ಜಗಳೂರು:
ತಾಲೂಕಿನಲ್ಲಿ ಜನಜಾನುವಾರುಗಳಿಗೆ ಸಮರ್ಪಕವಾಗಿ ಮೇವು ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಸ್.ವಿ.ರಾಮಚಂದ್ರ ಅಧಿಕಾರಿಗಳಿಗೆ ತಾಕೀತು ಮಾಡಿದರು.ಪಟ್ಟಣದ
ತಾಲೂಕು ಕಛೇರಿ ಸಭಾಂಗಣದಲ್ಲಿ ಶನಿವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ಇದುವರೆಗೂ ತಾಲೂಕಿನ ಕೆಲ ಗ್ರಾಮಗಳಲ್ಲಿ ಮಳೆಯಿಲ್ಲದೆ ರೈತರು ಆತಂಕದಲ್ಲಿದ್ದಾರೆ .ಇಂತಹ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವು ನೀರಿನ ಪೂರೈಕೆ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಈಗಾಗಲೆ ಕೊಣಚಗಲ್, ಗುರುಸಿದ್ದಾಪುರ,ಗ್ರಾಮದಲ್ಲಿ ತೆರೆದಿರುವ ಗೊಶಾಲೆಗಳಲ್ಲಿ ಯಾವುದೆ ಅಡಚಣೆ ಉಂಟಾಗದಂತೆ ನಿರ್ವಹಣೆಮಾಡಬೇಕು ಎಂದು ಹೇಳಿದರು.
ತಾಲೂಕಿನಲ್ಲಿ ಒಟ್ಟು ಎಷ್ಟು ಹೆಕ್ಟರ್ ಪ್ರದೇಶದಲ್ಲಿ ಭಿತ್ತನೆ ಕಾರ್ಯನಡೆದಿದೆ ಎಂಬುದನ್ನು ಕೃಷಿಇಲಾಖೆಯವರು ಶೇಕಡವಾರು ಮಾಹಿತಿ ಸಂಗ್ರಹಿಸಬೇಕು. ರೈತರಿಗೆ ಬಿತ್ತನೆ ಬೀಜಗಳನ್ನು ಪಾರದರ್ಶಕವಾಗಿ ಸಮಸ್ಯೆಯಾಗದಂತೆ ವಿತರಿಸಬೇಕು. ಭದ್ರಾನೀರಾವರಿ ಯೋಜನೆ ಹಾಗೂ 53 ಕೆರೆ ನೀರು ತುಂಬಿಸುವ ಯೋಜನೆಗೆ ಸದಾ ಸರ್ಕಾರದ ಮುಂದೆ ಒತ್ತಡ ಏರುತ್ತಿದ್ದು, ಜಗಳೂರು ತಾಲೂಕಿನ ಕನಸಿನ ಕೂಸಾದ ನೀರಾವರಿ ಯೋಜನೆ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈಗಾಗಲೆ ತಾಲೂಕಿನಾದ್ಯಂತ ಕೈಗೊಂಡಿರುವ ಕಾಮಗಾರಿಗಳನ್ನು ಪ್ರಾರಂಭಿಸಲು ಅಧಿಕಾರಿಗಳು ಮುಂದಾಗಬೇಕು. ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಮಾಡುವ ಮೂಲಕ ಕೂಲಿಕಾರ್ಮಿಕರಿಗೆ ಅನ್ಯಾಯವಾಗದಂತೆ ಕೆಲಸ ನೀಡಲಾಗುವುದು, ಬರಗಾಲದ ಸಂಪೂರ್ಣ ನಿರ್ವಣೆಮಾಡುವ ಮೂಲಕ ತಾಲೂಕಿನ ಸಮಗ್ರ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ,ಪ್ರಭಾರಿ ತಾ.ಪಂ. ಇಓ ವೀರಭದ್ರಸ್ವಾಮಿ, ಜಿ.ಪಂ.ಸಹಾಯಕ ಕಾರ್ಯಪಾಲಕ ಅಭಿಯಂತರ ಬಾಲಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಡಿ.ವಿ.ನಾಗಪ್ಪ ಜಿ.ಪಂ ಸದಸ್ಯ ಎಸ್.ಕೆ.ಮಂಜುನಾಥ್ ತಾ.ಪಂ ಸದಸ್ಯರಾದ ತಿಮ್ಮೇಶ್ ಮರೇನಹಳ್ಳಿ ಬಸವರಾಜ್ ಗಡಿಮಾಕುಂಟೆ ಸಿದ್ದೇಶ್ ಮಾಜಿ.ಜಿ.ಪಂ ಸದಸ್ಯ ಸೊಕ್ಕೆ ನಾಗರಾಜ್ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
