ದಾವಣಗೆರೆ:
ಮಹಾನಗರ ಪಾಲಿಕೆಯ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅ.31 ಕೊನೆಯ ದಿನಾಂಕವಾಗಿದ್ದು, ಬೆಳಕಿನ ಹಬ್ಬದ ದೀಪಾವಳಿಯ ನಡುವೆಯೂ ಟಿಕೆಟ್ ಆಕಾಂಕ್ಷಿಗಳು ತಮ್ಮ ನಾಯಕರುಗಳ ಮನೆ ಬಾಗಿಲುಗಳನ್ನು ತಟ್ಟಿ ಟಿಕೆಟ್ ಪಡೆಯಲು ಅಂತಿಮ ಕಸರತ್ತು ನಡೆಸಿದ್ದಾರೆ.
ಹೌದು… ಬೆಳಕಿನ ಹಬ್ಬ ದೀಪಾವಳಿಯನ್ನು ಸಹ ಲೆಕ್ಕಿಸದೇ, ಹಬ್ಬ ಮಾಡುತ್ತಾ ಕೂತರೆ, ಟಿಕೆಟ್ ಕೈ ತಪ್ಪಿ, ತಮ್ಮ ಭವಿಷ್ಯದಲ್ಲಿ ಎಲ್ಲಿ ಕತ್ತಲು ಆವರಿಸಲಿದೆಯೋ ಎಂಬ ಆತಂಕದಿಂದ ಪಾಲಿಕೆ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರುಗಳ ಮನೆಗಳನ್ನು ಎಡತಾಕಿ ಕೊನೆಯ ಹಂತದ ಕಸರತ್ತು ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಮಹಾನಗರ ಪಾಲಿಕೆಯ 45 ವಾರ್ಡ್ಗಳ ಪೈಕಿ ಬಹುತೇಕ ವಾರ್ಡ್ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಐದಾರು ಜನ ಟಿಕೆಟ್ ಆಕಾಂಕ್ಷಿಗಳಿರುವುದರಿಂದ ಟಿಕೆಟ್ ಅಂತಿಮಗೊಂಡ ಬಳಿಕ ಟಿಕೆಟ್ ಸಿಗದವರು ಎಲ್ಲಿ ಬಂಡಾಯದ ಬಾವುಟ ಹಾರಿಸುತ್ತಾರೋ ಎಂಬ ಆತಂಕವೂ ಎರಡೂ ಪಕ್ಷದ ಜಿಲ್ಲಾ ನಾಯಕರಲ್ಲಿ ಮನೆ ಮಾಡಿದೆ.
ಕೊನೆ ಅವಧಿಯಲ್ಲಿ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ಇದ್ದ ಕಾರಣ, ಕಳೆದ ಚುನಾವಣೆಯಲ್ಲಿ ಯಾವ್ಯಾವ ವಾರ್ಡುಗಳಲ್ಲಿ ಅದೇ ಮೀಸಲಾತಿ ಮುಂದುವರೆದಿದೆಯೋ ಅಲ್ಲೆಲ್ಲಾ ಕಾಂಗ್ರೆಸ್ನಲ್ಲಿ ಬಹುತೇಕ ಕೊನೆ ಬಾರಿ ಗೆದ್ದು ಆಡಳಿತ ನಡೆಸಿದವರಿಗೆ ಟಿಕೆಟ್ ಅಂತಿಮವಾಗುವ ಸಾಧ್ಯತೆ ಇದೆ. ಇನ್ನೂ ಪರಿಷ್ಕೃತ ಮೀಸಲಾತಿಯಿಂದ ವಾರ್ಡ್ ಕಳೆದುಕೊಂಡವರು ಬೇರೆ ವಾರ್ಡುಗಳ ಮೇಲೆ ಕಣ್ಣೀಟ್ಟಿದ್ದಾರೆ. ಹೀಗಾಗಿ ಆ ವಾರ್ಡುಗಳ ಸ್ಥಳೀಯ ಕಾರ್ಯಕರ್ತರು ಬೇರೆ ವಾರ್ಡ್ನವರು ಬಂದು ನಮ್ಮ ವಾರ್ಡ್ನಿಂದ ಚುನಾವಣೆಗೆ ನಿಲ್ಲುವುದಾದರೆ, ನಾವು ಎಲ್ಲಿಗೆ ಹೋಗಬೇಕು?. ವಾರ್ಡುವಾರು ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬುದಾಗಿ ಕೆಲವರು ಪಟ್ಟು ಹಿಡಿದು ಕೂತಿದ್ದಾರೆಂದು ಮೂಲಗಳು ತಿಳಿಸಿವೆ.
