ತೆರಿಗೆ ಕ್ಷೇತ್ರದ ತಜ್ಞರಿಗೂ ಅರ್ಥವಾಗದ ಜಿ.ಎಸ್.ಟಿ. ಗೊಂದಲಗಳು
ತುಮಕೂರು:

ಸರಳೀಕೃತಗೊಳ್ಳದ ತೆರಿಗೆ ಕಾನೂನುಗಳು, ಜಿ.ಎಸ್.ಟಿ. ನೀತಿಗಳು ದೇಶದ ಆರ್ಥಿಕ ಪ್ರಗತಿಗೆ ಅಡ್ಡಿಯುಂಟು ಮಾಡುತ್ತಿವೆ ಎಂಬುದನ್ನು ಆರ್ಥಿಕ ತಜ್ಞರೇ ಪ್ರತಿಪಾದಿಸುತ್ತಿದ್ದಾರೆ. ಜಿ.ಎಸ್.ಟಿ. ಕುರಿತಾಗಿ ಲೆಕ್ಕ ಪರಿಶೋಧಕರುಗಳಿಗೆ ಇನ್ನೂ ಸರಿಯಾದ ವ್ಯಾಖ್ಯಾನ ಅರ್ಥವಾದಂತೆ ಕಾಣುತ್ತಿಲ್ಲ. ಈ ವಿಷಯದಲ್ಲಿ ಪಳಗಿರುವವರು ಕೆಲವೇ ಮಂದಿ.
ಸರಕು ಮತ್ತು ಸೇವಾ ತೆರಿಗೆ ಕಾಯಿದೆ ಜಾರಿಯಾಗಿ 2 ವರ್ಷಗಳು ಮುಗಿದು ಹೋದರೂ ಈ ಕಾಯ್ದೆಯಲ್ಲಿರುವ ನ್ಯೂನತೆಗಳನ್ನೇ ಸರಿಪಡಿಸಲು ಸಾಧ್ಯವಾಗಿಲ್ಲ. ಕಾಯ್ದೆಯ ನಂತರ ಜಾರಿಯಾಗುತ್ತಿರುವ ನಿಯಮಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತೆರಿಗೆ ಸಮಾಲೋಚಕರು, ತೆರಿಗೆ ಕ್ಷೇತ್ರದ ತಜ್ಞರು ಪ್ರತಿದಿನ ಹೊಸ ಹೊಸ ನಿಯಮಾವಳಿಗಳು, ಸುತ್ತೋಲೆಗಳನ್ನು ನೋಡುವುದರಲ್ಲಿಯೇ ತಮ್ಮ ಸಾಕಷ್ಟು ಸಮಯ ವ್ಯಯಿಸಬೇಕಾಗಿದೆ.
ಇತರೆ ಕೆಲಸ ಕಾರ್ಯಗಳು ಕುಂಠಿತವಾಗುತ್ತಿವೆ. ಮತ್ತೊಂದು ವಿಚಿತ್ರವೆಂದರೆ ಕೆಲವು ಗೊಂದಲಕಾರಿ ಅಂಶಗಳನ್ನು ತೆರಿಗೆ ಕ್ಷೇತ್ರದಲ್ಲಿರುವವರು ತಮಗಿಷ್ಟ ಬಂದಂತೆ ವ್ಯಾಖ್ಯಾನ ನೀಡುತ್ತಾ ಹೋಗುತ್ತಿರುವುದು. ಇದು ತೆರಿಗೆದಾರರು ಮತ್ತು ತೆರಿಗೆ ಸಮಾಲೋಚಕರು ಇಬ್ಬರಲ್ಲೂ ಗೊಂದಲ ಮೂಡಿಸಿದೆ. ಸಾಮಾನ್ಯ ಜನರಿಗೆ ಇವೆಲ್ಲ ಅರ್ಥವಾಗುವುದೇ ಇಲ್ಲ. ಸಮಸ್ಯೆಗಳು ಬಂದಾಗ ಅಥವಾ ಕೋರ್ಟ್ ಕಚೇರಿಗಳಿಗೆ ಹೋಗಬೇಕಾದ ಸಂದರ್ಭ ಬಂದಾಗ ಹೇಗೆ ವಕೀಲರ ಬಳಿ ಕಕ್ಷಿದಾರರು ದಾಖಲೆ ಪತ್ರಗಳೊಂದಿಗೆ ತೆರಳಿ ತಮ್ಮ ಅಹವಾಲು ಮುಂದಿಡುತ್ತಾರೋ ಅದೇ ರೀತಿ ಜಿ.ಎಸ್.ಟಿ. ವಿಷಯದಲ್ಲೂ ಆಗಿದೆ.
