ವಕೀಲಿ ವೃತ್ತಿ ಅನ್ಯ ಕಾರ್ಯಕ್ಕೆ ಬಳಸದಿರಿ

ದಾವಣಗೆರೆ

   ವಕೀಲಿ ವೃತ್ತಿಯನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳಬಾರದು ಎಂದು ಹೈಕೋರ್ಟ್‍ನ ನ್ಯಾಯಮೂರ್ತಿ ಡಾ.ಎಚ್.ಬಿ.ಪ್ರಭಾಕರ ಶಾಸ್ತ್ರಿಯವರು ವಕೀಲರಿಗೆ ಮತ್ತು ಕಾನೂನು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನಗರದ ಆರ್ ಎಲ್ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪರಿಷತ್ತು ಮತ್ತು ಎನ್‍ಎಸ್‍ಎಸ್ ವಾರ್ಷಿಕ ಚಟುವಟಿಕೆ ಉದ್ಘಾಟಿಸಿ ್ಲವಚರು ಮಾತನಾಡಿದರು.

   ಕೆಲವರು ಕರಿ ಕೋಟು ಹಾಕಿರುತ್ತಾರೆ. ಆದರೆ, ವೃತ್ತಿ ಜೀವನದಲ್ಲಿ ಎರಡು ಕೇಸು ಸಹ ಹಾಕಲ್ಲ. ಬದಲಿಗೆ ವಕೀಲಿ ವೃತ್ತಿಯನ್ನು ಅನ್ಯ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ. ಒಮ್ಮುಖ ರಸ್ತೆಯಲ್ಲಿ ವಾಹನ ತೆಗೆದುಕೊಂಡು ಹೋಗುವಾಗ ಪೊಲೀಸರು ತಡೆದರೆ, ನಾನು ಯಾರಂತ ಗೊತ್ತಲ್ಲ, ವಕೀಲ ಎಂಬುದಾಗಿ ಹೇಳಿಕೊಂಡು, ಯಾವ ದಾಖಲೆಗಳನ್ನು ತೋರಿಸದೇ ದರ್ಪ ಮೆರೆಯುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

   ವಕೀಲರಂಗ ವಿಶಾಲವಾಗಿದ್ದು, ವಕೀಲರು ಸ್ಥಳೀಯವಾಗಿರುವ ತಾಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ಸೀಮಿತವಾಗಿ ಕೆಲಸ ಮಾಡಬೇಡಿ, ಕಾರ್ಪೋರೇಟ್ ವಲಯದ ಕೇಸು ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆಯಬೇಕು. ಕಾನೂನು ವಿದ್ಯಾರ್ಥಿಗಳು ಪುಸ್ತಕದಿಂದ ಕಲಿಯವುದು ಮಾತ್ರ ಕಲಿಕೆಯಲ್ಲ. ನೀವು ಕಲಿಯುವುದು ಮತ್ತು ಬೆಳೆಯುವುದು ಬಹಳಷ್ಟಿದೆ ಎಂದು ಹೇಳಿದರು.

   ಈಗ ಕಾಲೇಜು ವಿದ್ಯಾರ್ಥಿ ಸಂಘಗಳ ಕಾರ್ಯಕ್ರಮಗಳನ್ನು ಮೋಜುಮಸ್ತಿಯಿಂದ ಎಷ್ಟು ಅದ್ದೂರಿಯಾಗಿ ಮಾಡಲಾಗುತ್ತಿದೆ ಎಂಬುದು ಮುಖ್ಯವಾಗಿದೆ. ಇದು ಸರಿಯಾದ ಕ್ರಮವಲ್ಲ. ಅದರ ಬದಲು ಎಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬುದು ಮುಖ್ಯವಾಗಬೇಕು ಎಂದರು.

