ಸ್ವಾಮೀಜಿ-ಮಾಧುಸ್ವಾಮಿ ವಿವಾದ ಅಂತ್ಯ

ದಾವಣಗೆರೆ:

    ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಕನಕ ವೃತ್ತಕ್ಕೆ ಸಂಬಂಧಿಸಿದಂತೆ ಕಾಗಿನೆಲೆಯ ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮೀಜಿ ಅವರ ಮಧ್ಯೆ ಏರ್ಪಟ್ಟಿದ್ದ ವಿವಾದವು ಗುರುವಾರ ಹರಿಹರ ತಾಲೂಕಿನ ಬೆಳ್ಳೂಡಿಯ ಶಾಖಾಮಠದಲ್ಲಿ ನಡೆದ ಸಂಧಾನ ಸಭೆಯಲ್ಲಿ ಅಂತ್ಯಗೊಂಡಿದೆ.

    ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀನಿರಂಜನಾನಂದ ಪುರಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ಗುರುವಾರ ಬೆಳ್ಳೂಡಿಯ ಶಾಖಾ ಮಠದಲ್ಲಿ ಹೊಸದುರ್ಗ ಶಾಖಾ ಮಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ, ಸಚಿವ ಮಾಧುಸ್ವಾಮಿ ಹಾಗೂ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಅವರುಗಳ ನಡುವೆ ನಡೆದ ಸಂಧಾನ ಸಭೆಯಲ್ಲಿ ಹುಳಿಯಾರಿನ ಕನಕ ವೃತ್ತದ ವಿವಾದ ಪ್ರಕರಣವು ಸುಖ್ಯಾಂತ ಕಂಡು, ಮೊದಲಿದ್ದ ಸ್ಥಳದಲ್ಲೇ ಕನಕದಾಸರ ನಾಮ ಫಲಕ ಅಳವಡಿಕೆ ಮಾಡಲು ನಿರ್ಧರಿಸಲಾಯಿತು.

     ಸಂಧಾನ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಗಿನೆಲೆ ಗುರುಪೀಠದ ಶ್ರೀನಿರಂಜನಾನಂದ ಪುರಿ ಸ್ವಾಮೀಜಿ, “ಗೃಹಮಂತ್ರಿಗಳು ಈಶ್ವರಾನಂದಪುರಿ ಸ್ವಾಮೀಜಿ ಹಾಗೂ ಸಚಿವ ಮಾಧುಸ್ವಾಮಿ ಅವರ ಮಧ್ಯೆ ಏರ್ಪಟ್ಟಿದ್ದ ವಿವಾದದ ಬಗ್ಗೆ ನಮ್ಮಲ್ಲಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ನಮಗೆ ಮಾಧುಸ್ವಾಮಿ ಬಗ್ಗೆ ಕೋಪ ಇತ್ತು. ಆದರೆ, ಅವರ ಕಣ್ಣುಗಳಲ್ಲಿ ನನಗೆ ಸತ್ಯಾಂಶ ಗೊತ್ತಾಯಿತು. ಕನಕದಾಸರ ವೃತ್ತದಲ್ಲಿ ನಾಮಫಲಕ ಹಾಕಲು ನಮ್ಮ ಸಮ್ಮುಖದಲ್ಲೇ ಸಮ್ಮತಿ ನೀಡಿದರು.

     ನಮಗೂ ಯಾರ ಮನಸ್ಸು ನೋಯಿಸುವ ಉದ್ದೇಶ ಇರಲಿಲ್ಲ. ಹುಳಿಯಾರು ಸಮಸ್ಯೆ ನಮ್ಮ ಪೀಠದಲ್ಲಿ ಬಗೆಹರಿದಿದೆ. ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿಯೇ ಶೀಘ್ರದಲ್ಲಿಯೇ ಕನಕದಾಸರ ವೃತ್ತದಲ್ಲಿ ನಾಮಫಲಕ ಅಳವಡಿಕೆ ಮಾಡಲಾಗುತ್ತದೆ. ಇವತ್ತಿಗೆ ಇದನ್ನು ಅಂತ್ಯ ಮಾಡಲಾಗಿದೆ. ಹೀಗಾಗಿ ಇನ್ನೂ ಮುಂದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾರೂ ಪ್ರತಿಭಟಿಸುವುದನ್ನು ಮತ್ತು ಮಾತನಾಡುವುದನ್ನು ಮಾಡಬಾರದು ಎಂದು ಭಕ್ತರಿಗೆ ಸೂಚನೆ ನೀಡಿದರು.

