ಬೆಂಗಳೂರು
ಶಿಕ್ಷಕ ಸಮುದಾಯಕ್ಕೆ ಅನ್ವಯವಾಗುವಂತೆ 15 ದಿನಗಳ ಸಾಂದರ್ಭಿಕ ರಜೆಗಳನ್ನು ಮೊದಲಿನಂತೆ ಮುಂದುವರೆಸಬೇಕು. ಇದಕ್ಕಾಗಿ ಸರ್ಕಾರದ ರಜಾ ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಲು ಕ್ರಮಕೈಗೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯ ಸರ್ಕಾರಿ ನೌಕರರಿಗೆ ಹಲವು ವರ್ಷಗಳಿಂದಲೂ ತಿಂಗಳ ಎರಡನೇ ಶನಿವಾರ ರಜೆ ನೀಡಲಾಗುತ್ತಿತ್ತು. ಇದೀಗ ನಾಲ್ಕನೇ ಶನಿವಾರವನ್ನೂ ಸಹ ರಜಾ ದಿನವನ್ನಾಗಿ ಘೋಷಿಸಲಾಗಿದೆ. ನಾಲ್ಕನೇ ಶನಿವಾರ ರಜೆ ಘೋಷಿಸಿದ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ಇದ್ದ 15 ಸಾಂದರ್ಭಿಕ ರಜೆಗಳ ಪ್ರಮಾಣವನ್ನು 10 ದಿನಗಳಿಗೆ ಇಳಿಕೆ ಮಾಡಲಾಗಿತ್ತು. ಇದು ಸರ್ಕಾರಿ ನೌಕರರಂತೆ ಶಾಲಾ ಶಿಕ್ಷಕ ಸಮುದಾಯಕ್ಕೂ ಅನ್ವಯವಾಗಿತ್ತು.
ಆದರೆ ಶಾಲಾ ಶಿಕ್ಷಕರಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇಲ್ಲ. ಹೀಗಾಗಿ ಶಿಕ್ಷಕರಿಗೆ ನೀಡಲಾಗುತ್ತಿದ್ದ ಸಾಂದರ್ಭಿಕ ರಜೆಗಳನ್ನು ವಾರ್ಷಿಕ ಹತ್ತು ದಿನಗಳಿಗೆ ಕಡಿತಗೊಳಿಸಲಾಗಿದೆ. ಇದರಿಂದ ಶಿಕ್ಷಕರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಶಿಕ್ಷಕ ವರ್ಗ ಸಾಂದರ್ಬಿಕ ರಜೆ ಅವಧಿಯನ್ನು 15ಕ್ಕೆ ಹೆಚ್ಚಿಸುವಂತೆ ಮನವಿ ಸಲ್ಲಿಸಿದೆ. ಶಿಕ್ಷಕ ಸಮುದಾಯಕ್ಕೆ ಮೊದಲಿನಂತೆ ಹದಿನೈದು ದಿನಗಳ ಸಾಂದರ್ಭಿಕ ರಜೆಗಳನ್ನು ನೀಡಬೇಕು. ಈ ಸಂಬಂಧ ರಜಾ ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಲು ಕ್ರಮಕೈಗೊಳ್ಳಬೇಕೆಂದು ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








