ಬೆಂಗಳೂರು
ಸ್ವಾತಂತ್ರ್ಯ ದಿನಾಚರಣೆ, ಬಕ್ರೀದ್ ಹಬ್ಬದ ಸಂದರ್ಭಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ, ಮುಂಜಾಗ್ರತಾ ಕ್ರಮವಾಗಿ ಅಪರಾಧ ಕೃತ್ಯಗಳು, ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಸುಮಾರು 379 ಮಂದಿ ರೌಡಿಗಳ ಮನೆ ಮೇಲೆ ಉತ್ತರ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.
ಉತ್ತರ ವಿಭಾಗದ 18 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿಯಿಂದ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ರೌಡಿಗಳ ಮನೆಮೇಲೆ ದಾಳಿ ನಡೆಸಿ, 379 ಮಂದಿ ರೌಡಿಗಳನ್ನು ಕರೆತಂದು ಎಚ್ಚರಿಕೆ ನೀಡಲಾಗಿದೆ .ರೌಡಿಗಳು ಮಾಡುತ್ತಿರುವ ಉದ್ಯೋಗ, ಬಳಸುತ್ತಿರುವ ಮೊಬೈಲ್, ಸಂಬಂಧಿಕರ ವಿವರ, ಮನೆ ವಿಳಾಸ, ಅವರು ನಡೆಸಿರುವ ಅಪರಾಧ ಕೃತ್ಯಗಳು, ರೌಡಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ವಿಚಾರಣೆ ನಡೆಸಿ, ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಉತ್ತರ ವಿಭಾಗದಲ್ಲಿ ಈಗಾಗಲೇ 142 ಮಂದಿ ರೌಡಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೆರೇಡ್ ನಡೆಸಿದ ರೌಡಿಗಳಿಗೆ ಮುಂದೆ ಯಾವುದೇ ರೀತಿಯ ರೌಡಿ ಚಟುವಟಿಕೆಗಳನ್ನು ನಡೆಸುವುದಾಗಲಿ, ಕಾನೂನುಬಾಹಿರ ಕೃತ್ಯಗಳಲ್ಲಾಗಲಿ ಭಾಗಿಯಾಗದಂತೆ, ಎಚ್ಚರಿಕೆ ನೀಡಲಾಗಿದೆ ಎಂದರು.
ಉತ್ತರ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ 3 ತಿಂಗಳುಗಳಲ್ಲಿ 93 ಪ್ರಕರಣಗಳು ನಡೆದಿದ್ದು, ಅದರಲ್ಲಿ 50 ರೌಡಿಗಳು ಪಾಲ್ಗೊಂಡಿದ್ದಾರೆ. ಅವರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಉತ್ತರ ವಿಭಾಗದ ವ್ಯಾಪ್ತಿಯಲ್ಲಿ 205 ಮಂದಿಯನ್ನು ರೌಡಿಪಟ್ಟಿಗೆ ಸೇರಿಸಲಾಗಿದೆ ಎಂದರು.
ಸ್ವಾತಂತ್ರ್ಯ ದಿನಾಚರಣೆ, ಬಕ್ರೀದ್ ಹಬ್ಬದ ಸಂದರ್ಭಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ, ಮುಂಜಾಗ್ರತಾ ಕ್ರಮವಾಗಿ ರೌಡಿಗಳನ್ನು ಕರೆತಂದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ತಿಳಿಸಿದರು.ಪೆರೇಡ್ ನಡೆಸಿದ ರೌಡಿಗಳಲ್ಲಿ ಕೆಲವರು ರೌಡಿ ಚಟುವಟಿಕೆಗಳನ್ನು ಬಿಟ್ಟು ಉತ್ತಮ ಜೀವನ ನಡೆಸುತ್ತಿರುವುದು ಕಂಡುಬಂದಿದ್ದು, ಅದನ್ನು ಪರಾಮರ್ಶೆ ನಡೆಸಿ, ಅವರನ್ನು ರೌಡಿಪಟ್ಟಿಯಿಂದ ಕೈಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