    ಶ್ರೀಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಈಗ ನಮ್ಮ ನಡುವಿನ ವಿವಾದ ಅಂತ್ಯವಾಗಿದೆ. ಹೀಗಾಗಿ ಇನ್ನೂ ಮುಂದೆ ಯಾರೂ ಪ್ರತಿಭಟಿಸಬಾರದು ಎಂದರು.ಇದೇ ವೇಳೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಹುಳಿಯಾರು ವೃತ್ತದ ವಿಚಾರವನ್ನು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಗುರುಗಳು ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಹೊಸದುರ್ಗದ ಶ್ರೀಈಶ್ವರಾನಂದಪುರಿ ಸ್ವಾಮೀಜಿಗಳ ಬಗ್ಗೆ ಗೊಂದಲ ಹೇಳಿಕೆ ವಿಚಾರವಾಗಿ ಮಾಹಿತಿ ಕೊರತೆಯಾಗಿತ್ತು.

    ಸದ್ಯಕ್ಕೆ ಕನಕ ವೃತ್ತ ಮಾಡಲು ತಾತ್ಕಾಲಿಕವಾಗಿ ಬೋರ್ಡ್ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಕಾನೂನು ರೀತಿಯಲ್ಲಿ ವೃತ್ತಕ್ಕೆ ನಾಮಫಲಕ ಅಳವಡಿಸಲಾಗುವುದು ಎಂದರು.

    ಸಚಿವ ಮಾಧುಸ್ವಾಮಿ ಮಾತನಾಡಿ, “ನನ್ನ ನಿಲುವು ಸ್ಪಷ್ಟ. ಕಾನೂನಾತ್ಮಕವಾಗಿ ಸಮಸ್ಯೆ ಇತ್ತು. ಕನಕ ವೃತ್ತಕ್ಕೆ ಹೆಸರಿಡಲು ಸಮ್ಮತಿ ನೀಡಲಾಗಿದೆ. ಸ್ವಾಮೀಜಿಗಳಿಗೆ ನಾನು ಯಾವುದೇ ಅವಮಾನ ಮಾಡಿಲ್ಲ. ಕೆಲವರು ನಾನು ಏಕ ವಚನದಲ್ಲಿ ಮಾತಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ಸ್ವಾಮಿಗಳಿಗೆ ಒಂದು ಕೆಟ್ಟ ಪದವನ್ನೂ ಬಳಸಿಲ್ಲ. ಸಭೆಯಲ್ಲಿ ಗೊಂದಲವಾದಾಗ ಏರು ಧ್ವನಿಯಲ್ಲಿ ಮಾತನಾಡಿ, ನನಗೂ ಮಾತನಾಡಲು ಬಿಡಿ ಎಂದು ಹೇಳಿದ್ದೆ ಅಷ್ಟೇ. ಯಾವುದೇ ಸಮುದಾಯಕ್ಕೆ ನಾನು ನೋವು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

    ಸ್ವಾಮೀಜಿಗಳ ನೇತೃತ್ವದಲ್ಲಿ ಮಾತನಾಡಿದ್ದಕ್ಕೆ ನನ್ನ ಮನಸ್ಸಿಗೆ ಸಮಾಧಾನ ತಂದಿದೆ. ಕುರುಬ ಸಮಾಜಕ್ಕೆ ನಾನು ಆಭಾರಿಯಾಗಿದ್ದೇನೆ. ಮಠಕ್ಕೆ ಬರುವಾಗ ತುಮಕೂರು ಎಸ್‍ಪಿಗೆ ಹೇಳಿ ಬಂದಿದ್ದೆ. ಸಂಪರ್ಕ ಕೊರತೆಯಿಂದ ಇಷ್ಟೆಲ್ಲಾ ನಡೆದಿದೆ. ಇದು ನಡೆಯಭಾರದಿತ್ತು ಎಂದು ವಿಷಾದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link