ಪ್ಲಾಸ್ಟಿಕ್ ಬ್ಯಾಗ್ ಬಳಸುವ ಅಂಗಡಿಗೆ 5ಪಟ್ಟು ದಂಡ,ಲೈಸೆನ್ಸ್ ರದ್ದು!!!

ಬೆಂಗಳೂರು:

      ಉದ್ಯಾನ ನಗರಿ ಬೆಂಗಳೂರಿನಲ್ಲಿ ಆಗಸ್ಟ್ 1 ರಿಂದ ಪ್ಲಾಸ್ಟಿಕ್ ಚೀಲ ಬಳಸುವ ಅಂಗಡಿಗಳ ಮೇಲೆ ಐದು ಪಟ್ಟು ದಂಡ ಮತ್ತು ಅಂಗಡಿ ಪರವಾನಗಿ ರದ್ದುಪಡಿಸುವುದಾಗಿ ಮೇಯರ್ ಗಂಗಾಭಿಕೆ ಮಲ್ಲಿಕಾರ್ಜುನ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

        ಜಯನಗರದ ಭೈರಸಂದ್ರ ವಾರ್ಡ್ ನಲ್ಲಿ ಸುಮಾರು ಒಂದು ಸಾವಿರ ಶಾಲಾ ಮಕ್ಕಳೊಂದಿಗೆ “ ನಮ್ಮ ಕಸ ನಮ್ಮ ಜವಾಬ್ದಾರಿ,  ಬೇಡ ಬೇಡ ಪ್ಲಾಸ್ಟಿಕ್ ಬೇಡ. ಬೇಕು ಬೇಕು ಬಟ್ಟೆ ಬ್ಯಾಗ್ ಬೇಕು.  ಪಿಓಪಿ ಬೇಡ, ಮಣ್ಣಿನ ಗಣಪತಿ ಬೇಕು “ ಎಂಬ ಘೋಷಣೆಯೊಂದಿಗೆ ಆಯೋಜಿಸಿದ್ದ ಬೃಹತ್ ಜಾಗೃತಿ ಜಾಥಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ಲಾಸ್ಟಿಕ್ ವಿರುದ್ಧ ಕಳೆದ ಹದಿನೈದು ದಿನಗಳಿಂದ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲಾಗುತ್ತಿದೆ. ಜತೆಗೆ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ಚೀಲ ಇಟ್ಟುಕೊಂಡಿರುವ ಅಂಗಡಿಗಳ ಮೇಲೆ ದಾಳಿ ಮಾಡಿ ಜಪ್ತಿ ಮಾಡುತ್ತಿದ್ದೇವೆ. ಆಗಸ್ಟ್ ೧ ರಿಂದ ದಂಡದ ಪ್ರಮಾಣವನ್ನು ಐದು ಪಟ್ಟು ಹೆಚ್ಚಿಸಲಾಗುವುದು. ಅದಕ್ಕೂ ಜಗ್ಗದಿದ್ದರೆ ನೋಟಿಸ್ ನೀಡಿ, ಅಂಗಡಿ ಪರವಾನಗಿಯನ್ನೇ ರದ್ದು ಪಡಿಸುತ್ತೇವೆ ಎಂದು ನೇರವಾಗಿ ಎಚ್ಚರಿಕೆ ನೀಡಿದರು. 

      ಸಣ್ಣ ಪುಟ್ಟ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳಿಗೂ ಸಹ ಇದು ಅನ್ವಯವಾಗಲಿದೆ. ಹಣ್ಣು, ತರಕಾರಿ ಮಾರಾಟ ಮಾಡುವವರು ಸಹ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಪ್ಲಾಸ್ಟಿಕ್ ಚೀಲ ಬಳಕೆ ಮಾಡಿದ್ದೇ ಆದಲ್ಲಿ ಅವರು ಮಾರಾಟ ಮಾಡುತ್ತಿರುವ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು. Related image

      ಕಾನೂನು ಬಾಹಿರವಾಗಿ ಪ್ಲಾಸ್ಟಿಕ್ ವಿತರಣೆ ಮಾಡಲಾಗುತ್ತಿದ್ದು, ಜನತೆ ಕೂಡ ಪ್ಲಾಸ್ಟಿಕ್ ಬಳಕೆಯಿಂದ ದೂರ ಇರಬೇಕು. ಬಟ್ಟೆ ಬ್ಯಾಗ್ ಬಳಕೆಗೆ ಆದ್ಯತೆ ನೀಡಬೇಕು. ಎಲ್ಲರ ಸಹಕಾರದಿಂದ ಮಾತ್ರ ಪ್ಲಾಸ್ಟಿಕ್ ನಿಯಂತ್ರಣ ಸಾಧ್ಯ ಎಂದು ಅವರು ಪ್ರತಿಪಾದಿಸಿದರು. 

      ಸೆಪ್ಟೆಂಬರ್ 1 ರಿಂದ ಕಸ ವಿಂಗಡನೆ ಕಡ್ಡಾಯವಾಗಿದೆ. ಬುಧವಾರ ಮತ್ತು ಶನಿವಾರ ಮಾತ್ರ ಒಣ ಕಸ ಸ್ವೀಕರಿಸಲಾಗುವುದು. ಉಳಿದ ದಿನಗಳಲ್ಲಿ ಹಸಿ ಕಸ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಕಸ ವಿಂಗಡಿಸಿ ನೀಡದಿದ್ದರೆ ಅಂತಹ ಕುಟುಂಬದವರಿಗೂ ಸಹ ದಂಡ ವಿಧಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಎಚ್ಚರಿಸಿದರು. 

