ತುಮಕೂರು

ತುಮಕೂರು-ಶಿರಾ ಹೆದ್ದಾರಿಯ ಬದಿಯಲ್ಲಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ನೀರಿನ ಅಗತ್ಯತೆ ಇದ್ದು, ಅದಕ್ಕಾಗಿ ತುಮಕೂರು ನಗರದ ಭೀಮಸಂದ್ರ ಕೆರೆಯಿಂದ ಶುದ್ಧೀಕರಿಸಿದ ಕೊಳಚೆ ನೀರನ್ನು ಪೂರೈಸಲು 100.15 ಕೋಟಿ ರೂ.ಗಳ ಯೋಜನೆಯೊಂದು ಸಿದ್ಧವಾಗಿರುವುದು ಇದೀಗ ಬೆಳಕಿಗೆ ಬಂದಿದೆ.
ಈ ಯೋಜನೆ ಜಾರಿಯಾಗಬೇಕಾದರೆ ಅದಕ್ಕೆ ತುಮಕೂರು ಮಹಾನಗರ ಪಾಲಿಕೆಯ ಒಪ್ಪಿಗೆ ಅಗತ್ಯವಾಗಿದ್ದು, ಆ ಹಿನ್ನೆಲೆಯಲ್ಲಿ ಇದೇ ಸೆ.11 ರಂದು ಮೇಯರ್ ಲಲಿತಾ ರವೀಶ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪಾಲಿಕೆಯ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಈ ವಿಷಯ (ಸಂಖ್ಯೆ: 23)ವನ್ನು ಪಾಲಿಕೆಯ ಆರೋಗ್ಯ ಶಾಖೆಯ ಮೂಲಕ ಮಂಡಿಸಲಾಗಿದೆ. ಸಭೆಯಲ್ಲಿ ಈ ಮಹತ್ವದ ವಿಷಯ ಚರ್ಚೆಗೆ ಬರಲಿದೆ.ವಸಂತನರಸಾಪುರ ಕೈಗಾರಿಕಾ ಪ್ರದೇಶವು 1 ರಿಂದ 6 ನೇ ಹಂತದವರೆಗೂ ಒಟ್ಟು 13,000 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಕೈಗಾರಿಕಾ ಪ್ರದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ.
ಈಗಾಗಲೇ ಇಲ್ಲಿಗೆ ತುಮಕೂರು ತಾಲ್ಲೂಕು ಕುಪ್ಪೂರಿನಲ್ಲಿರುವ ಕೆರೆಯಿಂದ 5 ಎಂ.ಎಲ್.ಡಿ. ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ ಪ್ರಸ್ತುತ ಕೈಗಾರಿಕೆಗಳಿಗೆ ಹಾಗೂ ಮುಂಬರುವ ಕೈಗಾರಿಕೆಗಳಿಗೆ ಸುಮಾರು 35 ಎಂ.ಎಲ್.ಡಿ.ಯಷ್ಟು ನೀರಿನ ಅವಶ್ಯಕತೆ ಇದೆ ಎಂದು ಸಭೆಗೆ ಮಂಡಿಸಿರುವ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
ತುಮಕೂರು ನಗರದ ಭೀಮಸಂದ್ರದಲ್ಲಿರುವ ಕೆರೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಯ ವತಿಯಿಂದ ನೀರನ್ನು ಶುದ್ಧಿಕರಿಸಲಾಗುತ್ತಿದೆ. ಇಲ್ಲಿನ ಸೆಕೆಂಡರಿ ಟ್ರೀಟೆಡ್ (ಶುದ್ದೀಕರಿಸಿರುವ) ನೀರನ್ನು ಮತ್ತೊಮ್ಮೆ ಟ್ರೈರರಿ ಟ್ರೀಟ್ಮೆಂಟ್ (ಕುಡಿಯುವ ನೀರಿನಷ್ಟೇ ಶುದ್ಧೀಕರಣ) ಮಾಡಿ ವಸಂತನರಸಾಪುರದ ಕೈಗಾರಿಕೆಗಳಿಗೆ ಬಳಸಲು ಉದ್ದೇಶಿಸಲಾಗಿದೆ. ಈ ರೀತಿ 30 ಎಂ.ಎಲ್.ಡಿ. ನೀರನ್ನು ಬಳಸಿಕೊಳ್ಳಲು ಬೆಂಗಳೂರಿನ ಇ.ಐ. ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯ ಮೂಲಕ 100.15 ಕೋಟಿ ರೂ.ಗಳ ವಿಸ್ತೃತವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ಯೋಜನಾ ವೆಚ್ಚಕ್ಕೆ ಸರ್ಕಾರದಿಂದ ಅನುಮೋದನೆಯನ್ನೂ ಪಡೆದುಕೊಳ್ಳಲಾಗಿದೆ ಎಂದು ಟಿಪ್ಪಣಿಯಲ್ಲಿ ವಿವರಣೆ ನೀಡಲಾಗಿದೆ.
