ದಾವಣಗೆರೆ:
ಉಪ ಚುನಾವಣೆ ನಡೆಯುತ್ತಿರುವ ಎಲ್ಲಾ 15 ಕ್ಷೇತ್ರಗಳಲ್ಲೂ ಕಾಂಗ್ರೆಸ್, ಜೆಡಿಎಸ್ ಸೋಲುವುದು ವಿಪಕ್ಷಗಳ ಮುಖಂಡರಿಗೆ ಖಚಿತವಾಗಿರುವ ಹಿನ್ನೆಲೆಯಲ್ಲಿ ಸೋಲಿನ ಭೀತಿಯಿಂದಾಗಿ ಮತ್ತೆ ಮೈತ್ರಿ ಸರ್ಕಾರ ರಚಿಸುವುದಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಯಿ ಲೇವಡಿ ಮಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳ ನಾಯಕರ ಕನಸಿನಲ್ಲೂ ಯಡಿಯೂರಪ್ಪ ಬರುತ್ತಿದ್ದಾರೆ. ವಿಪಕ್ಷಗಳಿಗೆ 15ಕ್ಕೆ 15 ಕ್ಷೇತ್ರಗಳಲ್ಲಿ ಸೋಲು ಖಚಿತ ಎಂಬುದು ಗೊತ್ತಾಗಿದೆ. ಅದಕ್ಕೆ ಈಗ ಅವರು ಹೊಸ ಮೈತ್ರಿ ಸರ್ಕಾರ ಮಾಡುತ್ತೇವೆಂಬ ಹೊಸ ರಾಗ ಆರಂಭಿಸಿದ್ದಾರೆ ಎಂದು ಹೇಳಿದರು.
ಕಳೆದ ಒಂದು ವಾರದಿಂದ ನಾವು ಸರ್ಕಾರ ಮಾಡೋಲ್ಲ ಎನ್ನುತ್ತಿದ್ದ ವಿಪಕ್ಷ ನಾಯಕರು, ಈಗ ಸರ್ಕಾರ ಮಾಡುತ್ತೇವೆ ಎನ್ನುತ್ತಿದ್ದಾರೆ. ಸೋಲುವ ಭೀತಿಯಿಂದಾಗಿ ಸರ್ಕಾರ ಮಾಡುತ್ತೇವೆಂದರೆ, ಮತದಾರರು ತಮ್ಮ ಪಕ್ಷಗಳಿಗೆ ಮತ ನೀಡಬಹುದೆಂಬ ಕಾರಣಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.
ಸಂಬಂಧ ಇದ್ದವರು, ಇಲ್ಲದವರು ದಿನ ಒಂದು ಹೇಳಿಕೆ ನೀಡುತ್ತಿದ್ದಾರೆ. ಬಿ.ಕೆ.ಹರಿಪ್ರಸಾದ್ ಹಾಗೂ ಮೊಯ್ಲಿ ಇತ್ತೀಚಿನ ಮಾತುಗಳನ್ನು ಕೇಳಿದ್ರೆ ಸೋಲುತ್ತೇವೆ ಎನ್ನುವುದು ಗೊತ್ತಾಗಿದೆ. ಕಾಂಗ್ರೆಸ್ನಲ್ಲಿ ಆಂತರಿಕ ಹೊಂದಾಣಿಕೆ ಇಲ್ಲ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ ಎಂದ ಅವರು, ಸಿದ್ದರಾಮಯ್ಯ ಒಬ್ಬರೇ ಎಲ್ಲಾ ಕಡೆ ಓಡಾಡುತ್ತಿದ್ದರೆ, ಉಳಿದವರು ಪತ್ರಿಕಾಗೋಷ್ಠಿಗೆ ಸೀಮಿತಯಾಗಿದ್ದಾರೆ. ಇದು ಕಾಂಗ್ರೆಸ್ನವರಿಗೆ ಸೋಲಿನ ಬಗ್ಗೆ ಸ್ಪಷ್ಟತೆ ಯಾಗಿದೆ ಎಂದು ವಿಶ್ಲೇಷಿಸಿದರು.
ಆಡಳಿತ ಪಕ್ಷ ಬಿಜೆಪಿ ಉಪ ಚುನಾವಣೆಗೆ ಹಣದ ಹೊಳೆಯನ್ನೇ ಹರಿಸುತ್ತಿದೆಯೆಂಬ ವಿಪಕ್ಷಗಳ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು, ಈ ಕೆಲಸವನ್ನು ಕಾಂಗ್ರೆಸ್, ಜೆಡಿಎಸ್ ಪಕ್ಷಗಳೇ ಮಾಡುತ್ತಿರಬಹುದು. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ ಎಂದರು.
ಕಾಂಗ್ರೆಸ್ಸಿನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದಿಢೀರ್ ಪ್ರವೇಶ ಸರ್ಕಾರ ರಚನೆಗಾಗಿ ಅಲ್ಲ. ಒಳ್ಳೆಯ ಸುದ್ದಿ ನೀಡುತ್ತೇವೆಂದು ಹೇಳುತ್ತಿದ್ದಾರೆ. ಆದರೆ, ಯಾರಿಗೆ ಒಳ್ಳೆಯ ಸುದ್ದಿ? ರಾಜ್ಯದ ಜನತೆಗೆ ಒಳ್ಳೆಯ ಸುದ್ದಿ ಆಗಬೇಕಲ್ಲವೆ? ಅದೇನು ಅಂದ್ರೆ ಈಗಿರುವ ಯಡಿಯೂರಪ್ಪ ಸರ್ಕಾರ ಸ್ಥಿರವಾಗಿರಬೇಕು ಅಂತಾ ಅಂದುಕೊಂಡಿದ್ದೇವೆ ಎಂದರು.
ಹಿರೇಕೆರೂರಿನಲ್ಲಿ ಕಾಂಗ್ರೆಸ್ಸಿನ ಡಿ.ಕೆ.ಶಿವಕುಮಾರ ನಿನ್ನೆ ಪ್ರಚಾರ ಮಾಡಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಹವಾ ನಡೆಯುವುದಿಲ್ಲ. ಡಿ.9ರಂದು ಜನರ ತೀರ್ಮಾನವೂ ಹೊರ ಬೀಳಲಿದೆ. ಅಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಜಯ ದಾಖಲಿಸಲಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಜೆಡಿಎಸ್ ಶಾಸಕರು ಬಿಜೆಪಿ ಸೇರಲಿದ್ದಾರೆಂಬ ಬಿಜೆಪಿಯ ಬಸವರಾಜ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರದ ಕುರಿತಂತೆ ಕೇಳಿದ ಪ್ರಶ್ನೆಗೆ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸದೇ ಹೊರಟು ನಿಂತರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/12/02_dvg_03.gif)