ಇನ್ನೂ ಕಾಂಗ್ರೆಸ್ಗೆ ಹೋಲಿಸಿದರೆ, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಕೆಲ ವಾರ್ಡ್ಗಳಲ್ಲಿ ಡಜನ್ ಸಹ ದಾಟಿದೆ. ಹೀಗಾಗಿ ಬಿಜೆಪಿಯಲ್ಲಿ ಟಿಕೆಟ್ ಅಂತಿಮವಾದ ಬಳಿಕ ಸಾಕಷ್ಟು ವಾರ್ಡ್ಗಳಲ್ಲಿ ಬಂಡಾಯದ ಬಿಸಿ ಪಕ್ಷಕ್ಕೆ ತಟ್ಟಬಹುದೆಂಬ ಸೂಕ್ಷ್ಮತೆಯನ್ನು ಅರಿತ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮೊನ್ನೆ ಚುನಾವಣೆಯ ಪೂರ್ವಸಿದ್ಧತೆಗಾಗಿ ಏರ್ಪಡಿಸಿದ್ದ ಸಭೆಯಲ್ಲಿ ಪಕ್ಷ ತಾಯಿ ಇದ್ದಂತೆ, ಟಿಕೆಟ್ ಸಿಗದಿದ್ದರೆ, ಹೊಟ್ಟೆಕಿಚ್ಚು ಪಟ್ಟುಕೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸಿ ತಾಯಿಗೆ ದ್ರೋಹ ಬಗೆಯದಿರಿ ಎಂಬುದಾಗಿ ಸಲಹೆ ನೀಡಿದ್ದು ಎಂಬ ಚರ್ಚೆ ಬಿಜೆಪಿ ಪಾಳಯದಲ್ಲಿ ನಡೆಯುತ್ತಿದೆ.
ಯಾರೂ ಏನಾದರೂ ಹೇಳಿಕೊಳಲ್ಲಿ ಅಷ್ಟು ವರ್ಷಗಳ ಕಾಲ ಪಕ್ಷದ ಬಾವುಟ ಹಿಡಿಯುವುದರಿಂದ ಹಿಡಿದು, ಪಕ್ಷಕ್ಕೆ ಮಣ್ಣು ಹೊತ್ತಿದ್ದೇವೆ. ಈಗ ಆಯಾ ವಾರ್ಡುಗಳ ಸ್ಥಳೀಯರನ್ನು ಬಿಟ್ಟು ಬೇರೆಲ್ಲಿಂದಲ್ಲೋ ಕರೆದುಕೊಂಡು ಬಂದು ನಮ್ಮ ವಾರ್ಡ್ಗಳಲ್ಲಿ ನಿಲ್ಲಿಸಿದರೆ, ಬಂಡಾಯ ಎಳುವುದು ಖಚಿತ ಎಂದು ಹೆಸರು ಹೇಳಲು ಇಚ್ಚಿಸದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಪಕ್ಷದ ಮುಖಂಡರ ವಿರುದ್ಧ ಗುಡಿಗಿದ್ದಾರೆ.ಇನ್ನೂ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ನಲ್ಲಿ ಹೇಳಿಕೊಳ್ಳುವಂತಹ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಇಲ್ಲ. ಗೊಂದಲ ಎದುರಾದರೂ ಒಂದೆರಡು ಮೂರು ಕಡೆಗಳಲ್ಲಿ ಗೊಂದಲ ಎದುರಾಗಬಹುದು.
ಆದರೆ, ಈ ಪಾಲಿಕೆ ಚುನಾವಣೆಯನ್ನು ಪ್ರತಿಷ್ಟೆಯನ್ನಾಗಿ ತೆಗೆದುಕೊಂಡು ಪಕ್ಷ ಸಂಘಟನೆಯ ವೇದಿಕೆಯನ್ನಾಗಿಸಿಕೊಂಡು ಮೇಲೆಳಲು ನಿರ್ಧರಿಸಲಾಗಿದೆ ಎನ್ನಲಾಗಿದೆ .ಒಟ್ಟಿನಲ್ಲಿ ಬಿ-ಫಾರಂ ಹಂಚಿಕೆ ಆಗುವ ವರೆಗೂ ಕಾಂಗ್ರೆಸ್-ಬಿಜೆಪಿಯಲ್ಲಿ ಟಿಕೆಟ್ಗಾಗಿ ಸಾಕಷ್ಟು ಲಾಭಿ ನಡೆಯುತ್ತಿದ್ದು, ಟಿಕೆಟ್ ಅಂತಿಮವಾದ ಬಳಿಕ ಎರಡೂ ಪಕ್ಷಗಳಲ್ಲೂ ಬಂಡಾಯದ ಹೊಗೆ ಏಳುವುದರಲ್ಲಿ ಯಾವುದೇ ಸಂದೇಹವಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