ಕಕ್ಷಿದಾರರು ತೆರಿಗೆ ತಜ್ಞರ ಬಳಿ ಹೋಗುತ್ತಿದ್ದಾರೆ. ಅವರ ಸಮಸ್ಯೆ ಪರಿಹರಿಸಲು ತಜ್ಞರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಯಾವುದೋ ಒಂದೆರಡು ಸಮಸ್ಯೆಗಳು ಸಿಲುಕಿ ಬಿಟ್ಟವೆಂದರೆ ತೆರಿಗೆ ಸಮಾಲೋಚಕರಿಗೂ ಅದು ತಲೆನೋವಿನ ಸಂಗತಿ.
31.3.2018ಕ್ಕೆ ಕೊನೆಗೊಂಡ ವಾರ್ಷಿಕ ವರದಿಯ ಜಿ.ಎಸ್.ಟಿ.ಆರ್. 9.9 (ಎ), 9 (ಸಿ) ಇತ್ಯಾದಿ ನಮೂನೆಗಳನ್ನು 31.12.2018ರ ಒಳಗಾಗಿ ಸಲ್ಲಿಸಬೇಕಾಗಿತ್ತು. ಆದರೆ ಜಿ.ಎಸ್.ಟಿ.ಎನ್. ತಂತ್ರಾಂಶದಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಇದನ್ನು 31.8.2019ರವರೆಗೂ ಮುಂದೂಡುತ್ತಾ ಬರಲಾಯಿತು. ಇದರಲ್ಲಿ ತಪ್ಪು ಯಾರದ್ದು ಎಂದು ಹೇಳುವುದು ಹೇಗೆ? ಭಾರತದ ಹಲವು ಕಡೆ, ಕರ್ನಾಟಕದ ಕೆಲವು ಪ್ರದೇಶಗಳು ಈಗ ಪ್ರವಾಹದಿಂದ ತತ್ತರಿಸಿ ಹೋಗಿವೆ.
ಹೀಗಿರುವಾಗ 31.8.2019ರ ಒಳಗಾಗಿ ಜಿ.ಎಸ್.ಟಿ. ನಮೂನೆಗಳನ್ನು ಸಲ್ಲಿಸದೆ ಹೋದರೆ ತೆರಿಗೆದಾರರನ್ನು ಜೈಲಿಗಟ್ಟುವ ಬೆದರಿಕೆ ಹಾಕಲಾಗುತ್ತದೆ. ಇಂತಹ ಸಮಯದಲ್ಲಿ ಕಷ್ಟದಲ್ಲಿರುವ ತೆರಿಗೆದಾರರನ್ನು ರಕ್ಷಿಸುವುದು ಹೇಗೆ?
ತುಮಕೂರು ಜಿಲ್ಲೆಯ ಉದಾಹರಣೆಯನ್ನೇ ತೆಗೆದುಕೊಂಡರೆ 20 ಸಾವಿರ ತೆರಿಗೆ ನಿರ್ಧರಣ ವ್ಯಕ್ತಿಗಳ ಪೈಕಿ ನಾಲ್ಕು ಸಾವಿರ ತೆರಿಗೆದಾರರು ಮಾತ್ರವೇ ಜಿ.ಎಸ್.ಟಿ.ಆರ್.-9 ಹಾಗೂ ಜಿ.ಎಸ್.ಟಿ.ಆರ್. 9ಎ, ಜಿ.ಎಸ್.ಟಿ.ಆರ್. 9 ಸಿ ಫೈಲ್ ಮಾಡಿದ್ದಾರೆ. (20.8.2019 ರವರೆಗೆ).
