ಮಾಜಿ ಶಾಸಕರ ಧೋರಣೆಗೆ ಶಾಸಕರ ಅಸಮಾಧಾನ
ಶಿರಾ
ಮಾಜಿ ಶಾಸಕರು ಶಿರಾ ಕೆರೆಯ ಬಳಿಗೆ ನಗರಸಭೆಯ ಅಧಿಕಾರಿಗಳನ್ನು ಕರೆಸಿಕೊಂಡು ಸರಿಯಾದ ಮಾಹಿತಿಯೇ ಇಲ್ಲದೆ ಶಿರಾ ಕೆರೆಗೆ ಹರಿಯುತ್ತಿರುವ ಹೇಮಾವತಿ ನೀರಿನ ಪ್ರಮಾಣದ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದು ಯಾರೇ ಅಡ್ಡಿಪಡಿಸಿದರೂ ಡಿಸೆಂಬರ್ ಅಂತ್ಯದವರೆಗೂ ಹೇಮಾವತಿಯ ನೀರು ಶಿರಾ ಕೆರೆಗೆ ಹರಿಯುವುದನ್ನು ತಪ್ಪಿಸಲು ಸಾದ್ಯವಿಲ್ಲ ಎಂದು ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.
ಶುಕ್ರವಾರ ಶಿರಾ ದೊಡ್ಡಕೆರೆಗೆ ದಿಢೀರ್ ಭೇಟಿ ನೀಡಿದ ಶಾಸಕರು, ಕೆರೆಗೆ ಹರಿದು ಬಂದಿರುವ ಮತ್ತು ಹರಿಯುತ್ತಿರುವ ನೀರಿನ ಸಂಪೂರ್ಣ ಮಾಹಿತಿಯನ್ನು ಪಡೆದರು.ನಗರಸಭೆಯ ಅಧಿಕಾರಿಗಳನ್ನು ಕೂಡಲೇ ಶಿರಾ ಕೆರೆಯ ಬಳಿಗೆ ಬರುವಂತೆ ಸೂಚನೆ ನೀಡಿ ಅಧಿಕಾರಿಗಳನ್ನು ಶಾಸಕರು ತೀವ್ರವಾಗಿ ತರಾಟೆಗೂ ತೆಗೆದುಕೊಂಡರು. ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲು ಪ್ರಮುಖ ಕಾರಣವೂ ಇತ್ತು.
ಗುರುವಾರದಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರೊಟ್ಟಿಗೆ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶಿರಾ ಕೆರೆಗೆ ಭೇಟಿ ನೀಡಿದ್ದರು. ಕಳೆದ ಕೆಲ ದಿನಗಳಿಂದ ಕೇವಲ 30 ಕ್ಯುಸೆಕ್ಸ್ನಷ್ಟು ನೀರು ಹರಿಯುತ್ತಿದೆ. ಈ ರೀತಿ ನಿಧಾನವಾಗಿ ನೀರು ಹರಿದರೆ ತಾಲ್ಲೂಕಿನ ಯಾವುದೇ ಕೆರೆಗಳು ತುಂಬುವುದಿಲ್ಲ. ಈಗ ನಾನೇ ಜಿಲ್ಲಾಧಿಕಾರಿಗಳಿಗೆ ಹೇಳಿ ನೀರಿನ ಪ್ರಮಾಣವನ್ನು ಹೆಚ್ಚಿಸಿದ್ದೇನೆ ಎಂದು ಜಯಚಂದ್ರ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದಲೂ ಶಿರಾ, ಕಳ್ಳಂಬೆಳ್ಳ ಕೆರೆಗೆ ನೀರು ಹರಿಸಿಕೊಳ್ಳಲು ಪಡಿಪಾಟಲು ಬೀಳುತ್ತಿರುವ ಶಾಸಕರು ಮಾಜಿ ಶಾಸಕರ ಹೇಳಿಕೆಯನ್ನು ಕಂಡು ಕೂಡಲೇ ಶಿರಾ ಕೆರೆಗೆ ಭೇಟಿ ನೀಡಿ ನಗರಸಭೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡರು.