ಈ ರೀತಿ ಶುದ್ಧೀಕರಿಸಿದ 30 ಎಂ.ಎಲ್.ಡಿ. ಕೊಳಚೆ ನೀರನ್ನು ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ಉಪಯೋಗಿಸಲು ಮತ್ತು ಇದಕ್ಕೆ ಪೂರಕವಾಗಿ ಭೀಮಸಂದ್ರ ಕೆರೆಯ ಅಂಗಳದಲ್ಲಿ ಜಾಕ್ವೆಲ್ ಮತ್ತು ಪಂಪ್ ಹೌಸ್ ನಿರ್ಮಾಣ ಹಾಗೂ ಇತರೆ ಕಾಮಗಾರಿಗಳನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿ (ಕೆ.ಐ.ಎ.ಡಿ.ಬಿ.) ವತಿಯಿಂದ ಕೈಗೊಳ್ಳಲು ಮಂಡಲಿಯು ಇದೀಗ ಮಹಾನಗರ ಪಾಲಿಕೆಯ ಅನುಮತಿಯನ್ನು ಕೋರಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಆರೋಗ್ಯ ಶಾಖೆಯಿಂದ ವಿಷಯ ಮತ್ತು ಟಿಪ್ಪಣಿಯನ್ನು ಮಂಡಿಸಲಾಗಿದೆ.
ವಾರ್ಡ್ ಸಮಿತಿ ರಚನೆ
ಪಾಲಿಕೆಯ ಕಂದಾಯ ಶಾಖೆಯು ವಾರ್ಡ್ ಸಮಿತಿ ರಚನೆ ಬಗ್ಗೆ ವಿಷಯ (ಸಂಖ್ಯೆ-14) ಮಂಡಿಸಿದ್ದು, ಇದು ಸಹ ಕುತೂಹಲ ಮೂಡಿಸಿದೆ.
ಪಾಲಿಕೆಯ 35 ವಾರ್ಡ್ಗಳಲ್ಲೂ ನಿಯಮಾನುಸಾರ ವಾರ್ಡ್ ಸಮಿತಿ ರಚಿಸಿ ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಪತ್ರ (ಸಂಖ್ಯೆ: ನಅಇ-18/ಎಂ.ಎನ್.ಇ./2019, ದಿನಾಂಕ 19-06-2019) ಬರೆದು ಸೂಚಿಸಿದ್ದಾರೆಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಾರ್ಡ್ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಿ ವಾರ್ಡ್ ಸಮಿತಿ ಪಟ್ಟಿಯನ್ನು ಅನುಮೋದಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿದೆಯೆಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.
ಚಿಕ್ಕಪೇಟೆ ಮುಖ್ಯರಸ್ತೆಯ ಅಗಲೀಕರಣಕ್ಕೆ ಕೋರಿಕೆ
ತುಮಕೂರು ನಗರದ ಹಳೆಯ ಬಡಾವಣೆಗಳಲ್ಲೊಂದಾದ ಚಿಕ್ಕಪೇಟೆಯ ಮುಖ್ಯರಸ್ತೆಯನ್ನು ಅಗಲೀಕರಣಗೊಳಿಸಬೇಕೆಂಬ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಈ ಭಾಗದ ಅಂದರೆ 4 ನೇ ವಾರ್ಡ್ನ ಸದಸ್ಯೆ ಎಚ್.ಎಂ.ದೀಪಶ್ರೀ ಮಹೇಶ್ಬಾಬು (ಬಿಜೆಪಿ) ಮತ್ತು 5 ನೇ ವಾರ್ಡ್ ಸದಸ್ಯ ಟಿ.ಎಂ.ಮಹೇಶ್ (ಕಾಂಗ್ರೆಸ್) ಅವರೇ ಸ್ವತಃ ಈ ಬಗ್ಗೆ ವಿಷಯ (ಸಂಖ್ಯೆ:27-1 ಮತ್ತು 28-2) ಮಂಡಿಸಿದ್ದಾರೆ. ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಚಿಕ್ಕಪೇಟೆ ಮಾರ್ಗವಾಗಿ ಆಯಿಲ್ಮಿಲ್ ರಸ್ತೆಯ ಆಟೋಸ್ಟಾೃಂಡ್ವರೆಗೆ ರಸ್ತೆಯನ್ನು ಅಗಲೀಕರಣ ಮಾಡಬೇಕೆಂಬ ಕೋರಿಕೆಯನ್ನು ಅವರು ಮುಂದಿಟ್ಟಿದ್ದಾರೆ.
ಈ ವಿಷಯವೂ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಾರಣ ಹಿಂದಿನ ಮಹಾನಗರ ಪಾಲಿಕೆಯ ಆರಂಭದ ದಿನಗಳಲ್ಲಿ ಇಂತಹುದೇ ಪ್ರಸ್ತಾಪ ಬಂದಿತ್ತು. ಆಗ ಚಿಕ್ಕಪೇಟೆ ಭಾಗದ ನಾಗರಿಕರಿಂದ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ಪಾಲಿಕೆಯ ಆಯುಕ್ತರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಾಗರಿಕರೊಂದಿಗೆ ಚರ್ಚಾಸಭೆಯೂ ನಡೆದಿತ್ತು. ಆಗ ನಾಗರಿಕರು ಅಗಲೀಕರಣಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು.