ಜಿ.ಎಸ್.ಟಿ. ಜಾರಿಗೆ ಬಂದ ನಂತರ ಜಿಲ್ಲೆಯಲ್ಲಿ ಆದಾಯ ತೆರಿಗೆ ವಂಚನೆ ಕುರಿತು 70 ಪ್ರಕರಣಗಳು ದಾಖಲಾಗಿವೆ. ಇನ್ನೊಂದೆಡೆ ತೆರಿಗೆ ಪದ್ಧತಿ ಅನುಷ್ಠಾನದಲ್ಲಿ ಸಾಕಷ್ಟು ತಾಂತ್ರಿಕ ತೊಂದರೆಗಳು ಇದ್ದು, ಅದನ್ನು ನಿವಾರಣೆ ಮಾಡಲು ಸರ್ಕಾರ ಆಸಕ್ತಿ ತೋರಬೇಕು ಎನ್ನುತ್ತಾರೆ ತೆರಿಗೆ ಕ್ಷೇತ್ರದ ತಜ್ಞರು.
ಪ್ರತಿದಿನ ಬದಲಾಗುತ್ತಿರುವ ಜಿ.ಎಸ್.ಟಿ. ಕಾಯಿದೆ ಕಾನೂನುಗಳನ್ನು ಅರ್ಥ ಮಾಡಿಕೊಂಡು ತೆರಿಗೆದಾರರಿಗೆ ತಿಳಿಸಿ ಹೇಳುವುದು ನಮಗೆ ಒಂದು ದೊಡ್ಡ ಸವಾಲಿನ ಕೆಲಸವಾಗಿದೆ. ತೆರಿಗೆದಾರರು, ತೆರಿಗೆ ಸಮಾಲೋಚಕರು ಮತ್ತು ಆದಾಯ ತೆರಿಗೆ ಅಧಿಕಾರಿಗಳು ಹೀಗೆ ಮೂರು ಅಂತಗಳಲ್ಲಿ ವಿಧವಿಧವಾದ ವ್ಯಾಖ್ಯಾನಗಳು ಹೊರಬರುತ್ತವೆ. ಗೊಂದಲಗಳನ್ನು ನಿವಾರಿಸಲು ಒಂದು ಸ್ಪಷ್ಟ ಪ್ರಾಧಿಕಾರ ಅಥವಾ ಅಧಿಕಾರಿಗಳು ಇರಬೇಕು. ಇಲ್ಲವಾದರೆ ಇಂತಹ ಗೊಂದಲಗಳು ಮುಂದುವರಿಯುತ್ತಲೇ ಇರುತ್ತವೆ ಎನ್ನುತ್ತಾರೆ ಹಿರಿಯ ತೆರಿಗೆ ಸಮಾಲೋಚಕರಾದ ಎಸ್.ಪ್ರಕಾಶ್ ಅವರು.
ಜಿ.ಎಸ್.ಟಿ.ಯಲ್ಲಿನ ಗೊಂದಲಗಳು ಇನ್ನೂ ಬಗೆಹರಿದಿಲ್ಲ. ಇದಕ್ಕಾಗಿಯೇ ಒಂದು ಹೆಲ್ಪ್ಲೈನ್ ತೆರೆಯಲಾಗಿದೆ.. ಫೈಲ್ ಮಾಡುವಾಗ ಸರ್ವರ್ ಸಮಸ್ಯೆ ಮತ್ತಿತರ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಒಂದು ವೇಳೆ ತಪ್ಪು ಮಾಹಿತಿಯ ರಿಟರ್ನ್ ಫೈಲ್ ಮಾಡಿದಾಗ ಆ ಬಗ್ಗೆ ರಿವಿಜನ್ ಅಪ್ಸನ್ ಬಗ್ಗೆ ವಿವರಿಸಿಲ್ಲ. ಇಂತಹ ಅನೇಕ ಗೊಂದಲಗಳು ಇನ್ನೂ ಮುಂದುವರಿದಿದ್ದು, ಇದನ್ನು ಸರಿಪಡಿಸಬೇಕಿದೆ ಎನ್ನುತ್ತಾರೆ ಲೆಕ್ಕ ಪರಿಶೋಧಕ ಜಯರಾಮ್ ಶೆಟ್ಟಿ.
