ಬೆಂಗಳೂರು
ಕೇವಲ 5 ರೂಗಳ ಟಿಕೆಟ್ಗಾಗಿ ಉಂಟಾದ ಜಗಳದಲ್ಲಿ ಆಕ್ರೋಶಗೊಂಡ ಬಿಎಂಟಿಸಿ ಬಸ್ ಕಂಡಕ್ಟರ್ಗೆ ಚಾಕುವಿನಿಂದ ಇರಿದ ಪ್ರಯಾಣಿಕನೊಬ್ಬನನ್ನು ಸಹಪ್ರಯಾಣಿಕರು ಹಿಡಿದು ಬ್ಯಾಟರಾಯನಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಚಾಕು ಇರಿತದಿಂದ ಗಾಯಗೊಂಡಿರುವ ಬಿಎಂಟಿಸಿ ಬಸ್ ಕಂಡಕ್ಟರ್ ಲೋಕೇಶ್ (43)ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಚಾಕುವಿನಿಂದ ಪ್ರಯಾಣಿಕ ಮಂಜುನಾಥ್ (30)ನನ್ನು ಬಂಧಿಸಲಾಗಿದೆ.ಸಿಟಿ ಮಾರುಕಟ್ಟೆಯಲ್ಲಿ ಬಸ್ ಹತ್ತಿರುವ ಮಂಜುನಾಥ್ ಮೈಸೂರು ಸರ್ಕಲ್ಗೆ ತೆರಳುವುದಾಗಿ ಹೇಳಿ ರೂ.5 ಟಿಕೆಟ್ ಪಡೆದುಕೊಂಡು ಮೈಸೂರು ಸರ್ಕಲ್ನಲ್ಲಿ ಬಸ್ ಇಳಿಯದ ಮಂಜುನಾಥ್ ಮುಂದಿನ ನಿಲ್ದಾಣ ಟೋಲ್ಗೇಟ್ನಲ್ಲಿ ಇಳಿದಿದ್ದಾನೆ.
ಮುಂದಿನ ನಿಲ್ದಾಣಕ್ಕೆ ತೆರಳಲು ಆರೋಪಿ ಟಿಕೆಟ್ ಪಡೆದುಕೊಂಡಿರಲಿಲ್ಲ. ಆರೋಪಿ ಬಸ್ ಇಳಿಯುವುದನ್ನು ಗಮನಿಸಿದ ಲೋಕೇಶ್ ಅವರು ಕೂಡಲೇ ತಡೆದು ಸೂಕ್ತ ಟಿಕೆಟ್ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ತಪಾಸಣೆಗೆ ಅಧಿಕಾರಿಗಳು ಬಂದರೆ ನನಗೆ ಕಷ್ಟವಾಗುತ್ತದೆ. ರೂ.5 ಕೊಟ್ಟು ಮತ್ತೊಂದು ಟಿಕೆಟ್ ಪಡೆಯಿರಿ ಎಂದು ತಿಳಿಸಿದ್ದಾರೆ.
ಮಾತಿನ ಚಕಮಕಿ ಬಳಿಕ ಮಂಜುನಾಥ್ ಮತ್ತೆ ರೂ.5 ಕೊಟ್ಟು ಮತ್ತೊಂದು ಟಿಕೆಟ್ ಪಡೆದಿದ್ದಾರೆ. ಬಳಿಕ ಲೋಕೇಶ್ ಅವರು ಮತ್ತೆ ಈ ರೀತಿಯ ಕೆಲಸಗಳನ್ನು ಮಾಡಬೇಡಿ. ಈ ರೀತಿಯ ಮಾಡುವುದರಿಂದ ನಮ್ಮ ಕೆಲಸ ಹೋಗುತ್ತದೆ ಎಂದು ಹೇಳಿದ್ದಾರೆ.ಇದರಿಂದ ಕೆಂಡಾಮಂಡಲಗೊಂಡಿರುವ ಮಂಜುನಾಥ್ ನಿರ್ವಾಹಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಜೇಬಿನಲ್ಲಿದ್ದ ಚಾಕುವಿನಿಂದ ಲೋಕೇಶ್ ಅವರ ಎರಡೂ ಕೈಗಳ ಮೇಲೆ ಚೂರಿಯಿಂದ ಇರಿದಿದ್ದಾನೆ. ಈ ವೇಳೆ ಎಚ್ಚೆತ್ತ ಬಸ್ ಚಾಲಕ ಬಸ್ ನಿಲ್ಲಿಸದೆಯೇ ಚಾಲನೆ ಮಾಡಿ, ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