     ವಿದ್ಯಾರ್ಥಿ ಸಂಘ ಇರುವುದು ಪ್ರತಿಭಟನೆ ನಡೆಸಲು ಅಲ್ಲ, ಉತ್ತಮ ಚಟುವಟಿಕೆಯನ್ನು ಹಮ್ಮಿಕೊಳ್ಳಲು ಇದೆ ಎಂಬುದನ್ನು ಅರಿತು. ವ್ಯಾಸಂಗಕ್ಕೆ ಪೂರಕವಾಗಿ ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಮತ್ತು ಆಸಕ್ತಿಯನ್ನು ಉದ್ದೀಪನಗೊಳಿಸುವ ಕಾರ್ಯವನ್ನು ವಿದ್ಯಾರ್ಥಿ ಸಂಘ ಮಾಡಬೇಕೇ, ಹೊರತು ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಬರುತ್ತಿದ್ದಾರೆ ಎಂಬುದಾಗಿ ಹೆದರಿ ಕೊಳ್ಳುವಂತೆ ಪದಾಧಿಕಾರಿಗಳ ನಡುವಳಿಕೆ ಇರಬಾರದು ಎಂದರು.

     ವಿದ್ಯಾರ್ಥಿಗಳ ಬೇಕು-ಬೇಡಗಳನ್ನು ಕುಂದು-ಕೊರತೆಗಳನ್ನು ಪ್ರಾಂಶುಪಾಲರ, ಆಡಳಿತ ಮಂಡಳಿಯ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸಬೇಕು. ಹಾಗಂತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಲು ಹೋಗಬಾರದು. ಗಾಯನ, ರಂಗ ಚಟುವಟಿಕೆ, ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಬೇಕು. ಅಲ್ಲದೇ, ಸಮಾಜಕ್ಕೆ ಏನು ಅಗತ್ಯ ಎಂಬುದನ್ನು ಅರಿತು ಸೇವೆ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

     ವಿದ್ಯಾರ್ಥಿ ಸಂಘದ ಹಿಂದೆ ತಮ್ಮೊಳಗಿನ ಪ್ರತಿಭಾವಂತರನ್ನು ಆಯ್ಕೆಮಾಡಿ ಕಾಲೇಜಿನ ವಿದ್ಯಾರ್ಥಿಗಳ ಹೊಣೆಗಾರಿಕೆ ನೀಡುವುದಾಗಿತ್ತು. ಆಗ ಚುನಾವಣೆ ಒಂದು ನೆಪವಷ್ಟೇ ಆಗಿತ್ತು. ಆದರೆ, ಈಗ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದ್ದು, ಇದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

     ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ ಈಶ್ವರ ಭಟ್ ಮಾತನಾಡಿ, ಯಾವುದೇ ಪ್ರಕರಣದ ಹಿನ್ನೆಲೆಯನ್ನು ವಕೀಲರು ಅರ್ಥಮಾಡಿಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ. ಕಾನೂನುಗಳಿಗೆ ಇರುವ ಸಾಮಾಜಿಕ, ಆರ್ಥಿಕ, ರಾಜಕೀಯ ಧಾರ್ಮಿಕ ಆಯಾಮಗಳು ಗೊತ್ತಾದರೆ, ಅವುಗಳು ಸಮಾಜದ ಮೇಲೆ ಬೀರುವ ಪರಿಣಾಮವನ್ನು ಅರಿಯಲು ಸಹಕಾರಿಯಾಗಲಿದೆ. ಇವುಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಹಾಕಿ ಉತ್ತರ ಪಡೆಯುವುದರಿಂದ ವಕೀಲರ ಜ್ಞಾನವೂ ವಿಸ್ತಾರವಾಗಲಿದೆ ಎಂದರು.

    ಆರ್.ಎಲ್. ಕಾನೂನು ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ಡಾ.ಆರ್.ಎಲ್.ಉಮಾಶಂಕರ್, ಮೈಸೂರು ಮಾನಸ ಗಂಗೋತ್ರಿಯ ಕಾನೂನು ಅಧ್ಯಯನ ಮತ್ತು ಸಂಶೋಧನ ವಿಭಾಗದ ಡಾ.ಟಿ.ಮಾರುತಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್.ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಜಿ.ಎಸ್. ಯತೀಶ್ ಸ್ವಾಗತಿಸಿದರು. ಎಂ.ಸೋಮಶೇಖರಪ್ಪ ವಂದಿಸಿದರು. ಶಾಂತಿಕ್ ಮುರುಡೇಶ್ವರಿ ಕಾರ್ಯಕ್ರಮ ನಿರೂಪಿಸಿದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link