“ಇದು ಹಳೆಯ ಬಡಾವಣೆ. ಇಲ್ಲಿ ಅನೇಕ ವರ್ಷಗಳಿಂದ ಅಂಗಡಿಗಳನ್ನಿಟ್ಟು ಜೀವನೋಪಾಯ ಮಾಡುತ್ತಿದ್ದಾರೆ. ಹಳೆಯ ಕಾಲದ ಮನೆಗಳೂ ಇವೆ. ಚಿಕ್ಕಚಿಕ್ಕ ಅಳತೆಯ ಕಟ್ಟಡಗಳೂ ಇವೆ. ಒಂದು ವೇಳೆ ರಸ್ತೆ ಅಗಲೀಕರಣ ಮಾಡಿದರೆ ಇಂತಹ ಅನೇಕ ಜನರು ಬೀದಿಗೆ ಬರುವಂತಾಗುತ್ತದೆ. ಆದ್ದರಿಂದ ಅಗಲೀಕರಣ ಬೇಡ. ಇದಕ್ಕೆ ಬದಲಿಯಾಗಿ ಗಾರ್ಡನ್ ರಸ್ತೆ ಇದ್ದೇ ಇದೆ” ಎಂದು ಆಗ ಸ್ಥಳೀಯ ನಾಗರಿಕರು ತಮ್ಮ ವಾದವನ್ನು ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸದರಿ ವಿಷಯ ಅಷ್ಟಕ್ಕೇ ಸ್ಥಗಿತವಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಪ್ರಸ್ತಾಪಗೊಂಡಿರುವುದು ಸಹಜವಾಗೇ ಚರ್ಚೆಗೆಡೆಮಾಡಿದೆ.
ಕಸಾಯಿ ಖಾನೆ, ಮಾರುಕಟ್ಟೆ
ತುಮಕೂರು ನಗರದ 10 ನೇ ವಾರ್ಡ್ನಲ್ಲಿ ಸ್ಥಳಾವಕಾಶ ಇದ್ದು ಅಲ್ಲಿ ಒಂದು ಸುಸಜ್ಜಿತ ಕಸಾಯಿ ಖಾನೆ ಮತ್ತು ಮಾಂಸದ ಮಾರುಕಟ್ಟೆಯನ್ನು ತೆರೆಯಬೇಕೆಂಬ ಬೇಡಿಕೆಯೊಂದನ್ನು 8 ನೇ ವಾರ್ಡ್ ಸದಸ್ಯ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ (ಕಾಂಗ್ರೆಸ್) ಅವರು ಸಭೆಯ ಮುಂದೆ (ವಿಷಯ ಸಂಖ್ಯೆ: 31-2) ಮಂಡಿಸಿದ್ದಾರೆ. ಪೂರ್ಹೌಸ್ ಕಾಲೋನಿಯಲ್ಲಿ ಅಲ್ಪಸಂಖ್ಯಾತರು, ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಭಾಗದಲ್ಲಿ ವಿವಿಧೆಡೆಗಳಲ್ಲಿ ಮಾಂಸದ ಅಂಗಡಿಗಳಿವೆ. ಆದ್ದರಿಂದ ಈ ಭಾಗದ ರೈಲ್ವೆ ಟ್ರಾಕ್ ಪಕ್ಕ ದೊಡ್ಡ ಚರಂಡಿ ಹತ್ತಿರದಲ್ಲಿ ಒಂದು ಕಸಾಯಿ ಖಾನೆ ಮತ್ತು ಮಾಂಸದ ಮಾರುಕಟ್ಟೆ ನಿರ್ಮಿಸಬೇಕು ಎಂದು ಅವರು ಕೋರಿದ್ದಾರೆ.
ಇದು ಸೈಯದ್ ನಯಾಜ್ ಅವರ ಹಳೆಯ ಬೇಡಿಕೆಯಾಗಿದೆ. ಕಳೆದ ಬಾರಿ ಸಹ ಇದೇ ವಿಷಯವಾಗಿ ಅನೇಕ ಬಾರಿ ಆಗ್ರಹಿಸಿದ್ದರು. ನಗರಾದ್ಯಂತದ ಮಾಂಸದ ಅಂಗಡಿಗಳನ್ನು ಒಂದೆಡೆ ಇರುವಂತೆ ಮಾಡಬೇಕು. ಸುಸಜ್ಜಿತ ಕಸಾಯಿ ಖಾನೆಯೂ ಇರಬೇಕು. ಇದನ್ನು ಮಾಂಸಾಹಾರಿಗಳೇ ಹೆಚ್ಚಾಗಿರುವ ಈ ಭಾಗದಲ್ಲಿ ತೆರೆದರೆ, ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಅವರು ಮೊದಲಿನಿಂದಲೂ ವಾದಿಸುತ್ತ ಬಂದಿದ್ದಾರೆ. ಇದೀಗ ಮತ್ತೆ ಅವರು ವಿಷಯ ಮುಂದಿಟ್ಟು ಗಮನ ಸೆಳೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