      ಇನ್ನು ಎಲ್ಲೆಂದರಲ್ಲಿ ಕಸ ಎಸೆಯುವವರ ಮೇಲೆ ಬಿಬಿಎಂಪಿ ನಿಗಾ ಇಡಲಿದೆ. ಇಡೀ ನಗರ ಮಾರ್ಷಲ್ ಗಳ ಕಣ್ಗಾವಲಿನಲ್ಲಿ ಇರಲಿದ್ದು, ಕಸ ಎಸೆಯುವವರನ್ನು ಪತ್ತೆ ಮಾಡಿ ಸ್ಥಳದಲ್ಲಿ ದಂಡ ವಿಧಿಸಲಾಗುವುದು. ಇದಕ್ಕಾಗಿ ಎಲ್ಲಾ ಕಡೆಗಳಲ್ಲಿ ಸಿಸಿಟಿವಿ ಕ್ಯಾಮರ ಅಳವಡಿಸಲಾಗುವುದು ಎಂದು ಹೇಳಿದರು. 

       ಗಣಪತಿ ಹಬ್ಬ ಬರುತ್ತಿದ್ದು, ಈ ಬಾರಿಯೂ ಸಹ ಪಿಓಪಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಬೇಡ. ಇದರಿಂದ ಜಲಮೂಲಗಳು ಹಾಳಾಗಲಿದ್ದು, ಪರಿಸರ ಮಾಲೀನ್ಯಕ್ಕೆ ಕಾರಣವಾಗುತ್ತವೆ. ಹಾಗಾಗಿ ಪಿಓಪಿ ಗಣಪತಿ ಬಿಟ್ಟು ಮಣ್ಣಿನ ಗಣಪತಿ ಪ್ರತಿಷ್ಠಾಪಿಸಿ. ಬೆಂಗಳೂರು ನಗರವನ್ನು ಸ್ವಚ್ಛ ಸುಂದರಗೊಳಿಸಲು ಎಲ್ಲಾ ನಾಗರಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.  

      ಭೈರಸಂದ್ರ ವಾರ್ಡ್ ನ ಬಿಬಿಎಂಪಿ ಸದಸ್ಯ ಎನ್. ನಾಗರಾಜು ಮಾತನಾಡಿ, ಜಯನಗರ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತಮಾಡಲು ಜಾಗೃತಿ ಅಭಿಯಾನ ಆರಂಭಿಸಿದ್ದೇವೆ. ಒಂದು ತಿಂಗಳು ವಾರ್ಡ್ ನಲ್ಲಿ ಬೃಹತ್ ಜನಜಾಗೃತಿ ನಡೆಸುತ್ತೇವೆ. ಪ್ರತಿಯೊಂದು ಅಂಗಡಿಗಳಿಗೆ ತೆರಳಿ ಪರಿಶೀಲನೆ ಮಾಡುತ್ತೇವೆ. ಬಳಿಕ ಪ್ಲಾಸ್ಟಿಕ್ ಬಳಕೆ ಮಾಡಿದರೆ ಐದುಪಟ್ಟು ದಂಡ ವಿಧಿಸುವ ಕಾನೂನನ್ನು ಅಧಿಕೃತವಾಗಿ ಜಾರಿಗೆ ತರುತ್ತೇವೆ ಎಂದರು. 

      ಸೆಪ್ಟೆಂಬರ್ 1 ರಿಂದ ಪ್ರತಿಯೊಂದು ಮನೆಗಳಲ್ಲೂ ಕಸ ವಿಂಗಡಿಸಿ ನೀಡಬೇಕು. ಇಲ್ಲದಿದ್ದರೆ ದಂಡು ವಿಧಿಸುವ ಪದ್ಧತಿ ಜಾರಿಗೆ ಬರಲಿದೆ.  ಎಲ್ಲೆಂದರಲ್ಲಿ ಮನಸೋ ಇಚ್ಚೆ ಕಸ ಎಸೆಯುವವರನ್ನು ಪತ್ತೆ ಮಾಡಿ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ. 

       ಹಸಿಕಸ, ಒಣ ಕಸ ವಿಂಗಡಣೆ ಮೇಲೆ ಕಣ್ಣಿಡಲು ವಾರ್ಡ್ ನಲ್ಲಿ 25ಕ್ಕೂ ಹೆಚ್ಚು ತಂಡಗಳನ್ನು ರಚಿಸಿದ್ದು, ಪ್ರತಿಯೊಂದು ತಂಡಲ್ಲಿ ಆರು ಜನ ಇರುತ್ತಾರೆ. ಜತೆಗೆ ಜತೆಗೆ ಬಾಂಧವ ಸಂಘಟನೆ ಕೂಡ ಜಾಗೃತಿ ಅಭಿಯಾನದಲ್ಲಿ ಭಾಗಿಯಾಗಲಿದೆ. ಬಾಂಧವ ತಂಡ ಕಸ ಹಾಕುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಿದ್ದು, ಪ್ಲಾಸ್ಟಿಕ್ ಬದಲು ಬಟ್ಟೆ ಬ್ಯಾಗ್ ವಿತರಿಸಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link