಂಚಾಲಕ ಟಿ.ಎಚ್.ಧನಿಯಾಕುಮಾರ್ ಮಾತನಾಡಿ ರಾಜೇಂದ್ರ ಅವರ ಗೆಲಿವು ಹಿಂದುಳಿದ ವರ್ಗಗಳಲ್ಲಿ ಶಕ್ತಿತುಂಬಿದ್ದು, ಮೇಲ್ಮನೆಯಲ್ಲಿ ಗೆಲುವು ಸಾಧಿಸಿದಂತೆ ಇತರೆ ಸ್ಥಳೀಯ ಸಂಸ್ಥೆಗಳಲ್ಲೂ ಗೆಲುವು ಸಾಧಿಸಲು ಪೂರಕವೆನಿಸಿದೆ ಎಂದರು.

ಸೇವಾನಿರತರಾಗಿ:

ಉಪನ್ಯಾಸಕ ಮಹಾಲಿಂಗೇಶ್ ಅವರು ಮಾತನಾಡಿ ರಾಜೇಂದ್ರ ಅವರು ವಿಧಾನಪರಿಷತ್ ಸದಸ್ಯರಾಗಿ ಮೇಲ್ಮನೆಗೆ ಆಯ್ಕೆಯಾಗಿರುವುದು ಖುಷಿಯ ಸಂಗತಿ. ನಾನು ಎಂಎಲ್ಸಿಯೆಂದು ಪರಿಭಾವಿಸದೆ, ಜನರ ಪ್ರಧಾನ ಸೇವಕರೆಂದು ಭಾವಿಸಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಕಾರ್ಯ ಮಾಡಿ. ರಾಜಣ್ಣ ಅವರು ಮಾಡುತ್ತಿದ್ದ ಕಾರ್ಯಕ್ಕಿಂತ ಹೆಚ್ಚಾಗಿ ಜನಪರವಾಗಿದ್ದಾಗ ನೀವು ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತೀರಿ ಎಂದು ಆಶಿಸಿದರು.

ಅಭಿನಂದನೆ ಸ್ವೀಕರಿಸಿದ ವಿಧಾನ ಪರಿಷತ್ ನೂತನ ಸದಸ್ಯ ಆರ್.ರಾಜೇಂದ್ರ ಮಾತನಾಡಿ ಮೇಲ್ಮನೆಗೆ ಆಯ್ಕೆಯಾಗಿರುವುದಕ್ಕೆ ಹಿಂದುಳಿದ ವರ್ಗಗಳ ಒಕ್ಕೂಟದವರು ಹಾಗೂ ಸ್ನೇಹಿತ ಮಧುಕರ್ ಅವರು ಕರೆದು ಸನ್ಮಾನಿಸುವ ಮೂಲಕ ನನ್ನ ಜವಾಬ್ದಾರಿ ಹೆಚ್ಚಿಸಿದ್ದಾರೆ. ಪಕ್ಷಾತೀತ, ಜಾತ್ಯಾತೀತವಾಗಿ ನನ್ನ ಗೆಲುವಿಗೆ ಎಲ್ಲಾ ಸಮಾಜದ ಮುಖಂಡರು ಸ್ವಪ್ರೇರಣೆಯಿಂದ ಶ್ರಮಿಸಿದ್ದುಎಲ್ಲರಿಗೂ ಕೃತಜ್ಞನಾಗಿದ್ದೇನೆ. ಹಿಂದುಳಿದ ವರ್ಗಗಳು ನನ್ನ ಮೇಲೆ ಇಟ್ಟಿರುವ ನಿರೀಕ್ಷೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿಮ್ಮ ಬೆಂಬಲಕ್ಕೆ ಸದಾ ನಿಲ್ಲುವೆ ಎಂದರು.

ಸಮಾರಂಭದಲ್ಲಿ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ಹಾಗೂ ಪ್ರಜಾಪ್ರಗತಿ ಸಹ ಸಂಪಾದಕ ಟಿ.ಎನ್.ಮಧುಕರ್. ಜೈನ ಸಮಾಜದ ಮುಖಂಡ ಆರ್.ಎ.ಸುರೇಶ್‍ಕುಮಾರ್, ಹಿಂದುಳಿದ ವರ್ಗಗಳ ಒಕ್ಕೂಟದ ಚಂದ್ರಶೇಖರಗೌಡ, ಶಾಂತಕುಮಾರ್, ಕೆಂಪರಾಜು, ಡಿ.ಎಂ.ಸತೀಶ್, ರೂಪೇಶ್ ಕೃಷ್ಣಯ್ಯ, ಟಿ.ಆರ್.ಸುರೇಶ್, ಶಶಿಹುಲಿಕುಂಠೆಮಟ್, ಧರ್ಮರಾಜ್, ಸುನೀತಾನಟರಾಜ್, ಮಹದೇವ್, ಕಲ್ಲಪ್ಪ, ಪ್ರೊ.ಪರಶುರಾಮ್, ಯೋಗೇಶ್, ಡಾ.ಶಾಂತಕುಮಾರ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಸೇರಿ ಹಲವು ಮುಖಂಡರು ಪಾಲ್ಗೊಂಡರು. ರೇಣುಕಾಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap