ಬಿರುಸಿನ ಮಳೆಗೆ 24 ಮನೆ ಕುಸಿತ

ತುಮಕೂರು

    ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಚಿತ್ತಾ ಮಳೆ ಸುರಿದು ರೈತರನ್ನು ಹರ್ಷಚಿತ್ತರನ್ನಾಗಿ ಮಾಡಿದೆ. ಹಲವೆಡೆ ಸಣ್ಣಪುಟ್ಟ ಬೆಳೆಹಾನಿ ಯಾಗಿದ್ದರೂ ಮಳೆಯಿಂದ ಕೆರೆಕಟ್ಟೆಗಳು ನೀರು ಕಂಡಿವೆ.

     ಮುಂಗಾರಿನಲ್ಲಿ ಸಕಾಲದಲ್ಲಿ ಮಳೆ ಬೀಳದೆ ಈ ಬಾರಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಹಿಂಗಾರು ಬೆಳೆ ಉತ್ತಮವಾಗಿದೆ. ಆದರೆ ಬೆಳೆದಿರುವ ರಾಗಿ ಫಸಲು ಮಳೆಯ ಹೊಡೆತಕ್ಕೆ ನೆಲಕಚ್ಚಿದೆ. ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 30 ಮಿಲಿಮೀಟರ್ ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಆಗಿದ್ದ ಮಳೆಗಿಂತಾ ಶೇಕಡ 12ರಷ್ಟು ಹೆಚ್ಚಿನ ಪ್ರಮಾಣದ ಮಳೆಯಾಗಿದೆ.

    ಮಳೆಯಿಂದಾಗಿ ಜಿಲ್ಲೆಯಲ್ಲಿ 24 ಮನೆಗಳು ಕುಸಿದುಬಿದ್ದಿವೆ. ಶಿರಾ ತಾಲ್ಲೂಕಿನಲ್ಲಿ 8, ತುರುವೇಕೆರೆ ತಾಲ್ಲೂಕಿನಲ್ಲಿ 6. ತಿಪಟೂರು, ಮಧುಗಿರಿ ತಾಲ್ಲೂಕಿನಲ್ಲಿ ತಲಾ 4 ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ 2 ಮನೆಗಳು ಕುಸಿದಿವೆ. ಹಾನಿ ಪ್ರಮಾಣ ಪರಿಶೀಲಿಸಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಹೇಳಿದರು.

    ಉತ್ತಮ ಮಳೆಯಾಗಿರುವ ಕಾರಣ, ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಅಷ್ಟಾಗಿ ಬಾಧಿಸದು. ಈ ಬಾರಿ ಜಿಲ್ಲೆಯ ಎಲ್ಲಾ ಕುಡಿಯುವ ನೀರಿನ ಯೋಜನೆಯ ಕೆರೆಗಳಿಗೆ ಶೇಕಡಾ 50ಕಿಂತಾ ಹೆಚ್ಚಿನ ಪ್ರಮಾಣದಲ್ಲಿ ಹೇಮಾವತಿ ನೀರನ್ನು ತುಂಬಿಸಲಾಗಿದೆ. ಜಿಲ್ಲೆಯಲ್ಲಿ 251 ಕೆರೆಗಳು, 411 ಹಳ್ಳಿಗಳು ಹೇಮಾವತಿ ಕುಡಿಯುವ ನೀರಿನ ಯೋಜನೆಗೆ ಒಳಪಟ್ಟಿದ್ದು ನೀರು ಸಂಗ್ರಹಿಸಲಾಗಿದೆ. ಶಿರಾ ದೊಡ್ಡಕೆರೆಗೆ ನೀರು ಹರಿಯುತ್ತಿದೆ. ಡಿಸೆಂಬರ್‍ವರೆಗೂ ಹೇಮಾವತಿ ನೀರು ಹರಿಸಲಾಗುವುದು ಎಂದು ಜಿಲ್ಲಾ ಸಚಿವರು ಹೇಳಿದ್ದಾರೆ ಆವೇಳೆಗೆ ಕೆರೆಗಳಿಗೆ ಹೆಚ್ಚಿನ ನೀರನ್ನು ತುಂಬಿಸಲು ಸಾಧ್ಯವಾಗುತ್ತದೆ. ಹೇಮಾವತಿ ನಾಲೆಯಿಂದ ಜಿಲ್ಲೆಯ 96 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಾಗುವುದು ರೈತರು ಬೆಳೆ ಬೆಳೆಯುವಂತೆ ಸೂಚಿಸಿ ಇದೇ ಮೊದಲ ಬಾರಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತುಮಕೂರಿನಲ್ಲಿ ಕಿರಿಕಿರಿ

    ಎಲ್ಲೆಡೆ ಮಳೆ ಹರ್ಷ ತಂದರೆ ತುಮಕೂರು ನಗರದಲ್ಲಿ ಕಿರಿಕಿರಿ ಉಂಟುಮಾಡಿದೆ. ನಗರದ ಬಹುತೇಕ ರಸ್ತೆಗಳು ಮೂರು ದಿನಗಳಿಂದ ಸುರಿದ ಮಳೆಗೆ ಕೊಚ್ಚೆಗುಂಡಿಗಳಾಗಿವೆ. ಅದರಲ್ಲೂ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು ನಡೆಯುತ್ತಿರುವ ರಸ್ತೆಗಳು ಒಡಾಡಲು ಆಗದಷ್ಟು ಹದಗೆಟ್ಟಿವೆ.

    ಬಡಾವಣೆಗಳ ಅನೇಕ ರಸ್ತೆಗಳ ಗುಂಡಿಗಳಲ್ಲಿ ನೀರು ನಿಂತು ಜನ, ವಾಹನ ಸಂಚರಿಸದಂತಾಗಿವೆ. ಪ್ರಮುಖವಾದ ಕುಣಿಗಲ್ ರಸ್ತೆಯು ಬಹು ಭಾಗ ಕಿತ್ತುಹೋಗಿ ಗುಂಡಿ ಬಿದ್ದಿದೆ, ಇಲ್ಲಿ ಎರಡು ವರ್ಷಗಳಿಂದಲೂ ಚರಂಡಿ, ಫುಟ್‍ಪಾತ್ ನಿರ್ಮಿಸುವ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ರಸ್ತೆ ಮಾತ್ರ ಅಧ್ವಾನವಾಗಿದೆ. ದೊಡ್ಡ ಗುಂಡಿಗಳು ರಸ್ತೆಯಲ್ಲಿದ್ದು ಮಳೆ ನೀರು ನಿಂತು ರಸ್ತೆ ಸ್ಥಿತಿ ಗುರುತಿಸದೆ ದ್ವಿಚಕ್ರ ವಾಹನ ಚಾಲಕರು ಹಳ್ಳಕ್ಕೆ ಬಿದ್ದು ಅಪಘಾತ ಮಾಡಿಕೊಳ್ಳುತ್ತಿದ್ದಾರೆ. ನಗರ ಪಾಲಿಕೆಯವರು ಕನಿಷ್ಟ ರಸ್ತೆಯ ಗುಂಡಿಗಳನ್ನಾದರೂ ಮುಚ್ಚಬಾರದೆ ಎಂದು ಸದಾಶಿವ ನಗರದ ಪಾಂಡುರಂಗಯ್ಯ ಪಾಲಿಕೆ ಆಡಳಿತ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

    ಅಲ್ಲಿನ ಶಿರಡಿ ಸಾಯಿ ಮಂದಿರ ರಸ್ತೆಯಲ್ಲೂ ದೊಡ್ಡ ಗುಂಡಿ ಬಿದ್ದು ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ರೈಲ್ವೇಸ್ಟೇಷನ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ, ಈ ರಸ್ತೆ ಕೆಸರುಗದ್ದೆಯಾಗಿದೆ, ಸಂಚಾರ ಸಾಂದ್ರತೆ ಹೆಚ್ಚಾಗಿರುವ ರಸ್ತೆಗಳನ್ನು ತಕ್ಕಮಟ್ಟಿಗಾದರೂ ಸರಿಪಡಿಸಬೇಕು ಎಂಬ ಕಾಳಜಿ ಅಧಿಕಾರಿಗಳಿಗಿಲ್ಲ. ಉಪ್ಪರಹಳ್ಳಿ ಬಡಾವಣೆಯ ಅನೇಕ ರಸ್ತೆಗಳು ಕೊಚ್ಚೆಯಾಗಿವೆ. ಬಡ್ಡಿಹಳ್ಳಿ, ಮಹಾಲಕ್ಷ್ಮೀ ಬಡಾವಣೆ, ಸಪ್ತಗಿರಿ ಬಡಾವಣೆಯ ಅಭಿವೃದ್ಧಿ ಕಾಣದ ಸಂಪರ್ಕ ರಸ್ತೆಗಳು ಮಳೆಯಿಂದ ಮತ್ತಷ್ಟು ಹಾಳಾಗಿ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

    ಮಳೆಗಾಲ ಆರಂಭಕ್ಕೆ ಮೊದಲು ನಗರ ಪಾಲಿಕೆಯವರು ಮುನ್ನೆಚ್ಚರಿಕೆಯಾಗಿ ಪ್ರಮುಖ ರಸ್ತೆಗಳ ಕನಿಷ್ಟ ಗುಂಡಿಗಳನ್ನು ಮುಚ್ಚುವ ಪ್ರಯತ್ನ ಮಾಡಿಲ್ಲ. ಮಳೆಗಾಲದಲ್ಲಿ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link