ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಕಿಡಿಕಾರಿದ ಸಂಸದರು

ತುಮಕೂರು
    ಸ್ಮಾರ್ಟ್ ಸಿಟಿ ಕಂಪನಿಯಲ್ಲಿ ಇತರೆ ರಾಜ್ಯಗಳಿಂದ ಬಂದ ಅಧಿಕಾರಿಗಳು ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸಿದರೆ ಹೇಗೆ ತುಮಕೂರು ಅಭಿವೃದ್ಧಿ ಯಾಗುತ್ತದೆ ಎಂದು ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಕಿಡಿಕಾರಿದರು.
    ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಕಂಪನಿಯಲ್ಲಿ ಚಂಡಿಗಡ, ಬಾಂಬೆ, ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಿಂದ ಬಂದಂತಹ ಅಧಿಕಾರಿಗಳಿಗೆ ತುಮಕೂರು ನಗರದ ಬಗ್ಗೆ ಏನು ಮಾಹಿತಿ ಇರುತ್ತದೆ. ಅವರು ನಗರದ ವಿವಿಧ ರಸ್ತೆಗಳಲ್ಲಿ ಇಂತಹ ಅಭಿವೃದ್ಧಿ ಕೆಲಸ ಮಾಡಿ ಎಂದು ಹೇಳಲು ಅವರಿಗೆ ಇಲ್ಲಿನ ರಸ್ತೆಗಳ ಬಗ್ಗೆ ಯಾವ ಮಾಹಿತಿ ಇರುತ್ತದೆ. ಸುಮ್ಮನೆ ಕ್ರಿಯಾಯೋಜನೆ ರೂಪಿಸಿ ಕೆಲಸ ಮಾಡಿ ಎಂದು ಹೇಳಿದರೆ ಹೇಗೆ ಎಂದು ಸಂಸದರು ಕಿಡಿ ಕಾರಿದರು.
    ತುಮಕೂರು ಸ್ಮಾರ್ಟ್‍ಸಿಟಿ ಕಾಮಗಾರಿಗಳು ಇಷ್ಟೊಂದು ಹದಗೆಡಲು ಗೊತ್ತು ಗುರಿಯಿಲ್ಲದ ಎಸ್.ಪಿ.ವಿ. ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯೇ ಕಾರಣ. ಸ್ಥಳೀಯ ಜನಪ್ರತಿನಿಧಿಗಳ ಸಲಹೆ, ಸೂಚನೆಗಳನ್ನು ಸ್ವೀಕರಿಸದೆ, ಸರ್ವಾಧಿಕಾರಿ ಧೋರಣೆಯಿಂದ ಕೆಲಸ ಮಾಡಿದ್ದೇ, ಸ್ಮಾರ್ಟ್‍ಸಿಟಿ ಯೋಜನೆಯ ಕಾಮಗಾರಿಗಳ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಲು ಪ್ರಮುಖ ಕಾರಣ. ಇದುವರೆಗೂ ನನ್ನ ಅಧ್ಯಕ್ಷತೆಯಲ್ಲಿ ನಡೆದಿರುವ ಎಲ್ಲಾ ದಿಶಾ ಸಭೆಗಳಲ್ಲಿಯೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಇದುವರೆಗೂ ಆಗಿರುವ ಲೋಪದೋಷಗಳನ್ನು ಸರಿಪಡಿಸಿ, ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
     ಕಳೆದ ನಾಲ್ಕು ದಿಶಾ ಸಭೆಗಳಲ್ಲಿ ನೀಡಿರುವ ಎಚ್ಚರಿಕೆಯ ಜೊತೆಗೆ, ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಅಗತ್ಯ ಕ್ರಮವನ್ನು ನಗರದ ಶಾಸಕರು ಮತ್ತು ನಾವು ತೆಗೆದುಕೊಂಡಿದ್ದೇವೆ. ಅಲ್ಲದೆ ಇಲ್ಲಿನ ಉಸ್ತುವಾರಿ ಕಾರ್ಯದರ್ಶಿಗಳ ಕಾರ್ಯ ವೈಖರಿ ಬಗ್ಗೆ ರಾಜ್ಯದ ಸ್ಮಾರ್ಟ್‍ಸಿಟಿಗಳ ಮುಖ್ಯಸ್ಥರಾದ ಮುಖ್ಯಮಂತ್ರಿಗಳ ಗಮನಕ್ಕೂ ತಂದು, ಅವರ ವಿರುದ್ದ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.
     ತುಮಕೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ದೃಷ್ಟಿಯಿಂದ ಸಿಟಿಯ ಸುತ್ತಮುತ್ತ ಇರುವ ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ಕೆಲಸ ಆಗಬೇಕು. ಸ್ಮಾರ್ಟ್‍ಸಿಟಿ ಯೋಜನೆಯಿಂದ ಈ ಕಾಮಗಾರಿಗಳನ್ನು ಕೈಗೆತ್ತಿಕೊಂಡರೆ ಹೆಚ್ಚಿನ ಅನುಕೂಲವಾಗಲಿದೆ. ಶೆಟ್ಟಿಹಳ್ಳಿ ಕೆರೆ, ಮರಳೂರು ಕೆರೆ, ದೇವರಾಯಪಟ್ಟಣ, ಗಂಗಸಂದ್ರ ಕೆರೆಗಳನ್ನು ತುಂಬಿಸಿದರೆ, ವರ್ಷವಿಡಿ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಬಹುದು. ಅಲ್ಲದೆ ಅಂರ್ತಜಲವೂ ವೃದ್ದಿಯಾಗಲಿದೆ. ಈ ನಿಟ್ಟಿನಲ್ಲಿ ಸ್ಮಾರ್ಟ್‍ಸಿಟಿ ಅಧಿಕಾರಿಗಳೊಂದಿಗೆ ಮುಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಅಲ್ಲದೆ ಸಂಬಂಧ ಪಟ್ಟ ಸಚಿವರೊಂದಿಗೂ ಸಹ ಮಾತುಕತೆ ನಡೆಸಲಾಗುವುದು ಎಂದು ನುಡಿದರು.
     ತುಮಕೂರು ಸ್ಮಾರ್ಟ್ ಸಿಟಿಯ ಎಲ್ಲಾ ಅಧ್ವಾನಗಳಿಗೆ ತೆರೆ ಎಳೆದು ತುಮಕೂರು ನಗರದ ಜನತೆಗೆ ಪೂರಕವಾದ ಯೋಜನೆಗಳನ್ನು ಕೈಗೊಳ್ಳಲು ದಿಶಾ ಸಮಿತಿ ಸಭೆಗಳಲ್ಲಿ ದಿಟ್ಟ ಕ್ರಮವನ್ನು ತೆಗೆದುಕೊಳ್ಳಲಾಗಿದೆ., ತಪ್ಪು ಮಾಡಿದವರಿಗೆ ನಿಯಾಮಾನುಸಾರವಾಗಿ ಕ್ರಮ ಕೈಗೊಳ್ಳಲು ಕೇಂದ್ರ ಮತತು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳಿಗಾಗಲಿ ಶಿಫಾರಸ್ಸು ಮಾಡಲಾಗುವುದು. ಯೋಜನೆಯ ಆಯ್ಕೆ ವಿಚಾರದಲ್ಲಿ ಸ್ಮಾರ್ಟ್ ಸಿಟಿ ಪ್ರಪೋಸಲ್ ತಯಾರಿಸುವಾಗ ಸುಳ್ಳು ಮಾಹಿತಿ ನೀಡಿದವರ ಮೇಲೂ ಕ್ರಮ ಕೈಗೊಳ್ಳಲಾಗುವುದು.
       ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಮಾರ್ಗದರ್ಶಿ ಸೂತ್ರದ ಅನ್ವಯವೇ ಎಲ್ಲಾ ಕಾಮಗಾರಿಗಳು ನಡೆಯಬೇಕಾಗಿದ್ದು, ಈ ಸಮಿತಿಯೇ ಯೋಜನೆಯ ಅಗತ್ಯದ ವಿವರವಾಗಿ ಚರ್ಚಿಸಿ ಸಲಹೆ ನೀಡಬೇಕು. ಎಸ್‍ಪಿವಿ ಎಂಬುದು ಕೇವಲ ಇಂಪ್ಲಿಮೆಂಟೇಶನ್ ಏಜೆನ್ಸಿಯೇ ಹೊರತು ಅವರಿಗೆ ಬಂದ ಯೋಜನೆಯನ್ನು ಆಯ್ಕೆ ಮಾಡಲು ಅಧಿಕಾರ ನೀಡಿಲ್ಲ. ಜನರಿಗೆ ಏನು ಅವಶ್ಯಕತೆ ಇದೆಯೇ ಅದನ್ನು ನೀಡದರೆ ಮಾತ್ರ ಅಭಿವೃದ್ಧಿ ಆಗಲಿದೆ. ಇದೇ ಡಿ.16ರಂದು ಸಭೆ ಕರೆಯಲಾಗಿದ್ದು, ಸಭೆಯ ದಿನಾಂಕದೊಳಗೆ ವರದಿ ನೀಡಲು ತಾಂತ್ರಿಕ ಸಮಿತಿಗೆ ಸೂಚನೆ ನೀಡಲಾಗಿದೆ. ಈ ಸಭೆಯಲ್ಲಿ ಉಸ್ತುವಾರಿ ಕಾರ್ಯದರ್ಶಿಯವರು ಕೂಡ ಭಾಗವಹಿಸಲಿದ್ದು, ಆಗಿರುವ ಆನಾಹುತಗಳನ್ನು ಸರಿಪಡಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.
ಎಂಎಸ್‍ಎಂಇ ಟೆಕ್ನಾಲಜಿ ಸೆಂಟರ್
       ತುಮಕೂರು ನಗರದ ಕೇಂದ್ರೀಯ ವಿದ್ಯಾಲಯದ ಬಳಿ ಇರುವ ಸುಮಾರು 15 ಎಕರೆ ಪ್ರದೇಶದಲ್ಲಿ ಎಂಎಸ್‍ಎಂಇ ಸೆಂಟರ್ ತೆರೆಯಲು ಈಗಾಗಲೇ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದೆ. ಇದಕ್ಕಾಗಿ ಹಲವು ತಿಂಗಳ ಕಾಲ ಚರ್ಚೆ ನಡೆಸಿ ವಿವಿಧ ವೈಜ್ಞಾನಿಕ ಯೋಜನೆಗಳನ್ನು ಒಳಗೊಂಡ ಸ್ಕಿಲ್ ಸಿಟಿ ಮಾಡಲು ಯೋಜನೆ ರೂಪಿಸಲಾಗಿದೆ. ಆದರೆ ಇದನ್ನು ಶಾಲಿನಿ ರಜನೀಶ್‍ರವರು  ಜಾರಿಗೊಳಿಸಿದ್ದಾರೆ ಎಂಬುದಾಗಿ ಬಿಂಬಿಸಿದ್ದು ಸರಿಯಲ್ಲ.
       ಈಗಾಗಲೇ ಎಂಎಸ್‍ಎಂಇ ಸೆಂಟರ್‍ನ ಶಂಕುಸ್ಥಾಪನೆಗೆ ಕೇಂದ್ರದ ಸಚಿವರಾದ ನಿತೀನ್ ಗಡ್ಕರಿ ಅವರನ್ನು ಅಹ್ವಾನಿಸಲಾಗುವುದು. ಇದರ ಬಗ್ಗೆ ವಿವರವಾದ ಪ್ರಸ್ತಾವನೆ ಸಲ್ಲಿಸಲು ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಜಿ.ಎಸ್.ಬಸವರಾಜು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕುಂದರನಹಳ್ಳಿ ರಮೇಶ್, ರಾಮಚಂದ್ರಪ್ಪ, ರವೀಗೌಡ ಮತ್ತಿತರರು ಉಪಸ್ಥಿತರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link