ನೀತಿ ಸುತ್ತೋಲೆಗಳು ಪದೇ ಪದೇ ಬದಲಾಗುತ್ತಿರುತ್ತವೆ. ಇವೆಲ್ಲವನ್ನೂ ಹೇಗೆ ತಿಳಿದುಕೊಳ್ಳಲು ಸಾಧ್ಯ? ಜಿ.ಎಸ್.ಟಿ. ಪೋರ್ಟಲ್ನಲ್ಲಿ ತಾಂತ್ರಿಕ ಸಮಸ್ಯೆಗಳಿವೆ. ಜಿ.ಎಸ್.ಟಿ.ಆರ್. ಫೈಲ್ ಮಾಡುವ ನಮೂನೆಗಳು ಗೊಂದಲಕಾರಿಯಾಗಿವೆ. ತೆರಿಗೆ ಅಧಿಕಾರಿಗಳಲ್ಲಿಯೇ ಸಮರ್ಪಕ ಮಾಹಿತಿ ಇರುವುದಿಲ್ಲ. ಜನಸಾಮಾನ್ಯರಿಗಂತೂ ಈ ಬಗ್ಗೆ ಅರಿವಿಲ್ಲ. ಸರಳೀಕರಣಗೊಳಿಸಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸರ್ಕಾರ ಕೆಲವು ಬದಲಾವಣೆಗಳನ್ನು ತರಬೇಕು. ಮಾಹಿತಿ ಕೊರತೆ ನಿವಾರಿಸಬೇಕು ಎನ್ನುತ್ತಾರೆ ಮತ್ತೊಬ್ಬ ಲೆಕ್ಕ ಪರಿಶೋಧಕ ಗೌತಮ್.
2017ರ ಜುಲೈ 1 ರಂದು ಜಾರಿಗೆ ಬಂದ ಜಿ.ಎಸ್.ಟಿ. ಇನ್ನೂ ನರಳುತ್ತಲೇ ಸಾಗಿದೆ. ಒಂದು ಸಂಸ್ಥೆಯಲ್ಲಿ ವ್ಯವಹಾರವಿರಲಿ ಬಿಡಲಿ ಜಿ.ಎಸ್.ಟಿ. ರಿಟರ್ನ್ ಫೈಲ್ ಮಾಡುವುದು ಕಡ್ಡಾಯ. ಜಿ.ಎಸ್.ಟಿ. ಪಡೆದವರು ತಮ್ಮ ಸಂಸ್ಥೆಯ ಹೆಸರಿನ ಬೋರ್ಡ್ನಲ್ಲಿ ಅದನ್ನು ನಮೂದಿಸಬೇಕು. ನಮೂದಿಸದಿದ್ದರೆ 50 ಸಾವಿರ ರೂ.ಗಳವರೆಗೆ ದಂಡ ವಿಧಿಸಲು ಅವಕಾಶವಿದೆ. ಇಲ್ಲಿಯೂ ತಾರತಮ್ಯಗಳು ಎದುರಾಗುತ್ತವೆ. ತಮಗೆ ಇಷ್ಟ ಬಂದವರಿಗೆ ನೋಟೀಸ್ ಕಳುಹಿಸುವುದು ಇತ್ಯಾದಿ ನ್ಯೂನತೆಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