ಅಧಿಕಾರವಿಲ್ಲದಿದ್ದರೂ ಮಾಜಿ ಶಾಸಕರ ಕರೆಗೆ ಓಗೊಟ್ಟು ಶಿರಾ ಕೆರೆಯ ಬಳಿ ಬಂದು ಅವರಿಂದಲೇ ಅಪೂರ್ಣ ಮಾಹಿತಿ ನೀಡಿಸಿದ್ದೀರಿ ಎಂದು ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ನನಗೆ ಕಳೆದ 10 ವರ್ಷ ಅಧಿಕಾರವಿಲ್ಲದಿದ್ದಾಗ ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಅಧಿಕಾರಿಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನೂ ಮಾಡಿದವನಲ್ಲ ಎಂದು ಪರೋಕ್ಷವಾಗಿ ಜಯಚಂದ್ರ ಅವರನ್ನು ಕುಟುಕಿದರು.
ಈಗಲೂ ಶಿರಾ ಕೆರೆಗೆ ಹೇಮಾವತಿಯ ನೀರು ಹರಿಯುತ್ತಲೇ ಇದೆ. ಮಾಜಿ ಶಾಸಕರ ಅಭಿಪ್ರಾಯದಂತೆ ಹರಿಯುತ್ತಿರುವ ನೀರಿನ ಪ್ರಮಾಣ 30 ಕ್ಯುಸೆಕ್ಸ್ ಅಲ್ಲ, 80 ಕ್ಯುಸೆಕ್ಸ್ ನೀರು ಹರಿಯುತ್ತಲೇ ಇದೆ. ಈವರೆಗೆ ಶಿರಾ ಕೆರೆಗೆ ಮಳೆಯ ನೀರಿಲ್ಲದೆ 100 ಎಂ.ಸಿ.ಎಫ್.ಟಿ. ನೀರು ಬಂದಿದೆ. ಡಿಸೆಂಬರ್ ಅಂತ್ಯದವರೆಗೂ ನೀರು ಹರಿಯುತ್ತಲೇ ಇರುತ್ತದೆ. ಈಗ ಶಿರಾ ಕೆರೆಯಲ್ಲಿ ಹಾಲಿ ಇರುವ ನೀರು ಸಂಪೂರ್ಣವಾಗಿ
ಹೇಮಾವತಿಯ ನೀರೇ ಆಗಿದೆ. ಅದು ಮಳೆಯ ನೀರಲ್ಲ, ಇರುವ ನೀರನ್ನು ಮುಂದಿನ 7 ತಿಂಗಳವರೆಗೂ ನಗರದ ಜನತೆಗೆ ಕುಡಿಯಲು ನೀಡಬಹುದಾಗಿದ್ದು ಡಿಸೆಂಬರ್ವರೆಗೂ ನೀರನ್ನು ಹರಿಸಿಕೊಳ್ಳಲಾಗುತ್ತದೆ ಎಂದರು.
ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷ ಒಂದು ಹನಿ ಮಳೆಯ ನೀರಿಲ್ಲದೆಯೇ ಶಿರಾ, ಕಳ್ಳಂಬೆಳ್ಳ ಕೆರೆಯನ್ನು ತುಂಬಿಸಿಕೊಳ್ಳಲಾಗುತ್ತಿದೆ. ಈ ಹಿಂದೆ ಮಾಜಿ ಶಾಸಕರ ಆಡಳಿತಾವಧಿಯಲ್ಲಿ ಈ ಎರಡೂ ಕೆರೆಗಳನ್ನು ತುಂಬಿಸಿಕೊಳ್ಳುವಾಗ ಮಳೆಯ ನೀರು ಹೆಚ್ಚಾಗಿ ಬರುತ್ತಿತ್ತು ಎಂಬುದನ್ನು ಮಾಜಿ ಶಾಸಕರು ಅರಿಯಬೇಕಿದೆ ಎಂದು ಸತ್ಯನಾರಾಯಣ್ ಸುದ್ದಿಗಾರರಿಗೆ ತಿಳಿಸಿದರು.
ತಹಶೀಲ್ದಾರ್ ನಾಹಿದಾ ಜಮ್ ಜಮ್, ನಗರಸಭೆಯ ಆಯುಕ್ತ ಪರಮೇಶ್ವರಪ್ಪ, ಎ.ಇ.ಇ. ಸೇತುರಾಮ್ಸಿಂಗ್, ಎ.ಇ. ಮಂಜುನಾಥ್, ಕಂದಾಯ ತನಿಖಾಧಿಕಾರಿ ಮಂಜುನಾಥ್, ಜೆ.ಡಿ.ಎಸ್. ಮುಖಂಡರಾದ ಮುದಿಮಡು ರಂಗಸ್ವಾಮಯ್ಯ, ರವಿ ಸೇರಿದಂತೆ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
